ಮಂಗಳೂರು : ಸರಯೂ ಬಾಲ ಯಕ್ಷವೃಂದ ಕೋಡಿಕಲ್ ಇದರ ರಜತ ಮಹೋತ್ಸವ ಸಂಭ್ರಮ ಸಮಾರಂಭದ ಅಂಗವಾಗಿ ಆಯೋಜಿಸಿದ 15 ದಿನಗಳ ಯಕ್ಷಪಕ್ಷ – ರಜತ ಸರಯೂ ಕಾರ್ಯಕ್ರಮದ 11ನೇ ದಿನದ ಕಾರ್ಯಕ್ರಮ ದಿನಾಂಕ 28ಮೇ 2025ರ ಬುಧವಾರದಂದು ಕದ್ರಿ ದೇವಳದ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಉದ್ಯಮಿ, ಕಲಾಪೋಷಕ ಸಿ. ಎಸ್. ಭಂಡಾರಿ ಮಾತನಾಡಿ “ಇಂದು ಯಕ್ಷಗಾನವು ಪಂಡಿತ-ಪಾಮರರೆನ್ನುವ ಬೇಧವಿಲ್ಲದೇ ಎಲ್ಲರನ್ನೂ ಸುಲಭವಾಗಿ ತಲುಪುವ ಕಲೆಯಾಗಿದೆ. ಎಳೆಯ ಚಿಣ್ಣರೂ ಇದರ ನಾಟ್ಯಗಾರಿಕೆ ಮಾತುಗಾರಿಕೆಯನ್ನು ಕೈಗೂಡಿಸಿಕೊಂಡು ಬೆಳೆಯುತ್ತಿದ್ದಾರೆ. ಇದು ಈ ರಂಗದಲ್ಲಿ ಉತ್ತಮ ಬೆಳವಣಿಗೆ ಎಂಬುದು ಸಂತಸದ ವಿಷಯ. ಕಲಾ ಗೌರವ ಎಲ್ಲೆಡೆ ತುಂಬಿ ಹರಿಯಲಿ” ಎಂದು ಹಾರೈಸಿದರು.
ಸಾಧಕ ಸನ್ಮಾನವನ್ನು ಸ್ವೀಕರಿಸಿದ ನಿವೃತ್ತ ಶಿಕ್ಷಕ, ಯಕ್ಷಲಹರಿ (ರಿ) ಸಂಸ್ಥೆಯ ಕಾರ್ಯದರ್ಶಿ ಕಲ್ಲ ಮುಂಡ್ಕೂರು ವಸಂತ ದೇವಾಡಿಗ ಮಾತನಾಡಿ “ಯಕ್ಷಗಾನ,u ನಾಟಕವೇ ಮೊದಲಾದ ಸಾಂಸ್ಕೃತಿಕ ರಂಗದಲ್ಲಿ ನಿರಂತರ ಸೇವೆಗಳನ್ನು ಮಾಡುತ್ತಾ ಬರುತ್ತಿದ್ದೇನೆ. ಇದರಲ್ಲಿ ತುಂಬಾ ವಿಚಾರಗಳನ್ನು ತಿಳಿದಿದ್ದೇನೆ. ಇದು ನನಗೆ ಪ್ರಿಯವಾದ ಕಲೆಯೂ ಆಗಿದೆ. ಸರಯೂ ಸಂಸ್ಥೆಯ ಸನ್ಮಾನ ನನಗತ್ಯಂತ ಸಂತಸ ತಂದಿದೆ” ಎಂದರು.
ಗೌತಂ ಭಂಡಾರಿ, ಪೂರ್ಣಿಮಾ ಪ್ರಭಾಕರ್ ರಾವ್ ಪೇಜಾವರ್, ಮಧುಸೂದನ ವರ್ಕಾಡಿ, ಸುಧಾಕರ್ ಪೇಜಾವರ್, ವಿಶ್ವಾಸ್, ಅಕ್ಷಯ ಹಾಗೂ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಭಾಕಾರ್ಯಕ್ರಮದ ಬಳಿಕ ರಾಣಿ ಶಶಿಪ್ರಭ ಯಕ್ಷಗಾನ ಪ್ರದರ್ಶನಗೊಂಡಿತು.