ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ದಿನಾಂಕ 27 ಮತ್ತು 28 ಮಾರ್ಚ್ 2026ರಂದು ಬಿ.ಸಿ. ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಲಿರುವ 28ನೇ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ, ಪತ್ರಕರ್ತ ಚಿದಂಬರ ಬೈಕಂಪಾಡಿ ಆಯ್ಕೆಯಾಗಿದ್ದಾರೆ.
ಕನ್ನಡದ ಮಹತ್ವದ ಕವಿಯಾಗಿ ಗುರುತಿಸಿಕೊಂಡಿರುವ ಚಿದಂಬರ ಬೈಕಂಪಾಡಿ ‘ಬೇಗುದಿ’, ‘ವಾಸ್ತವದ ಲೆಕ್ಕಾಚಾರ’, ‘ಕಪ್ಪು ಹುಡುಗ’ ಕವನ ಸಂಕಲನ ಪ್ರಕಟಿಸಿದ್ದು, ‘ತುಳು ಪ್ರೇಮ ಗೀತೆಗಳು’ ಅವರ ಧ್ವನಿ ಸುರುಳಿಯಾಗಿ ಹೊರಬಂದಿದೆ. ಪತ್ರಕರ್ತ ಹಾಗೂ ಲೇಖಕರಾಗಿ ದೀರ್ಘ ಕಾಲ ಸೇವೆ ಸಲ್ಲಿಸಿದ್ದು, ಮುಂಗಾರು ಹಾಗೂ ಕನ್ನಡ ಪ್ರಭ ಪತ್ರಿಕೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ‘ಇದು ಮುಂಗಾರು’ ‘ಪ.ಗೋ. ಪ್ರಪಂಚ’ ಪತ್ರಿಕೋದ್ಯಮ ಕುರಿತ ಪುಸ್ತಕ, ‘ರಾಜಕೀಯ ಒಳಸುಳಿಗಳು’, ಲೇಖನಗಳು ಸೇರಿದಂತೆ ಹಲವು ಕೃತಿ ಹೊರತಂದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಅವಾರ್ಡ್, ಡಾ. ಕೋಟ ಶಿವರಾಮ ಕಾರಂತ ಪ್ರಶಸ್ತಿ, ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿಗಳಿಗೆ ಇವರು ಭಾಜನರಾಗಿದ್ದರು.
