ಉಡುಪಿ : ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು ಘಟಕ, ಐ. ಕ್ಯು. ಎಸಿ. ಹಾಗೂ ಕನ್ನಡ ವಿಭಾಗ ಎಂ. ಜಿ. ಎಂ. ಕಾಲೇಜು ಉಡುಪಿ ಇದರ ಆಶ್ರಯದಲ್ಲಿ ದಿ. ಡಾ. ಉಪ್ಪಂಗಳ ರಾಮ ಭಟ್ ನೆನಪು, ಪುಸ್ತಕ ವಿತರಣೆ ಹಾಗೂ ಪ್ರಸಿದ್ಧ ಕವಿ ಡುಂಡಿರಾಜ್ ಅವರೊಂದಿಗೆ ಮಾತುಕತೆ ಕಾರ್ಯಕ್ರಮ ದಿನಾಂಕ 22 ಮಾರ್ಚ್ 2025ರ ಶನಿವಾರ ಎಂ. ಜಿ. ಎಂ. ಕಾಲೇಜಿನ ಎ. ವಿ. ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಖ್ಯಾತ ಚುಟುಕು ಕವಿ, ಸಾಹಿತಿ ಎಚ್. ಡುಂಡಿರಾಜ್ ಮಾತನಾಡಿ “ಶಿಕ್ಷಣ ನಮಗೆ ಬದುಕಲು ದಾರಿ ತೋರಿಸಿದರೆ ಸಾಹಿತ್ಯ ಮತ್ತು ಕಲೆ ನಮ್ಮ ವ್ಯಕ್ತಿತ್ವ ವಿಕಸನಕ್ಕೆ ದಾರಿ ತೋರಿಸಿದೆ. ಕವನಗಳು ಹುಟ್ಟುವುದು ಆಕಸ್ಮಿಕವಾದರೂ ಕೂಡ, ಕವಿಯ ಭಾವನೆಗಳು ಅದರಲ್ಲಿ ಅಡಕವಾಗಿರುತ್ತವೆ. ಕವಿಗೆ ಸರಿಯಾದ ಕಾವ್ಯ ಪ್ರಜ್ಞೆಯಿದ್ದಾಗ ಮಾತ್ರ ಉತ್ತಮ ಕವನಗಳು ಹಾಗೂ ಸಾಹಿತ್ಯ ಬರಲು ಸಾಧ್ಯ. ವಿದ್ಯಾರ್ಥಿಗಳು ಓದುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಕವನಗಳನ್ನು ಬರೆಯುವ ಹವ್ಯಾಸ ಈಗಿನಿಂದಲೇ ರೂಡಿಸಿಕೊಂಡಾಗ ಮುಂದಿನ ದಿನಗಳಲ್ಲಿ ಉತ್ತಮ ಸಾಹಿತಿಯಾಗಿ ಗುರುತಿಸಿಕೊಳ್ಳಬಹುದು. ಚುಟುಕುಗಳು ಸಣ್ಣ ಸಣ್ಣ ಪದವಾಗಿದ್ದರೂ ಕೂಡ ಅನೇಕ ರೀತಿಯ ಗಂಭೀರವಾದ ವಿಚಾರಗಳು ಹಾಗೂ ಹಾಸ್ಯದ ವಿಡಂಬನೆಯೊಂದಿಗೆ ಕೂಡಿರುವುದರಿಂದ ಹೆಚ್ಚಿನವರು ಅದನ್ನು ಇಷ್ಟಪಡುತ್ತಾರೆ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಮಾತನಾಡಿ “ಈ ರೀತಿ ಕಾರ್ಯಕ್ರಮಗಳು ನಮ್ಮ ಕಾಲೇಜಿನಲ್ಲಿ ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಪ್ರಜ್ಞೆ ಹೆಚ್ಚಾಗಲು ಪೂರಕ” ಎಂದರು.
ವೇದಿಕೆಯಲ್ಲಿ ಉಪ ಪ್ರಾಂಶುಪಾಲ ಡಾ. ವಿಶ್ವನಾಥ್ ಪೈ, ಐ. ಕ್ಯೂ. ಎಸಿ. ಸಂಯೋಜಿಕೆ ಶೈಲಜಾ, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಪುತ್ತಿ ವಸಂತ್ ಕುಮಾರ್, ಕ. ಸಾ. ಪ. ಉಡುಪಿ ತಾಲೂಕು ಗೌರವ ಕಾರ್ಯದರ್ಶಿ ಜನಾದ೯ನ್ ಕೊಡವೂರು ಮುಂತಾದವರು ಉಪಸ್ಥಿತರಿದ್ದರು.
ಕ. ಸಾ. ಪ. ಉಡುಪಿ ತಾಲೂಕು ಅಧ್ಯಕ್ಷರಾದ ರವಿರಾಜ್ ಎಚ್.ಪಿ ಸ್ವಾಗತಿಸಿ, ಪ್ರಸ್ತಾವನೆಗೈದು, ತಾಲೂಕು ಸಂ. ಕಾಯ೯ದಶಿ೯ ರಾಘವೇಂದ್ರ ಪ್ರಭು ಕವಾ೯ಲು ನಿರೂಪಿಸಿ, ಸಾಮಾಜಿಕ ಜಾಲತಾಣ ವಿಭಾಗದ ಸಿದ್ಧಬಸಯ್ಯಸ್ವಾಮಿ ಚಿಕ್ಕಮಠ ವಂದಿಸಿದರು. ಈ ಸಂದರ್ಭ ಡಾ. ಉಪ್ಪಂಗಳ ರಾಮ್ ಭಟ್ ಇವರ ಕೃತಿಗಳನ್ನು ಶಂಕರಿ ರಾಮ ಭಟ್ ವಿದ್ಯಾರ್ಥಿಗಳಿಗೆ
ವಿತರಿಸಿ ಶುಭ ಹಾರೈಸಿದರು.