Subscribe to Updates

    Get the latest creative news from FooBar about art, design and business.

    What's Hot

    ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ‘ವಿವೇಕಸ್ಮೃತಿ’ ಉಪನ್ಯಾಸ ಕಾರ್ಯಕ್ರಮ

    June 12, 2025

    ವಿಶ್ವಕರ್ಮ ಒಕ್ಕೂಟದಿಂದ ಸಣ್ಣ ಕಥೆ – ಕವನ ಸ್ಪರ್ಧೆ – 2025 | 30 ಜೂನ್ ಕೊನೆಯ ದಿನ

    June 12, 2025

    ಮೈಸೂರಿನಲ್ಲಿ ಪ್ರೇರಣಾ ಕಲಾ ಕಾರ್ಯಾಗಾರ | ಜೂನ್ 28

    June 12, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕೊಡಗು ಪತ್ರಕರ್ತರ ಸಂಘದಿಂದ ‘ಬೂಕರ್ ಪ್ರಶಸ್ತಿ’ ವಿಜೇತ ಲೇಖಕಿಯೊಂದಿಗೆ ಸಂವಾದ
    Literature

    ಕೊಡಗು ಪತ್ರಕರ್ತರ ಸಂಘದಿಂದ ‘ಬೂಕರ್ ಪ್ರಶಸ್ತಿ’ ವಿಜೇತ ಲೇಖಕಿಯೊಂದಿಗೆ ಸಂವಾದ

    June 11, 2025No Comments4 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಡಿಕೇರಿ : ಕೊಡಗು ಪತ್ರಕರ್ತರ ಸಂಘದ ವತಿಯಿಂದ ನಗರದ ಲಾಲಿ ಪೆಟಲ್ ಸಭಾಂಗಣದಲ್ಲಿ ದಿನಾಂಕ 08 ಜೂನ್ 2025ರಂದು ಆಯೋಜಿತ ಪತ್ರಕರ್ತೆ ದೀಪಾ ಭಾಸ್ತಿಗೆ ಅಭಿನಂದನಾ ಸಮಾರಂಭ ಮತ್ತು ಸಂವಾದ ಕಾರ್ಯಕ್ರಮ ನಡೆಯಿತು.

    ಈ ಸಮಾರಂಭದಲ್ಲಿ ಪಾಲ್ಗೊಂಡು ಪ್ರತಿಷ್ಠಿತ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದ ಮಡಿಕೇರಿಯ ಲೇಖಕಿ ದೀಪಾ ಭಾಸ್ತಿ ಮಾತನಾಡಿ “ಪದಗಳ ತರ್ಜುಮೆಗಿಂತ ಭಾವನೆಗಳನ್ನು ದಾಖಲಿಸುವ ಭಾವಾನುವಾದ ಪ್ರಕಾರವು, ಅನುವಾದ ಸಾಹಿತ್ಯದಲ್ಲಿ ಮಹತ್ವದ್ದಾಗಿರುತ್ತದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

    ಬಾನು ಮುಷ್ತಾಕ್ ಇವರ ‘ಎದೆಯ ಹಣತೆ’ ಕೃತಿ ಸೇರಿದಂತೆ 6 ಕಥಾಸಂಕಲನಗಳಲ್ಲಿನ 12 ಕಥೆಗಳನ್ನು ಆಯ್ಕೆ ಮಾಡಿ ಇಂಗ್ಲೀಷ್ ನಲ್ಲಿ ಬರೆದ ‘ಹಾರ್ಟ್ ಲ್ಯಾಂಪ್’ ಕೃತಿ ಸಂಬಂಧಿತ ಮಾಹಿತಿ ನೀಡಿದ ದೀಪಾ ಭಾಸ್ತಿ “ಕನ್ನಡದಿಂದ ಇಂಗ್ಲೀಷ್ ಗೆ ಅನುವಾದ ಮಾಡುವಾಗ ಖಂಡಿತವಾಗಿಯೂ ಪದಗಳನ್ನು ತರ್ಜುಮೆ ಮಾಡಬಾರದು. ಇದರ ಬದಲಿಗೆ ಮೂಲಕೃತಿಯಲ್ಲಿನ ಪದಗಳ ಭಾವವನ್ನು ಅರ್ಥೈಸಿಕೊಂಡು ತನ್ನದೇ ಶೈಲಿಯಲ್ಲಿ ಭಾವಾನುವಾದ ಮಾಡಿದರಷ್ಟೇ ಅನುವಾದ ಸಾಹಿತ್ಯಕ್ಕೆ ಗಟ್ಟಿತನ ದೊರಕುತ್ತದೆ. ಪಂಪ, ಕುವೆಂಪು ಸೇರಿದಂತೆ ಕನ್ನಡದ ಅನೇಕ ಸಾಹಿತಿಗಳ ಅತ್ಯಂತ ಶ್ರೇಷ್ಠ ಕೃತಿಗಳು ಇನ್ನಾದರೂ ಇಂಗ್ಲೀಷಿಗೆ ಅನುವಾದಗೊಂಡು ಜಾಗತಿಕವಾಗಿ ಓದುಗರನ್ನು ತಲುಪಬೇಕಾದ ಅಗತ್ಯವಿದೆ. 1,500 ವರ್ಷಗಳ ಇತಿಹಾಸವಿರುವ ಕನ್ನಡದ ಕೃತಿಗಳು ವಿಶ್ವವ್ಯಾಪಿ ಕನ್ನಡ ನೆಲದ ಸಾಹಿತ್ಯ ಕಂಪು ಬೀರಬೇಕಾಗಿದೆ. ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಮತ್ತಷ್ಟು ಹೆಚ್ಚಿಸಲು ಇತರ ಭಾಷೆಗಳ ಶ್ರೇಷ್ಠ ಕೃತಿಗಳು ಕನ್ನಡಕ್ಕೆ ಅನುವಾದವಾಗಬೇಕಾದ ಅಗತ್ಯತೆಯಿದೆ. ಡಾ. ಶಿವರಾಮ ಕಾರಂತರ ‘ಅದೇ ಊರು – ಅದೇ ಮರ’ ಕೃತಿ ಮತ್ತು ಕೊಡಗಿನ ಗೌರಮ್ಮ ಅವರ ಕಥೆಗಳನ್ನು ಇಂಗ್ಲೀಷಿಗೆ ಅನುವಾದಿಸಿ ಅದು ಖ್ಯಾತಿ ಪಡೆಯುತ್ತಿದ್ದ ಸಂದರ್ಭವೇ ಬಾನು ಮುಷ್ತಾಕ್ ತನ್ನ ಸ್ನೇಹಿತೆಯ ಮೂಲಕ ನನ್ನನ್ನು ಸಂಪರ್ಕಿಸಿ ತನ್ನ ಕಥೆಗಳನ್ನು ಇಂಗ್ಲೀಷಿಗೆ ಅನುವಾದಿಸುವಂತೆ ಕೋರಿದ್ದರು. ಹೀಗಾಗಿಯೇ ಅವರ ಎಲ್ಲಾ ಕಥಾಸಂಕಲನ ಓದಿ ತನಗೆ ಇಷ್ಟವಾದ 12 ಕಥೆಗಳನ್ನು ಆಯ್ದಕೊಂಡು ‘ಹಾರ್ಟ್ ಲ್ಯಾಂಪ್’ ಕೃತಿಯಾಗಿಸಿದೆ. ಅನುವಾದಕಳಾಗಿ ತನ್ನ ಮನಸ್ಸಿಗೆ ಇಷ್ಟವಾದ ಕಥೆಗಳನ್ನು ಮಾತ್ರ ಆಯ್ದುಕೊಂಡಿದ್ದೆ. ಹಲವು ಕಥೆಗಳು ಸುಂದರವಾಗಿದ್ದರೂ ಇಂಗ್ಲೀಷ್ ಓದುಗನಿಗೆ ಜಾನಪದ ಘಟನಾವಳಿಗಳ ಕಥಾ ಹಂದರವನ್ನು ತಲುಪಿಸುವುದು ಕಷ್ಟ ಎಂದನ್ನಿಸಿದ ಕಾರಣದಿಂದ ಅಂಥ ಕಥೆಗಳನ್ನು ಅನುವಾದದಿಂದ ಕೈಬಿಟ್ಟಿದ್ದೆ. ಆ ಸಂದರ್ಭ ಮಾರುಕಟ್ಟೆಗೆ ಇಂಥ ಕಥೆಗಳು ಸಲ್ಲುತ್ತವೆಯೇ ಎಂದು ಯೋಚಿಸುವ ಗೊಡವೆಗೆ ಹೋಗಲಿಲ್ಲ.

    ಬಾನು ಮುಷ್ತಾಕ್ ಅವರ ಕಥೆಗಳಲ್ಲಿ ಹೆಚ್ಚಾಗಿ ಮುಸ್ಲಿಮ್ ಸಮುದಾಯದ ಸಂಸ್ಕೃತಿ, ಆಚಾರಗಳ ಉಲ್ಲೇಖ ಇದ್ದುದರಿಂದಾಗಿ ಆ ಬಗ್ಗೆ ಕೂಲಂಕುಶವಾಗಿ ಅಧ್ಯಯನ ಮಾಡಿಯೇ ‘ಹಾರ್ಟ್ ಲ್ಯಾಂಪ್’ ಕೃತಿಯಲ್ಲಿ ಮೂಲ ಕಥೆಗಳಲ್ಲಿನ ಸಂಸ್ಕೃತಿ, ಆಚಾರ ವಿಚಾರಕ್ಕೆ ಧಕ್ಕೆಯಾಗದಂತೆ ಅನುವಾದ ಮಾಡಬೇಕಾದ ಸವಾಲು ತನಗಿತ್ತು. ಬೂಕ‌ರ್ ಪ್ರಶಸ್ತಿಯ ಅಂತಿಮ ಹಂತದಲ್ಲಿ ಇಟಾಲಿಯನ್, ಡ್ಯಾನಿಷ್, ಫ್ರೆಂಚ್ ಭಾಷೆಗಳ ಕೃತಿಗಳೂ ಇದ್ದವು. ವಿಶ್ವದ ಪ್ರಸಿದ್ಧ ಅನುವಾದಕರಾದ ಸೋಫಿ ಹಗ್ಲೀಸ್ ಅವರ ಕೃತಿಯೂ ಅಲ್ಲಿತ್ತು. ಹೀಗಿದ್ದರೂ ತೀರ್ಪುಗಾರರು ಸರಳ, ಮನಸ್ಸಿಗೆ ಮುಟ್ಟುವ ಭಾಷಾ ಮತ್ತು ಭಾವಾನುವಾದ ಮೆಚ್ಚಿಕೊಂಡು ‘ಹಾರ್ಟ್ ಲ್ಯಾಂಪ್’ನ್ನು ಪ್ರಶಸ್ತಿಗೆ ಆಯ್ಕೆ ಮಾಡಿದರು. ಚಿತ್ರರಂಗದಲ್ಲಿ ಆಸ್ಕರ್ ನಂತೆಯೇ ಸಾಹಿತ್ಯಲೋಕದಲ್ಲಿ ಬೂಕರ್ ಪ್ರಶಸ್ತಿಗೆ ಮಹತ್ವವಿದೆ, ಬೂಕರ್ ಪ್ರಶಸ್ತಿ ಲಭಿಸಿದ ಬಳಿಕ ಆನೇಕರು ತಮ್ಮ ಕೃತಿಗಳ ಅನುವಾದಕ್ಕಾಗಿ ಸಂಪರ್ಕ ಮಾಡುತ್ತಿದ್ದಾರೆ. ಆದರೆ ಇನ್ನೊಂದು ವರ್ಷ ಹಾರ್ಟ್ ಲ್ಯಾಂಪ್ ಕೃತಿಯ ಪ್ರಚಾರಕ್ಕಾಗಿ ಭಾರತದ ವಿವಿಧೆಡೆ ಸೇರಿದಂತೆ ಜಗತ್ತಿನ ಹಲವಾರು ಕಡೆ ಸಾಹಿತ್ಯ ಉತ್ಸವಗಳಿಗೆ ತೆರಳಬೇಕಾಗಿದೆ. ಯಾವುದೇ ಕೃತಿ ರಚನೆಗೂ ಸಮಯದ ಕೊರತೆಯಿದ್ದು, ಭಾವಾನುವಾದಕ್ಕೆ ಕನಿಷ್ಠ 2-3 ವರ್ಷಗಳಾದರೂ ಸಮಯಾವಕಾಶ ಅಗತ್ಯವಾಗಿದೆ. ಹೆಗ್ಗೋಡು ಗ್ರಾಮದ ಸಮುದ್ಯತಾ ವೆಂಕಟರಾಮು ಅವರು ರಚಿಸಿರುವ ‘ಇದೇ ಅಂದರೆ ಇದೆ, ಇಲ್ಲ ಎಂದರೆ ಇಲ್ಲ’ ಕೃತಿಯ ಇಂಗ್ಲೀಷ್ ಅನುದಾದ ಸಾಗಿದ್ದು, ಇದು ಕೂಡ ಬಹಳ ಸೊಗಸಾದ ಕೃತಿಯಾಗಲಿದೆ. ಅನುವಾದ ಸಾಹಿತ್ಯ ತಾನು ಮೆಚ್ಚಿಕೊಂಡು ಬರೆದ್ದದ್ದಲ್ಲ. ಸ್ವಂತ ಕೃತಿಯ ರಚನೆ ಕಾರ್ಯವೂ ಬಾಕಿಯಿದೆ. ಪ್ರಬಂಧ, ಸಣ್ಣ ಕಥೆಗಳು ತನ್ನ ಮೆಚ್ಚಿನ ಸಾಹಿತ್ಯವಾಗಿದೆ.

    ಆಧುನಿಕ ತಂತ್ರಜ್ಞಾನದ ಮಾಧ್ಯಮಗಳಿರುವ ಈ ಕಾಲದಲ್ಲಿ ಖಂಡಿತವಾಗಿಯೂ ವಿಶ್ವವ್ಯಾಪಿ ಓದುಗರ ಸಂಖ್ಯೆ ಇಳಿಮುಖವಾಗಿಲ್ಲ. ಬದಲಿಗೆ ಜ್ಞಾನ ಪಡೆಯುವ ನಿಟ್ಟಿನಲ್ಲಿ ಉತ್ತಮ ಕೃತಿಗಳನ್ನು ಓದುವವರ ಸಂಖ್ಯೆ ಹೆಚ್ಚಾಗುತ್ತಲೇ ಇರುವುದು, ಸಾಹಿತ್ಯ ಲೋಕಕ್ಕಿರುವ ಅತೀ ದೊಡ್ಡ ಭರವಸೆಯಾಗಿದೆ. ಮೊದಲಿನ ಕಾಲದಲ್ಲಿ ಅನುವಾದಕರಿಗೆ ಅಷ್ಟೇನು ಮಹತ್ವ ಇರುತ್ತಿರಲಿಲ್ಲ. ಆದರೆ, ಬದಲಾದ ಸಾಹಿತ್ಯ ಲೋಕದಲ್ಲಿ ಮೂಲಲೇಖಕರಷ್ಟೇ ಅನುವಾದಕರೂ ಪ್ರಾಶಸ್ತ್ಯ ಪಡೆಯುತ್ತಾರೆ. ಈ ಕಾರಣದಿಂದಾಗಿಯೇ ಬೂಕರ್ ಪ್ರಶಸ್ತಿಯನ್ನು ಅನುದಾಕರಿಗಾಗಿಯೇ ಮೀಸಲಿಡಲಾಗಿದೆ. ‘ಬೂಕರ್ ಪ್ರಶಸ್ತಿ’ ದೊರಕುವ ನಿರೀಕ್ಷೆ ಖಂಡಿತಾ ಇರಲಿಲ್ಲ. ಪ್ರಕಾಶಕರ ಆಹ್ವಾನದ ಮೇರೆಗೆ ಲಂಡನ್ ನಲ್ಲಿ ಆಯೋಜಿತ ಪ್ರಶಸ್ತಿ ವಿತರಣಾ ಸಮಾರಂಭಕ್ಕೆ ತೆರಳಿದ್ದೆ. ಪ್ರಶಸ್ತಿ ಘೋಷಣೆಯಾದ ಕ್ಷಣ ಅಲ್ಲಿನ ಸಂಭ್ರಮದ ವಾತಾವರಣದಲ್ಲಿ ಗಲಿಬಿಲಿಗೊಳಗಾದೆ. ನಂತರ ಭಾಷಣದಲ್ಲಿ ಡಾ. ರಾಜ್ ಕುಮಾರ್ ಅವರ ಜೇನಿನ ಹೊಳೆಯೋ ಹಾಡನ್ನು ಆ ಕ್ಷಣದಲ್ಲಿ ಮನಸ್ಸಿಗೆ ತೋಚಿದಂತೆ ಸಾಂದರ್ಭಿಕವಾಗಿ ಉಲ್ಲೇಖಿಸಿದೆ. ಆ ಹಾಡು ಮತ್ತು ಡಾ. ರಾಜ್ ಕನ್ನಡದ ಪ್ರತಿನಿಧಿತ್ವ ಎಂದೆನ್ನಿಸಿತ್ತು. ಹೀಗಾಗಿ ಅಲ್ಲಿ ಹೇಳಿದ ಹಾಡು ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆಯುವ ಮೂಲಕ ನನ್ನ ಉದ್ದೇಶ ಸಾರ್ಥಕವಾದಂತಾಯಿತು” ಎಂದು ಹೇಳಿದರು.

    ತನ್ನ ಅಜ್ಜ ಡಾ. ನಂಜುಂಡೇಶ್ವರ ಅವರ ಗ್ರಂಥಾಲಯದಲ್ಲಿದ್ದ ಅನೇಕ ಪುಸ್ತಕಗಳು ಬಾಲ್ಯದಲ್ಲಿಯೇ ಓದುವ ಆಸಕ್ತಿ ಹುಟ್ಟುಹಾಕಿತ್ತು. ತನ್ನ ದೊಡ್ಡಮ್ಮ ಕೂಡ ಲೇಖಕಿಯಾಗಿದ್ದು ತನಗೂ ಸ್ಪೂರ್ತಿ ನೀಡಿತ್ತು. ಮಡಿಕೇರಿಯ ಕೊಡಗು ವಿದ್ಯಾಲಯಲ್ಲಿ ದಿಕ್ಸೂಚಿ ವಾರ್ತಾ ಸಂಚಿಕೆ ಮೂಲಕ ಸಣ್ಣ ಪುಟ್ಟ ಕವನಗಳ ಮೂಲಕ ಬರವಣಿಗೆ ಪ್ರಾರಂಭಿಸಿದ್ದೆ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು, ಮಂಗಳ ಗಂಗೋತ್ರಿಯ ಪತ್ರಿಕೋದ್ಯಮ ಶಿಕ್ಷಣವೂ ಸಾಹಿತ್ಯದತ್ತ ಪ್ರೇರೇಪಿಸಿತ್ತು. ಇಂಗ್ಲೀಷ್ ಭಾಷಾ ಶಿಕ್ಷಣ ಪಡೆದ ಕಾರಣ ಇಂಗ್ಲೀಷ್ ಕೃತಿಗಳತ್ತ ಹೆಚ್ಚು ಅಕರ್ಷಿತನಾದೆ. ಹೀಗಿದ್ದರೂ ಕನ್ನಡದ ಪ್ರಮುಖ ಕೃತಿಗಳನ್ನು ಓದಿಕೊಂಡಿದ್ದೇನೆ. ಅಪ್ಪ ಪ್ರಕಾಶ್, ತಾಯಿ ಸುಧಾ ಭಾಸ್ತಿ ಮತ್ತು ಪತಿ ಚೆಟ್ಟೀರ ನಾಣಯ್ಯ ನೀಡುತ್ತಿರುವ ಪ್ರೋತ್ಸಾಹ, ಬೆಂಬಲ ಮರೆಯಲಸಾಧ್ಯ. ಪತಿಯ ಮನೆಯ ವಹಿವಾಟು ನಿರ್ವಹಿಸುತ್ತಿರುವುದರಿಂದಾಗಿ ತನ್ನ ಸಾಹಿತ್ಯಿಕ ಕಾರ್ಯ ಸುಲಿತವಾಗಲು ಸಾಧ್ಯವಾಗಿದೆ.

    ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಮಾತನಾಡಿ, “ಹಸಿರ ಸಿರಿ ನಡುವೆ ತನ್ನ ಪಾಡಿಗೆ ತಾನು ಸಾಹಿತ್ಯ ರಚನೆಯಲ್ಲಿ ತೊಡಗಿದ್ದ ದೀಪಾ ಅವರ ಶ್ರಮಕ್ಕೆ ಶ್ಲಾಘನೀಯ ಪ್ರತಿಫಲ ‘ಬೂಕರ್ ಪ್ರಶಸ್ತಿ’ ಮೂಲಕ ದೊರಕಿದೆ. ಈ ಮೂಲಕ ಕೊಡಗು ಜಿಲ್ಲೆಯೂ ವಿಶ್ವದ ಸಾಹಿತ್ಯಲೋಕದ ಬಾನಂಗಣದಲ್ಲಿ ರಾರಾಜಿಸುವಂತಾಗಿದೆ” ಎಂದು ಹೇಳಿದರು. ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ ವಂದಿಸಿದ ಕಾರ್ಯಕ್ರಮದಲ್ಲಿ ಕೊಡಗು ಪತ್ರಕರ್ತರ ಸಂಘದ ಪರವಾಗಿ ದೀಪಾ ಭಾಸ್ತಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು, ಸಂಘದ ಸಲಹೆಗಾರರಾದ ಟಿ.ಪಿ. ರಮೇಶ್, ಬಿ.ಜಿ, ಅನಂತಶಯನ, ನಿರ್ದೇಶಕರು, ಸದಸ್ಯರು ಹಾಜರಿದ್ದರು.

    ಬೂಕರ್ ಪ್ರಶಸ್ತಿ ಪಡೆದ ‘ಹಾರ್ಟ್ ಲ್ಯಾಂಪ್’ ಕೃತಿಯು ಕೇವಲ 3 ವಾರದಲ್ಲಿಯೇ 70 ಸಾವಿರ ಪ್ರತಿಗಳ ಮುದ್ರಣ ಕಂಡಿದ್ದು, 1 ತಿಂಗಳಲ್ಲಿ 1.50 ಲಕ್ಷ ಕೃತಿ ಮಾರಾಟದ ದಾಖಲೆ ಮಾಡುವ ಸಾಧ್ಯತೆಯಿದೆ. ಈಗಾಗಲೇ ಹಲವಾರು ಭಾಷೆಗಳಿಂದ ‘ಹಾರ್ಟ್ ಲ್ಯಾಂಪ್’ ಕೃತಿಯ ಅನುವಾದ ಮುದ್ರಣಕ್ಕಾಗಿ ಬೇಡಿಕೆ ಬರುತ್ತಿದೆ. ಸದ್ಯಕ್ಕೆ ಮಲಯಾಳಂ, ಅಸ್ಸಾಮಿ, ಓಡಿಯಾ ಭಾಷೆಗಳ ತರ್ಜುಮೆಗೆ ಅನುಮತಿ ನೀಡಿದ್ದು, ಪ್ರಮುಖ ಪುಸ್ತಕ ಮಾರಾಟ ತಾಣಗಳಲ್ಲಿ ಸತತ 3 ವಾರಗಳಿಂದ ಹಾರ್ಟ್ ಲ್ಯಾಂಪ್ ಕೃತಿಯು ಮಾರಾಟದಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದೆ.

    baikady Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರಿನ ‘ಪರಂಪರಾ’ ದಲ್ಲಿ ಸುವರ್ಣ ಪರ್ವ ಸರಣಿ ಕಾರ್ಯಕ್ರಮ
    Next Article ಕವನ | ಮುಂಜಾವಿನ ಬೆಡಗು
    roovari

    Add Comment Cancel Reply


    Related Posts

    ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ‘ವಿವೇಕಸ್ಮೃತಿ’ ಉಪನ್ಯಾಸ ಕಾರ್ಯಕ್ರಮ

    June 12, 2025

    ವಿಶ್ವಕರ್ಮ ಒಕ್ಕೂಟದಿಂದ ಸಣ್ಣ ಕಥೆ – ಕವನ ಸ್ಪರ್ಧೆ – 2025 | 30 ಜೂನ್ ಕೊನೆಯ ದಿನ

    June 12, 2025

    ಬೆಂಗಳೂರಿನ ರಂಗ ಶಂಕರದಲ್ಲಿ ‘ಮಾರೀಕಾಡು’ | ಜೂನ್ 17   

    June 12, 2025

    ಮಂಗಳೂರಿನ ಡಾನ್ ಬೋಸ್ಕೋ ಹಾಲ್ ನಲ್ಲಿ ವಿ. ಹರಿಣಿ ಇವರ ‘ಭರತನಾಟ್ಯ ರಂಗಪ್ರವೇಶ’ | ಜೂನ್ 14

    June 12, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.