ದುಬೈ : ಯಕ್ಷಗಾನ ಅಭ್ಯಾಸ ಕೇಂದ್ರ ಯು.ಎ.ಇ. ಇದರ ‘ದಶಮಾನೋತ್ಸವ ಸಂಭ್ರಮ’ವನ್ನು ಯಕ್ಷಧ್ರುವ ಪಟ್ಲ ಫೌಂಡೇಷನ್ ಯು.ಎ.ಇ. ಘಟಕದ ಸಹಯೋಗದೊಂದಿಗೆ ದಿನಾಂಕ 29 ಜೂನ್ 2025ರಂದು ಬೆಳಿಗ್ಗೆ 9-00 ಗಂಟೆಗೆ ದುಬೈ ಯು.ಎ.ಇ. ಕರಾಮದ ಇಂಡಿಯನ್ ಹೈಸ್ಕೂಲಿನ ಶೇಖ್ ರಷೀದ್ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ.
ದಶಮ ಸಂಭ್ರಮದ ಪ್ರಯುಕ್ತ ಯು.ಎ.ಇ.ಯ ಏಳು ಮಂದಿ ಸಾಧಕರನ್ನು ಮತ್ತು ಮೂರು ಸಾಧಕ ಸಂಸ್ಥೆಗಳನ್ನು ಸನ್ಮಾನಿಸಲಾಗುವುದು. ಸರ್ವೋತ್ತಮ ಶೆಟ್ಟಿ (ಸಂಘಟನೆ), ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ (ಕಲಾ ಪೋಷಕ), ಪುತ್ತಿಗೆ ವಾಸುದೇವ ಭಟ್ (ಉದ್ಯಮ), ಬಾಲಕೃಷ್ಣ ಸಾಲಿಯಾನ್ (ಸಮಾಜ ಸೇವೆ), ಬಿ.ಕೆ. ಗಣೇಶ ರೈ (ಮಾಧ್ಯಮ), ಡೋನಿ ಕೊರೆಯಾ (ನಾಟಕ), ರೂಪಾ ಕಿರಣ್ (ಭರತನಾಟ್ಯ), ಶ್ರೀ ರಾಜರಾಜೇಶ್ವರಿ ಭಜನಾ ತಂಡ (ಭಜನೆ), ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ (ಸಂಸ್ಕೃತಿ) ಕನ್ನಡ ಪಾಠಶಾಲೆ ದುಬೈ (ಕನ್ನಡ ನಾಡು-ನುಡಿ-ಭಾಷೆ) ಸನ್ಮಾನ ಆಯ್ಕೆಯಾದ ಸಾಧಕರು ಹಾಗೂ ಸಂಸ್ಥೆಗಳು.
ಬೆಳಗ್ಗೆ 9-00 ಗಂಟೆಗೆ ಆರಂಭವಾಗುವ ಕಾರ್ಯಕ್ರಮಕ್ಕೆ ಒಟ್ಟು ಹದಿನೆಂಟು ಮಂದಿಯ ಅಬ್ಬರ ತಾಳದೊಂದಿಗೆ ಚಾಲನೆ ದೊರೆಯಲಿದೆ. ಚೌಕಿ ಪೂಜೆ, ಪುಟಾಣಿಗಳ ಪೂರ್ವ ರಂಗ ಮತ್ತು ಊರಿನ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ, ದೇವಿಪ್ರಸಾದ್ ಆಳ್ವ ತಲಪಾಡಿ, ಶ್ರೀಮತಿ ಕಾವ್ಯಶ್ರೀ ಅಜೇರು ಮತ್ತು ಕೃಷ್ಣ ಪ್ರಸಾದ್ ರಾವ್ ಸುರತ್ಕಲ್ ಇವರಿಂದ ಇದೇ ಮೊದಲ ಬಾರಿಗೆ ಯು.ಎ.ಇ.ಯಲ್ಲಿ ಗಾನ ವೈಭವ ನಡೆಯಲಿದೆ.
ಹಿರಿಯ ಯಕ್ಷಗಾನ ಕಲಾವಿದ ಕಾಸರಗೋಡು ಸುಬ್ರಾಯ ಹೊಳ್ಳ ಇವರಿಗೆ ‘ಯಕ್ಷ ಶ್ರೀ ರಕ್ಷಾ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು. ನಂತರ ಊರಿನ ಕಲಾವಿದರಾದ ಅರುಣ್ ಕೋಟ್ಯಾನ್, ಸುಬ್ರಾಯ ಹೊಳ್ಳ ಕಾಸರಗೋಡು ಹಾಗೂ ಕೇಂದ್ರದ ಕಲಾವಿದರ ಕೂಡುವಿಕೆಯಿಂದ ಕೀರ್ತಿಶೇಷ ಯಕ್ಷಬ್ರಹ್ಮ ಅಗರಿ ಶ್ರೀನಿವಾಸ ಭಾಗವತ ವಿರಚಿತ ‘ಶಿವಾನಿ-ಸಿಂಹವಾಹಿನಿ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಚಂಡೆ, ಮದ್ದಳೆಯಲ್ಲಿ ಚಂದ್ರಶೇಖರ ಸರಪಾಡಿ, ಸವಿನಯ ನೆಲ್ಲಿತೀರ್ಥ, ಭವಾನಿ ಶಂಕರ ಶರ್ಮ, ಪುತ್ತಿಗೆ ವೆಂಕಟೇಶ ಶಾಸ್ತ್ರಿ, ಚಕ್ರತಾಳದಲ್ಲಿ ಚರಣ್ ರಾಜ್, ಆದಿತ್ಯ ದಿನೇಶ್ ಶೆಟ್ಟಿ ಹಾಗೂ ವೇಷಭೂಷಣದಲ್ಲಿ ಗಂಗಾಧರ ಡಿ. ಶೆಟ್ಟಿಗಾರ್ ಕಿನ್ನಿಗೋಳಿ, ನಿತಿನ್ ಕುಂಪಲ, ಮನೋಜ್ ಶೆಟ್ಟಿಗಾರ್ ಹಳೆಯಂಗಡಿ ಇವರು ಸಹಕರಿಸಲಿದ್ದಾರೆ.