ಉಳ್ಳಾಲ : ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ ಮತ್ತು ಸರಕಾರಿ ಪ್ರೌಢಶಾಲೆ ಬಬ್ಬುಕಟ್ಟೆಯ ಜಂಟಿ ಆಶ್ರಯದಲ್ಲಿ ದಿನಾಂಕ 04 ಡಿಸೆಂಬರ್ 2025ರಂದು ಬಟ್ಟುಕಟ್ಟೆ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ತುಳು ಹಾಡುಗಳ ಕಲಿಕಾ ಕಾರ್ಯಾಗಾರ ಮತ್ತು ಹಾಡುಗಳ ಪ್ರಸ್ತುತಿ ‘ಡೆನ್ನ ಡೆನ್ನಾನ – ಪದ ಪನ್ಕನ’ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಏಕಲವ್ಯ ಪ್ರಶಸ್ತಿ ವಿಜೇತ ಅಂತರಾಷ್ಟ್ರೀಯ ದೇಹಧಾರ್ಡ್ಯ ಪಟು ಭಾಸ್ಕರ ತೊಕ್ಕೊಟ್ಟು “ತುಳು ಭಾಷೆಯನ್ನ ಉಳಿಸಿ ಬೆಳೆಸದಿದ್ದರೆ ಮುಂದಿನ ನಲ್ವತ್ತು, ಐವತ್ತು ವರುಷಗಳಲ್ಲಿ ತುಳು ಭಾಷೆಯು ಸಂಪೂರ್ಣ ಅವಸಾನವಾದೀತು. ಶಾಲಾ ಮಕ್ಕಳಿಗೆ ತುಳು ಭಾಷಾ ಕಲಿಕೆ ಮತ್ತು ಭಾಷಾಭಿಮಾನ ಮೂಡಿಸುವ ನಿಟ್ಟಿನಲ್ಲಿ ತುಳು ಸಾಹಿತ್ಯ ಅಕಾಡೆಮಿಯು ಹಮ್ಮಿಕೊಂಡಿರುವ ‘ಡೆನ್ನ ಡೆನ್ನಾನ-ಪದ ಪನ್ಕನ’ ಕಾರ್ಯಕ್ರಮ ಅಭಿಯಾನವು ಮಹತ್ವಪೂರ್ಣವಾಗಿದೆ. ನಮ್ಮ ಯೌವನದ ದಿನಗಳಲ್ಲಿ ತುಳು ಧಾರಾವಾಹಿ ಮತ್ತು ಸಿನೆಮಾಗಳ ಸುಮಧುರ ಹಾಡುಗಳನ್ನ ಕೇಳಿ ಆನಂದಿಸುತ್ತಿದ್ದೆವು. ಎಪ್ಪತ್ತು ಎಂಭತ್ತರ ದಶಕದಲ್ಲಿ ತುಳುವರಲ್ಲಿ ಕಾಸಿಲ್ಲದಿದ್ದರೂ ಸಹ ಸುಂದರ ಕಥಾ ಹಂದರವುಳ್ಳ ತುಳು ಚಲನಚಿತ್ರಗಳನ್ನ ನಿರ್ಮಿಸುತ್ತಿದ್ದರು. ಅಂದಿನ ತುಳು ಚಲನಚಿತ್ರಗಳ ಅರ್ಥಗರ್ಭಿತ ಸಾಹಿತ್ಯಗಳಲ್ಲೂ ಇಂಪಾದ ಹಾಡುಗಳಂತೂ ಸರ್ವಕಾಲಿಕವಾಗಿ ಮೆಚ್ಚುಗೆ ಪಡೆಯುವಂತದ್ದಾಗಿದೆ. ನಾನು ದೇಹಧಾರ್ಡ್ಯ ಸ್ಪರ್ಧೆಗೆಂದು ಅನೇಕ ಬಾರಿ ವಿದೇಶಗಳಿಗೆ ತೆರಳಿದ್ದೇನೆ. ವಿದೇಶಗಳಿಗೆ ತೆರಳಿದ್ದ ಸಂದರ್ಭಗಳಲ್ಲಿ ಅಲ್ಲಿ ತುಳುವರು ಮಾತಿಗೆ ಸಿಕ್ಕಾಗ ಸಿಗುವ ಸಂತೋಷವೇ ಬೇರೆಯೇ ಆಗಿರುತ್ತಿತ್ತು. ಇಂದಿನ ಮಕ್ಕಳೇ ತುಳು ಭಾಷೆಯನ್ನ ಮುಂದಿನ ತಲೆಮಾರಿಗೆ ವಿಸ್ತರಿಸಬೇಕಿದೆ. ಶಾಲಾ ಮಕ್ಕಳಲ್ಲಿ ತುಳು ಭಾಷಾಭಿಮಾನ ಹುಟ್ಟಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳ ಆಯೋಜನೆ ಮಹತ್ವಪೂರ್ಣವಾಗಿದೆ” ಎಂದು ಅಭಿಪ್ರಾಯಪಟ್ಟರು.
ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರನಾಥ ಗಟ್ಟಿ ಕಾಪಿಕಾಡು ಪ್ರಸ್ತಾವನೆಗೈದು “ಹಿಂದೆ ಶಾಲೆಯಲ್ಲಿ ವಿದ್ಯಾರ್ಥಿಗಳು ತುಳು ಭಾಷೆಯಲ್ಲಿ ಮಾತನಾಡುವಾಗ ಶಿಕ್ಷಕರು ಮಕ್ಕಳನ್ನ ಗದರುತ್ತಿದ್ದರು. ಆದರೆ ಇಂದು ಬದಲಾದ ಕಾಲಘಟ್ಟದಲ್ಲಿ ಶಾಲೆಗಳಲ್ಲೂ ತುಳುವಿಗೆ ಪ್ರಾಧಾನ್ಯತೆ ಲಭಿಸುವಂತಾಗಿದೆ. ಕಳೆದ ಬಾರಿ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ 847 ವಿದ್ಯಾರ್ಥಿಗಳು ತೃತೀಯ ಭಾಷೆಯಾಗಿ ತುಳು ಭಾಷೆ ಆಯ್ಕೆ ಮಾಡಿ ಪರೀಕ್ಷೆ ಬರೆದಿದ್ದು, 847 ವಿದ್ಯಾರ್ಥಿಗಳು ಕೂಡ ಉತ್ತೀರ್ಣರಾಗಿದ್ದು, 317 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆದಿದ್ದಾರೆ.” ಎಂದು ಹೇಳಿದರು.
ಹಿರಿಯ ಸಾಮಾಜಿಕ ಕಾರ್ಯಕರ್ತೆ ಸುಹಾಸಿನಿ ಬಬ್ಬುಕಟ್ಟೆ ಉಳ್ಳಾಲ ನಗರಸಭಾ ಸದಸ್ಯ ಮುಶ್ತಾಕ್ ಪಟ್ಲ, ಬಬ್ಬುಕಟ್ಟೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಖೈರುನ್ನೀಸ, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಬೂಬ ಪೂಜಾರಿ ಮಳಲಿ ಮೊದಲಾದವರು ಉಪಸ್ಥಿತರಿದ್ದರು. ಗಾಯಕ, ಸಂಗೀತ ನಿರ್ದೇಶಕರಾದ ತೋನ್ಸೆ ಪುಷ್ಕಳ್ ಕುಮಾರ್ ಮತ್ತು ಗಾಯಕಿ, ಸಂಗೀತ ಶಿಕ್ಷಕಿ ವಾಣಿ ಸಪ್ರೆ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಬಬ್ಬುಕಟ್ಟೆ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತುಳು ಹಾಡುಗಳ ಸಮೂಹ ಗಾಯನಗಳನ್ನು ಪ್ರಸ್ತುತಿ ಪಡಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸವಿತಾ ನಾಯಕ್ ಸ್ವಾಗತಿಸಿ, ಶಿಕ್ಷಕಿ ದುರ್ಗಲತಾ ವಂದಿಸಿ, ಜ್ಯೋತಿ ನಿರೂಪಿಸಿದರು.
