ಉಡುಪಿ : ದೊಂದಿ (ಪಂಜು) ಬೆಳಕಿನ ಯಕ್ಷಗಾನವು ಕರಾವಳಿ ಕರ್ನಾಟಕದ ಸಾಂಪ್ರದಾಯಿಕ ಕಲೆ. ಇದು ಆಧುನಿಕ ವಿದ್ಯುತ್ ದೀಪಗಳಿಲ್ಲದೆ ಕೇವಲ ಪಂಜಿನ ಬೆಳಕಿನಲ್ಲಿ ನಡೆಯುವ ಅಪರೂಪದ ಪ್ರದರ್ಶನ. ಇಂತಹ ಪ್ರದರ್ಶನವು ಮಾಹೆಯ ಸಾಂಸ್ಕೃತಿಕ ಕೇಂದ್ರಗಳಲ್ಲಿ ಒಂದಾದ ಯಕ್ಷಗಾನ ಕೇಂದ್ರ ಇಂದ್ರಾಳಿಯಲ್ಲಿ ದಿನಾಂಕ 06 ಫೆಬ್ರವರಿ 2026ರಂದು ಮಾಸಿಕ ಕಾರ್ಯಕ್ರಮದ ಅಂಗವಾಗಿ ಕೇಂದ್ರದ ವಿದ್ಯಾರ್ಥಿಗಳಿಂದ ‘ಚಕ್ರವ್ಯೂಹ’ ಎಂಬ ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು.
ಕೇಂದ್ರದ ಗುರುಗಳ ಮುತುವರ್ಜಿಯಿಂದ ಅದ್ಭುತವಾಗಿ ಮೂಡಿಬಂತು. ಭಾಗವತರ ರಾಗಭರಿತ ಗಾಯನ, ಚಂಡೆ ಮದ್ದಲೆಗಳ ಘೋಷದಿಂದ ರಂಗಭೂಮಿ ಜೀವಂತವಾಯಿತು. ಪಾತ್ರಧಾರಿ ವಿದ್ಯಾರ್ಥಿಗಳು ಅದ್ಭುತ ವೇಷಭೂಷಣ, ಮುಖವರ್ಣಿಕೆ ಮತ್ತು ಸಂಭಾಷಣೆಯ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿದರು. ಭಾಗವತರಾಗಿ ಗೋಪಾಡಿ ಉಮೇಶ್ ಸುವರ್ಣ, ಚಂಡೆಯಲ್ಲಿ ಕೃಷ್ಣಮೂರ್ತಿ ಭಟ್ ಬಗ್ವಾಡಿ, ಮದ್ದಳೆಯಲ್ಲಿ ಬಸವ ಮರಕಾಲ ಮುಂಡಾಡಿ ಸಹಕರಿಸಿದರು. ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶ್ರೀ ಸುರೇಶ್ ಮರಕಾಲ ಮುಂಡಾಡಿ ದೊಂದಿ ಬೆಳಕನ್ನು ಆಯೋಜಿಸಿದರು. ಕೇಂದ್ರದ ವಿದ್ಯಾರ್ಥಿಗಳು ವಿವಿಧ ಪಾತ್ರಗಳಲ್ಲಿ ತಮ್ಮ ಅಭಿನಯವನ್ನು ಅಚ್ಚುಕಟ್ಟಾಗಿ ಪ್ರದರ್ಶಿಸಿದರು. ಒಟ್ಟಿನಲ್ಲಿ ದೊಂದಿ ಬೆಳಕಿನ ಯಕ್ಷಗಾನ ಪ್ರಸಂಗವು ಯಶಸ್ವಿಯಾಗಿ ನೆರವೇರಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮದಲ್ಲಿ ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ, ಸಲಹಾ ಸಮಿತಿ ಸದಸ್ಯರಾದ ಶ್ರೀ ಭುವನ ಪ್ರಸಾದ್ ಹೆಗ್ಡೆ, ಶ್ರೀ ಮಂಜುನಾಥ ಮಯ್ಯ, ಶ್ರೀ ವಿ.ಜಿ. ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
