ತೆಕ್ಕಟ್ಟೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿಯ ಪ್ರಾಯೋಜಕತ್ವದಲ್ಲಿ ಧಮನಿ ಟ್ರಸ್ಟ್ ಆಯೋಜಿಸಿಕೊಂಡ ಎರಡು ದಿನಗಳ ನಾಟಕೋತ್ಸವ ಉದ್ಘಾಟನಾ ಸಮಾರಂಭ ದಿನಾಂಕ 31 ಮೇ 2025ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಖ್ಯಾತ ರಂಗ ನಿರ್ದೇಶಕ ರೋಹಿತ್ ಎಸ್. ಬೈಕಾಡಿ ಇವರನ್ನು ಅಭಿನಂದಿಸಿದ ಡಾ. ಕೋಟ ಶಿವರಾಮ ಕಾರಂತ ಟ್ರಸ್ಟ್ ಸಾಲಿಗ್ರಾಮ ಇದರ ಅಧ್ಯಕ್ಷರಾದ ಬಿ. ಎಂ. ಗುರುರಾಜ್ ರಾವ್ ಮಾತನಾಡಿ “ಭವಿಷ್ಯದ ಕುಡಿಗಳಲ್ಲಿ ಅಧ್ಯಯನ ಬಹಳಷ್ಟಿದೆ. ರಂಗಭೂಮಿಯ ಮೂಲಕದ ಚಟುವಟಿಕೆಗಳಿಂದ ಮಕ್ಕಳ ಮನಸ್ಸು ಅರಳಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಧಮನಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ. ಮಕ್ಕಳೊಂದಿಗಿನ ಬದುಕು ಕ್ಲಿಷ್ಟಕರವೆನಿಸಿದರೂ ಮನೋಲ್ಲಾಸದ ಕ್ಷಣವಾಗಿ ಉಳಿಯುವುದು” ಎಂದು ಅಭಿಪ್ರಾಯಪಟ್ಟರು.
ಕೋಟ ಶಿವರಾಮ ಕಾರಂತ ಟ್ರಸ್ಟ್ ಇದರ ಕಾರ್ಯದರ್ಶಿ ಕೆ. ನಾರಾಯಣ, ರಂಗ ನಿರ್ದೇಶಕ ರೋಹಿತ್ ಎಸ್. ಬೈಕಾಡಿ, ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷರಾದ ಹೆರಿಯ ಮಾಸ್ಟರ್, ಶ್ರೀಷ ತೆಕ್ಕಟ್ಟೆ, ಶ್ರೀಮತಿ ಸುಲೋಚನಾ ಉಪಸ್ಥಿತರಿದ್ದರು. ಪಂಚಮಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಬಳಿಕ ರೋಹಿತ್ ಎಸ್. ಬೈಕಾಡಿ ನಿರ್ದೇಶನದಲ್ಲಿ ಕಾರಂತಜ್ಜರ ಮಕ್ಕಳ ನಾಟಕ ‘ಸೂರ್ಯ ಚಂದ್ರ’ ಶ್ರೀಶ ಭಟ್ ನಿರ್ದೇಶನದಲ್ಲಿ ‘ಸ್ಟೋನ್ ಸೂಪ್’ ನಾಟಕ ರಂಗ ಪ್ರಸ್ತುತಿಗೊಂಡಿತು.