ಮಡಿಕೇರಿ : ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆಯ ಬೆಸೂರು ಸರಕಾರಿ ಪ್ರೌಢಶಾಲೆಯಲ್ಲಿ ದಿನಾಂಕ 07 ಫೆಬ್ರವರಿ 2026ರಂದು ಸಂಪಾಜೆ ಸಣ್ಣಯ್ಯ ಪಟೇಲ್ ಮತ್ತು ದಿವಂಗತ ವಿ.ಎಸ್. ರಾಮಕೃಷ್ಣ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ. ಮುನೀರ್ ಅಹ್ಮದ್ ಮಾತನಾಡಿ “ಜಗತ್ತಿನಲ್ಲಿ ಮನುಷ್ಯ ಒಂಟಿಯಾಗಿ ಬದುಕಲು ಸಾಧ್ಯವಿಲ್ಲ, ಮನುಷ್ಯರು ಜಂಟಿಯಾಗಿ ಅಥವಾ ಗುಂಪಾಗಿ ಬದುಕುವುದರಲ್ಲಿ ಸುಖ ಸಂತೋಷ ಇದೆ. ಅದನ್ನು ಜನಪದರು ಸಾಬೀತು ಮಾಡಿದ್ದರು. ಜನಪದ ಜಗತ್ತು ಎನ್ನುವುದು ಒಂದು ಅದ್ಭುತ, ವೈಶಿಷ್ಟ್ಯಮಯ, ಸುಂದರ ಜಗತ್ತು. ನಮ್ಮ ನಿಮ್ಮ ಹಿರಿಯರೇ ಜನಪದರು, ಆದರೆ ನಾವು ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗದೆ ಆ ಸುಖವನ್ನು ಕಳೆದುಕೊಳ್ಳುತ್ತಿದ್ದೇವೆ. ನಮ್ಮ ಹಿರಿಯರು ಪಾಠಶಾಲೆಯಲ್ಲಿ ಓದಿದವರಲ್ಲ ಆದರೆ ಬದುಕಿನ ಜೀವನೋತ್ಸಾಹದಲ್ಲಿ ಎಲ್ಲಾ ಅನುಭವದ ಪಾಠವನ್ನು ಪಡೆದವರು. ಜನಪದರ ಅನುಭವ ಮತ್ತು ಸಹಜ ಸ್ಪೂರ್ತಿಯಿಂದ ಹೊರಹೊಮ್ಮಿದ ಅನೇಕ ನುಡಿಮುತ್ತುಗಳು, ಗಾದೆ, ಹಾಡು, ಒಗಟು, ಕಥೆ, ಆಚರಣೆ ಇವೆಲ್ಲವೂ ನಮ್ಮ ಹಿಂದಿನ ಜನರ ಜೀವಕೋಶದ ಭಾಗ” ಎಂದು ನುಡಿದರು.
ಇಂದು ಹಿರಿಯ ಸಾಹಿತಿಗಳಾದ ಜಿ.ಎಸ್. ಶಿವರುದ್ರಪ್ಪನವರ ನೂರನೇ ಜನ್ಮದಿನವಾಗಿದ್ದು ಅವರ ಸಾಹಿತ್ಯ ಸೇವೆಯನ್ನು ವಿವರಿಸಿ, ಅವರಿಗೆ ನುಡಿ ನಮನ ಸಲ್ಲಿಸಲಾಯಿತು. ದಿವಂಗತ ವಿ.ಎಸ್. ರಾಮಕೃಷ್ಣ ರವರ ದತ್ತಿ ಆಶಯದಂತೆ ಕನ್ನಡ ಸಾಹಿತ್ಯದ ಬೆಳವಣಿಗೆ ಕುರಿತು ಶನಿವಾರಸಂತೆಯ ಸಾಹಿತಿಗಳಾದ ಲಾವಣ್ಯ ಮೋಹನ್ ಮಾತನಾಡಿದರು. ಸಾಹಿತ್ಯದ ಹಲವು ಪ್ರಕಾರಗಳ ಬಗ್ಗೆ ಉದಾಹರಣೆ ಸಹಿತ ವಿವರಿಸಿದ ಅವರು ಹಳೆಗನ್ನಡದಿಂದ ಇಂದಿನ ನವ್ಯ ಕನ್ನಡದವರೆಗಿನ ವಿಚಾರಗಳನ್ನು ವಿವರಿಸಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡುತ್ತ “ಹಳ್ಳಿ ಶಾಲೆಯ ವಿದ್ಯಾರ್ಥಿಗಳು ಕನ್ನಡ ಸಾಹಿತ್ಯದ ಬೇರುಗಳಂತೆ. ಅವರು ಕನ್ನಡ ನಾಡು ನುಡಿ ಆಚಾರ ವಿಚಾರ ಸಾಹಿತ್ಯ ಸಂಸ್ಕೃತಿ ತಿಳಿಯಪಡಿಸಬೇಕಿದೆ. ಆ ಕಾರ್ಯವನ್ನು ಸಾಹಿತ್ಯ ಪರಿಷತ್ ಮಾಡುತ್ತಿದೆ” ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತಿ ಶ್ರೀ ಬಾಲ ತ್ರಿಪುರ ಸುಂದರಿ ದೇವಾಲಯದ ಅಧ್ಯಕ್ಷ ಎನ್.ವೈ. ಧರ್ಮಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡ್ಲಿಪೇಟೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿಪಿ ಶಾಂತಮಲ್ಲಪ್ಪ ವಹಿಸಿದ್ದರು. ಶಾಲಾ ಅಭಿವೃದ್ಧಿ ಸಮಿತಿಯ ಗೌರವ ಅಧ್ಯಕ್ಷ ಧರ್ಮಪ್ಪ, ಕೊಡ್ಲಿಪೇಟೆಯ ಶಿಕ್ಷಕ ಕಿರಣ್ ಕುಮಾರ್ ಮತ್ತು ನ್ಯಾಯದ ಹಳ್ಳ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಮಂಜುಳಾಮಣಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಶ್ರೀ ಬಾಲ ತ್ರಿಪುರ ಸುಂದರಿ ದೇವಾಲಯದ ಕಾರ್ಯದರ್ಶಿ ದೇವೇಗೌಡ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶ್ರೀಮತಿ ಮಂಜುಳಾ ಎಸ್.ಎಸ್. ಮತ್ತು ದೇವೇಂದ್ರ ಉಪಸ್ಥಿತರಿದ್ದರು. ಬೆಸೂರು ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಿ.ಎಸ್. ದೇವರಾಜು ಸ್ವಾಗತಿಸಿ, ಅಧ್ಯಾಪಕಿ ಭಾರತಿ ಕಾರ್ಯಕ್ರಮವನ್ನು ನಿರೂಪಿಸಿದರು.
