ಮಡಿಕೇರಿ : ಕೊಡಗು ಜಿಲ್ಲೆಯ ವಕೀಲರಾದ ಪೇರಿಯಂಡ ಪಿ. ಪೆಮ್ಮಯ್ಯ ಮತ್ತು ಶ್ರೀಮತಿ ಜಿ.ಕೆ. ದೇವಕಿ ಪೆಮ್ಮಯ್ಯರವರು ಕೊಡಗಿನ ಲೇಖಕರಿಗಾಗಿ ದತ್ತಿ ಪ್ರಶಸ್ತಿ ಸ್ಥಾಪಿಸಿದ್ದು, ಕೊಡಗು ಜಿಲ್ಲೆಯ ಲೇಖಕರಿಗೆ ಮಾತ್ರ ಸೀಮಿತವಾಗಿರುವ ಈ ಪ್ರಶಸ್ತಿಗಾಗಿ ಇವರು ಒಂದು ಲಕ್ಷ ರೂ.ಗಳ ದತ್ತಿಯನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮುಖಾಂತರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಠೇವಣಿ ಇಟ್ಟಿರುತ್ತಾರೆ. ಕೊಡಗು ಜಿಲ್ಲೆಯ ಲೇಖಕರು ಪ್ರಕಟಿಸಿರುವ ಕಥೆ, ಕಾದಂಬರಿ, ಕಥಾ ಸಂಕಲನ, ಕವನ ಸಂಕಲನ, ವೈಚಾರಿಕ ಲೇಖನಮಾಲೆ, ಲೇಖನಗಳ ಗುಚ್ಚಗಳಲ್ಲಿ ಹಿಂದಿನ ಐದು ವರ್ಷಗಳ ಒಳಗಾಗಿ ಪ್ರಕಟಗೊಂಡಿರುವ ಉತ್ತಮ ಕೃತಿ ಆಯ್ಕೆ ಮಾಡಿ ಪ್ರಶಸ್ತಿ ನೀಡುವುದು ಈ ಪ್ರಶಸ್ತಿಯ ಉದ್ದೇಶ. ಕೊಡಗು ಜಿಲ್ಲೆಯ ಲೇಖಕರಿಗೆ ಮಾತ್ರ ಸೀಮಿತವಾಗಿರುವ ದತ್ತಿ ಪ್ರಶಸ್ತಿ ಇದಾಗಿದೆ. ಈಗಾಗಲೇ ಕೊಡಗು ಜಿಲ್ಲೆಯ ಲೇಖಕರುಗಳಿಗಾಗಿ ಮೂರು ಪ್ರಶಸ್ತಿಗಳು ಇದ್ದು, ಇದು ನಾಲ್ಕನೇ ಪ್ರಶಸ್ತಿ ಆಗಿರುತ್ತದೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಇವರು ತಿಳಿಸಿದ್ದಾರೆ.