ಕುಂದಾಪುರ : ಕನಕದಾಸ ಅಧ್ಯಯನ ಸಂಶೋಧನ ಪೀಠ ಉಡುಪಿ (ಮಾಹೆ), ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ (ಮಾಹೆ) ಮತ್ತು ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ವಿಸ್ತರಣಾ ಉಪನ್ಯಾಸ ಮಾಲಿಕೆ ದಿನಾಂಕ 25 ಆಗಸ್ಟ್ 2025ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ‘ಕನಕದಾಸರು– ವರ್ತಮಾನದ ಮುಖಾಮುಖಿ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಕೋಟೇಶ್ವರ ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥರಾದ ಡಾ. ಸುಧಾಕರ ದೇವಾಡಿಗ ಬಿ. “ಕನಕದಾಸರಲ್ಲಿ ನಾವು ಕಾಣುವ ಅತ್ಯಂತ ಉತ್ತಮ ಗುಣವೆಂದರೆ ಸಮಾಜಕೆ ಹಂಚುವ ಗುಣ. ಅವರು ಎಲ್ಲರಲ್ಲೂ ದೇವರನ್ನು ಕಂಡವರು. ಈ ಎಲ್ಲರಲ್ಲೂ ದೇವರನ್ನು ಕಂಡಾಗ ಮತೀಯ ಸಾಮರಸ್ಯ ನೆಲೆಗೊಳ್ಳುತ್ತದೆ. ವ್ಯಕ್ತಿ ವ್ಯಕ್ತಿಯ ನಡುವೆ ಇರುವ ತಾರತಮ್ಯ ಮರೆಯಾಗುತ್ತದೆ. ಅವರ ಬೋಧನೆಯಲ್ಲಿ ನಾವು ಕಾಣುವ ಇತರ ಪ್ರಮುಖ ಅಂಶಗಳೆಂದರೆ ಸಮಾನತೆಯ ಪ್ರಜ್ಞೆ, ಜಾತಿಜಾತಿಗಳ ನಡುವೆ ಬೇದಭಾವ ಇಲ್ಲವೆಂಬ ಚಿಂತನೆ, ಯುದ್ಧ ವಿರೋಧಿ ನೆಲೆ ಇತ್ಯಾದಿ. ನಮಗೆ ಇಂದು ಕನಕದಾಸರ ಚಿಂತನೆ ಪ್ರಸ್ತುತ ಯಾಕೆಂದರೆ ಅವರ ಬಗ್ಗೆ ನಾವು ಗಮನ ಹರಿಸಿದರೆ ಮನುಷ್ಯತ್ವದ ಕಡೆಗೆ ಸಾಗಬಹುದು. ಒಟ್ಟಿನಲ್ಲಿ ಕನಕ ಚಿಂತನೆ ನಮಗೆ ಕೈದೀವಿಗೆಯಾಗಿದೆ” ಎಂದು ಹೇಳಿದರು.
ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕನಕದಾಸ ಅಧ್ಯಯನ ಸಂಶೋಧನ ಪೀಠ; ಉಡುಪಿಯ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಆಶಯ ನುಡಿಗಳನ್ನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ, ಉಪಪ್ರಾಂಶುಪಾಲ ಶ್ರೀ ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ಶ್ರೀಮತಿ ರೇಶ್ಮಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ, ವಿದ್ಯಾರ್ಥಿನಿಯರಾದ ಕುಮಾರಿ ಪ್ರಾಥ ಆರ್. ಶೆಟ್ಟಿ ವಂದಿಸಿ, ಕಾರ್ತಿಕ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಶ್ರೇಯಾ ಖಾರ್ವಿ ಕಂಚುಗೋಡು ಕನಕ ಕೀರ್ತನೆ ಹಾಡಿದರು.