ಉಡುಪಿ : ಲಯನ್ಸ್ ಅಂತರಾಷ್ಟ್ರೀಯ ಜಿಲ್ಲೆ 317ಸಿ, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಉಡುಪಿ, ಕರ್ನಾಟಕ ಜಾನಪದ ಪರಿಷತ್ತು ಉಡುಪಿ ಘಟಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ, ಲಯನ್ಸ್ ಕ್ಲಬ್ ಮಲ್ಪೆ ಹಾಗೂ ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ‘ಜಾನಪದ ಮತ್ತು ಯಕ್ಷಗಾನ ಸಂಭ್ರಮ -2025’ ಕಾರ್ಯಕ್ರಮವು ದಿನಾಂಕ 20 ಡಿಸೆಂಬರ್ 2025ರಂದು ಅಜ್ಜರಕಾಡು ಪುರಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಲಯನ್ಸ್ ಜಿಲ್ಲೆ 317ಸಿ ಇದರ ಸಾಂಸ್ಕೃತಿಕ (ಜಾನಪದ ಮತ್ತು ಯಕ್ಷಗಾನ) ಕಾರ್ಯಕ್ರಮಗಳ ಸಂಯೋಜಕಿ ತಲ್ಲೂರು ಗಿರಿಜಾ ಶಿವರಾಮ ಶೆಟ್ಟಿ “ಲಯನ್ಸ್ ಅಂತರಾಷ್ಟ್ರೀಯ ಜಿಲ್ಲೆ 317ಸಿ ಮಹಿಳೆಯರ ಸಬಲೀಕರಣಕ್ಕೆ ಅತ್ಯುತ್ತಮ ವೇದಿಕೆಯಾಗಿದೆ. ಪ್ರಸ್ತುತ ಜಿಲ್ಲಾ ಗವರ್ನರ್ ಸಪ್ನಾ ಸುರೇಶ್ ಇವರ ನೇತೃತ್ವದಲ್ಲಿ ಸಂಸ್ಥೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ” ಎಂದು ಹೇಳಿದರು.
ಲಯನ್ಸ್ ಅಂತರಾಷ್ಟ್ರೀಯ ಜಿಲ್ಲೆ 317ಸಿ ಇದರ ಜಿಲ್ಲಾ ಗವರ್ನರ್ ಸಪ್ನಾ ಸುರೇಶ್ ಇವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ “ಡಾ. ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಅವರ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಜಾನಪದ, ಯಕ್ಷಗಾನ ಕ್ಷೇತ್ರ ಸೇರಿದಂತೆ ಸಾಂಸ್ಕೃತಿಕ ರಂಗಕ್ಕೆ ನೀಡುತ್ತಿರುವ ಕೊಡುಗೆ ಮಾದರಿಯಾಗಿದೆ. ಲಯನ್ಸ್ ಸಂಸ್ಥೆ ಸೇವಾಕಾರ್ಯಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಂಭ್ರಮದ ಆಚರಣೆಗೂ ಒತ್ತು ನೀಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಳೆದುಹೋಗುತ್ತಿರುವ ಯುವ ಜನತೆಯನ್ನು ಸಾಂಸ್ಕೃತಿಕ ರಂಗಗಳತ್ತ ಸೆಳೆಯಲು ಇಂತಹ ಕಾರ್ಯಕ್ರಮಗಳು ನೆರವಾಗುತ್ತವೆ” ಎಂದು ಅಭಿಪ್ರಾಯಪಟ್ಟರು.
ದ್ವಿತೀಯ ಉಪ ಜಿಲ್ಲಾ ಗವರ್ನರ್ ಹರಿಪ್ರಸಾದ್ ರೈ, ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿ ಇದರ ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿ ಶುಭ ಹಾರೈಸಿದರು. ಕನ್ನಡ ಮತ್ತು ಸಂಸ್ಕೃತಿ ಕಾರ್ಯಕ್ರಮಗಳಿಗೆ ನಿರಂತರವಾಗಿ ಪ್ರೋತ್ಸಾಹ ನೀಡುತ್ತಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಇವರಿಗೆ ‘ತಲ್ಲೂರ್ಸ್ ಸಂಸ್ಕೃತಿ ಸಂವರ್ಧಿನಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು “ತಮ್ಮ ದುಡಿತದ ಒಂದು ಪಾಲನ್ನು ಸೇವಾ ಕಾರ್ಯಗಳ ಮೂಲಕ ಸಮಾಜಕ್ಕೆ ಅರ್ಪಿಸುವ ಲಯನ್ಸ್ ನ ಸಮಾಜ ಸೇವೆ ಮಾದರಿಯಾಗಿದೆ. ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಮೂಲಕ ಜಾನಪದ, ಯಕ್ಷಗಾನ ಮೊದಲಾದ ಸಾಂಸ್ಕೃತಿಕ ಕ್ಷೇತ್ರಗಳಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿರುವ ಡಾ. ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಅವರ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಅಭಿನಂದನೀಯ ಕಾರ್ಯವೆಸಗುತ್ತಿದೆ. ಕಲಾಮಯಂನಂತಹ ಜಾನಪದ ಸಂಘಟನೆ ದೇಶವಿದೇಶದಲ್ಲಿ ಪ್ರದರ್ಶನ ನೀಡುವಷ್ಟು ಬೆಳೆದಿರುವುದು ಇದಕ್ಕೊಂದು ಉದಾಹರಣೆ. ಯಕ್ಷ ಶಿಕ್ಷಣಕ್ಕೆ ಸಿಗುತ್ತಿರುವ ಪ್ರೋತ್ಸಾಹದಿಂದಾಗಿ ಇಂದು ಸಾವಿರಾರು ಮಕ್ಕಳು ಯಕ್ಷಗಾನ ಕಲಿತು, ತಮ್ಮ ವ್ಯಕ್ತಿತ್ವ ಬೆಳೆಸಿಕೊಳ್ಳುತ್ತಿದ್ದಾರೆ” ಎಂದರು.
ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಂಟ್ವಾಳದ ಜಾನಪದ ಕಲಾವಿದ ಲೋಕಯ್ಯ ಶೇರಾ ಇವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿ ಅಧ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ, ಲಯನ್ಸ್ ಮಾಜಿ ಗವರ್ನರ್ಗಳಾದ ಡಾ. ರವೀಂದ್ರನಾಥ ಶೆಟ್ಟಿ, ಶ್ರೀಧರ ಶೇಣವ, ಲಯನ್ಸ್ ಜಿಲ್ಲಾ ಸಂಪುಟ ಕಾರ್ಯದರ್ಶಿ ಶಶಿಧರ ಶೆಟ್ಟಿ, ಮಲ್ಪೆ ಲಯನ್ಸ್ ಕ್ಲಬ್ ಅಧ್ಯಕ್ಷ ರವೀಂದ್ರ ಕರ್ಕೇರ ಉಪಸ್ಥಿತರಿದ್ದರು. ಕರ್ನಾಟಕ ಜಾನಪದ ಪರಿಷತ್ತು ಉಡುಪಿ ಘಟಕದ ಪ್ರಧಾನ ಕಾರ್ಯದರ್ಶಿ ರವಿರಾಜ ನಾಯಕ್ ಕಾರ್ಯಕ್ರಮ ನಿರೂಪಿಸಿ, ಲಯನ್ಸ್ ಸಂಪುಟ ಕಾರ್ಯದರ್ಶಿ ಶಾಲಿನಿ ಡಿ. ಬಂಗೇರ ವಂದಿಸಿದರು. ಸಭಾ ಕಾರ್ಯಕ್ರಮದ ಆರಂಭದಲ್ಲಿ ಯಕ್ಷಗಾನ ಕೇಂದ್ರ ಇಂದ್ರಾಳಿ ಇದರ ಕಲಾವಿದರಿಂದ ‘ದಕ್ಷ ಯಜ್ಞ’ ಎಂಬ ಯಕ್ಷಗಾನ ಪ್ರದರ್ಶನಗೊಂಡಿತು. ಯುವ, ಪ್ರತಿಭಾನ್ವಿತ ಉತ್ಸಾಹಿಗಳಿಂದ ಕೂಡಿರುವ ಉಡುಪಿಯ ಕಲಾಮಯಂ ತಂಡ ಸ್ಥಳೀಯ ಹಾಗೂ ರಾಜ್ಯದ ಇತರ ಭಾಗಗಳ ಜಾನಪದ ಪ್ರಕಾರಗಳು ಸಭಿಕರ ಮನಸೂರೆಗೊಂಡವು.
