ಉಡುಪಿ : ಉಡುಪಿಯ ಮುಕುಂದ ಕೃಪ ಸಂಗೀತ ಶಾಲೆಯ ವಿದ್ವಾನ್ ಮಹಾಬಲೇಶ್ವರ ಭಾಗವತ್ ಇವರ ಶಿಷ್ಯ ಜೀ ಸರಿಗಮಪ ಕನ್ನಡ ಸೀಸನ್ 9ರ ಮತ್ತು ರಾಷ್ಟ್ರೀಯ ಹಿಂದಿ ಸರಿಗಮಪ ಸೀಸನ್ 5 ವಿಜೇತ ಗಗನ್ ಜಿ. ಗಾಂವ್ಕರ್ ಶಾಸ್ತ್ರೀಯ ಸಂಗೀತದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ.
ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಕಳೆದ ಸಾಲಿನಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ನಡೆಸಿದ ರಾಜ್ಯಮಟ್ಟದ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿ ಗಳಿಸುವ ಮೂಲಕ ವಿದ್ವತ್ ಪದವಿಯನ್ನು ಪಡೆದಿರುತ್ತಾರೆ. ಪ್ರಸ್ತುತ ಬೆಂಗಳೂರಿನಲ್ಲಿ ಪ್ರಸಿದ್ಧ ಎಂ.ಎನ್.ಸಿ.ಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಕೆಲ ಚಲನಚಿತ್ರ ಹಾಗೂ ತಾವೇ ಸಂಯೋಜಿಸಿದ ಭಾವ, ಭಕ್ತಿ, ಗೀತೆಗಳಿಗೆ ಧ್ವನಿಯಾಗಿದ್ದು, ಭವಿಷ್ಯದಲ್ಲಿ ಉತ್ತಮ ಗಾಯಕ ಹಾಗೂ ಸಂಗೀತ ಸಂಯೋಜಕನಾಗಬೇಕು ಎಂದು ಕನಸು ಕಂಡಿರುವ ಗಗನ್ ಜಿ. ಗಾಂವ್ಕರ್ ಇವರಿಗೆ ದಿನಾಂಕ 30 ಆಗಸ್ಟ್ 2025ರಂದು ಮೈಸೂರಿನಲ್ಲಿ ಪ್ರೊ. ನಾಗೇಶ್ ವಿ. ಬೆಟ್ಟಕೋಟೆ ಮಾನ್ಯ ಕುಲಪತಿಗಳು, ಪ್ರಥಮ ಶ್ರೇಣಿಯೊಂದಿಗೆ ವಿದ್ವತ್ ಪದವಿಯನ್ನು ಪ್ರಧಾನ ಮಾಡಿದರು.
ಇವರ ತಂದೆ ಡಾ. ಗೋಪಾಲಕೃಷ್ಣ ಎಂ. ಗಾಂವ್ಕರ್ ಕಾಪು ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಹಾಗೂ ತಾಯಿ ಸಾಹಿತಿ ಶ್ರೀಮತಿ ಗಿರಿಜಾ ಹೆಗಡೆ ಗಾ೦ವ್ಕರ್ ಇವರು ಉಡುಪಿಯ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.