ತೆಕ್ಕಟ್ಟೆ : ಯಶಸ್ವೀ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆ ಇದರ ಆಶ್ರಯದಲ್ಲಿ ಗಂಪು ಪೈ ಸಾಲಿಗ್ರಾಮ ಸಹಕಾರದಲ್ಲಿ ಕಾಳಿಂಗ ನಾವಡರ ಸಂಸ್ಮರಣೆಯಾಗಿ ‘ಯಕ್ಷ ಗಾನ ನಮನ’ ಕಾರ್ಯಕ್ರಮವು ತೆಕ್ಕಟ್ಟೆ ಹಯಗ್ರೀವದಲ್ಲಿ ದಿನಾಂಕ 31 ಮೇ 2025ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಸಂಸ್ಮರಣಾ ನುಡಿಗಳನ್ನಾಡಿದ ಯಕ್ಷಗುರು ಲಂಬೋದರ ಹೆಗಡೆ ನಿಟ್ಟೂರು “ಕಾಳಿಂಗ ನಾವಡರ ಹೆಸರೇ ಯಕ್ಷ ಪ್ರಪಂಚದಲ್ಲಿ ರೋಮಾಂಚನ. ಸರಿಸಾಟಿಯಿಲ್ಲದ ಕಂಠ ಸಿರಿಯನ್ನು ಹೊಂದಿದ ಕಾಳಿಂಗ ನಾವಡರು ತನ್ನ ಎಳವೆಯಲ್ಲಿಯೇ ಅದ್ಭುತ ಸಾಧನೆಗೈದು ಇಹಲೋಕ ತ್ಯಜಿಸಿ ಅಜರಾಮರರಾದರು. ಗಾನಗಾರುಡಿಗರಾಗಿ ಯಕ್ಷ ಮನಗಳಲ್ಲಿ ಚಿರಸ್ಥಾಯಿಯಾಗಿ ಉಳಿದರು” ಎಂದು ಹೇಳಿದರು.
ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಹೆರಿಯ ಮಾಸ್ಟರ್ ಮಾತನ್ನಾಡಿ, ಲಕ್ಷೋಪಲಕ್ಷ ಕಲಾಭಿಮಾನಿಗಳ ಮನ ತಟ್ಟಿದ ಕಾಳಿಂಗ ನಾವಡರು ಯಕ್ಷ ಪರಂಪರೆಯಲ್ಲಿ ಇನ್ನಿಲ್ಲದ ಸಾಧನೆಗೈದವರು. ಇವರ ಸ್ಮರಣೆಯಲ್ಲಿಯೇ ಅನುದಿನವೂ ಯಕ್ಷಾಭಿಮಾನಿಗಳು ಇರುವುದನ್ನು ಅಲ್ಲಗಳೆಯುವಂತಿಲ್ಲ” ಎಂದರು. ರಂಗ ನಿರ್ದೇಶಕ ರೋಹಿತ್ ಎಸ್. ಬೈಕಾಡಿ, ಉದ್ಯಮಿ ಗೋಪಾಲ ಪೂಜಾರಿ ಬಾಳೆಹಿತ್ಲು ಉಪಸ್ಥಿತರಿದ್ದರು.
ಯುವ ಭಾಗವತರಾದ ರಾಜೇಶ್ ಕೋಡಿ, ಹರೀಶ್ ಕಾವಡಿ, ವಿಶ್ವನಾಥ ಐರೋಡಿ, ಸುಕುಮಾರ ಶೆಟ್ಟಿ, ಲೋಹಿತ್ ಕೊಮೆ, ರಾಹುಲ್ ಕುಂದರ್, ರಾಹುಲ್ ಅಮೀನ್, ಪವನ್ ಆಚಾರ್ ಇವರುಗಳು ‘ಯಕ್ಷ ಗಾನ ನಮನ’ ಕಾರ್ಯಕ್ರಮವನ್ನು ನಡೆಸಿಕೊಟ್ಟರು.