ಧಾರವಾಡ : ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಗದಗ ಇದರ ಧಾರವಾಡ ಜಿಲ್ಲಾ ಘಟಕ ವತಿಯಿಂದ ಗಾನಯೋಗಿ ಪಂ.ಪಂಚಾಕ್ಷರ ಗವಾಯಿಗಳವರ ಪುಣ್ಯ ಸ್ಮರಣೆ ಕಾರ್ಯಕ್ರಮ ದಿನಾಂಕ 22 ಜೂನ್ 2025ರಂದು ಧಾರವಾಡದ ಸಾಂಸ್ಕೃತಿಕ ಸುವರ್ಣ ಸಮುಚ್ಚಯ ಭವನ ರಂಗಾಯಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿದ ಪೂಜ್ಯ ಶ್ರೀ ಡಾ. ಬಸವರಾಜ ದೇವರು ಶ್ರೀ ರೇವಣಸಿದ್ದೇಶ್ವರಮಠ ಮನಸೂರ ಇವರು ಮಾತನಾಡಿ “25 ವರ್ಷಗಳಿಂದ ಡಾಕ್ಟರ್ ಪಂಡಿತ್ ಪುಟ್ಟರಾಜ ಸೇವಾ ಸಮಿತಿ ಅನೇಕ ಕಡೆ ಧರ್ಮ ಕಾರ್ಯಗಳನ್ನು ಮಾಡುತ್ತಾ ಬಂದಿದೆ ಮತ್ತು ಇದರ ಜೊತೆಗೆ ಸಂಗೀತ ಸಾಹಿತ್ಯ ಬೆಳೆಸುವ ನಿಟ್ಟಿನಲ್ಲಿ ಉತ್ತಮ ಪಾತ್ರ ವಹಿಸಿದೆ. ಇದರ ಸಂಸ್ಥಾಪಕರಾದ ಚನ್ನವೀರ ಸ್ವಾಮಿಗಳು ಇನ್ನೂ ಹೆಚ್ಚಿನ ಧರ್ಮ ಕಾರ್ಯ ಮಾಡಲು ಅವರಿಗೆ ಪಂಚಾಕ್ಷರ ಗವಾಯಿಗಳ ಆಶೀರ್ವಾದ ಇದೆ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಸುರೇಶ ಡಿ. ಕಳಸಣ್ಣವರ ಮಾತನಾಡಿ “ಸರ್ವಜ್ಞನೆಂಬುವನು ಗರ್ವದಿಂದಾದನೆ ? ಸರ್ವರ ಒಳಗೊಂದು ನುಡಿ ಕಲಿತು ವಿದ್ಯೆ ಪರ್ವತವೇ ಆದ ಸರ್ವಜ್ಞ. ಎಂದು ಸರ್ವಜ್ಞನ ವಚನವನ್ನು ನೆನೆದು ಪಂಚಾಕ್ಷರಿ ಮತ್ತು ಪುಟ್ಟರಾಜ ಗವಾಯಿಗಳು ತೋರಿಸಿಕೊಟ್ಟ ನಾಟಕ, ಸಂಗೀತ, ಸಾಹಿತ್ಯ ವಿದ್ಯೆಯ ಕಲಿತು ನಾವು ವಿದ್ಯೆಯ ಪರ್ವತವೇ ಆಗೋಣ” ಎಂದು ಹಾರೈಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾಕ್ಟರ್ ಪಂಡಿತ್ ಪುಟ್ಟರಾಜ ಸೇವಾ ಸಮಿತಿಯ – ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರಾದ ವೇ. ಚನ್ನವೀರಸ್ವಾಮಿ ಹಿರೇಮಠ ಕಡಣಿ ಮಾತನಾಡಿ “ಸಂಗೀತ ಮತ್ತು ಯೋಗ ಇದರ ಬಗ್ಗೆ ವಿವರವಾಗಿ ತಿಳಿಸಿಕೊಟ್ಟ ಮತ್ತು ಹಾನಗಲ್ ಕುಮಾರೇಶ್ವರ ಸ್ವಾಮೀಜಿಯವರಿಂದ ಹಿಡಿದು ಜನ ಪುಟ್ಟರಾಜು ಗವಾಯಿಗಳವರೆಗೆ ಸಂಗೀತ ಯಾವ ರೀತಿಯಾಗಿ ಬೆಳೆಯಿತು ಅದಕ್ಕೆ ಯಾವ ರೀತಿಯಾಗಿ ತೊಂದರೆಗಳು ಬಂದವು ಆ ತೊಂದರೆಗಳನ್ನು ಪಂಚಾಕ್ಷರಿ ಗವಾಯಿ ಹಾಗೂ ಪುಟ್ಟರಾಜ ಗವಾಯಿಗಳು ಯಾವ ರೀತಿಯಾಗಿ ನಿವಾರಿಸುತ್ತಾ ಬಂದರು. ಸಂಗೀತ, ನಾಟಕ, ಸಾಹಿತ್ಯ ಬೆಳೆಸಿದ ರೀತಿ ನಮಗೆ ಮಾದರಿ” ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ರಂಗಾಯಣದ ನಿರ್ದೆಶಕರಾದ ಶ್ರೀ ರಾಜು ತಾಳಿಕೋಟೆ ಮಾತನಾಡಿ “ತಾನು ಇಷ್ಟು ಬೆಳೆಯಲು ಪಂ. ಪುಟ್ಟರಾಜ ಗವಾಯಿಗಳೇ ಕಾರಣ. ಅವರ ಆಶೀರ್ವಾದ ತನ್ನ ಮೇಲೆ ಇದೆ” ಎಂದು ಹೇಳಿದರು. ಅತಿಥಿಗಳಾಗಿ ರಮೇಶ್ ಗಂಗಾಧರ ಭಟ್, ಶ್ರೀ ದಾನೇಶ ಬುರಡಿ, ವಿಶ್ವ ವಿಜಯ ಪತ್ರಿಕೆಯ ಸಂಪಾದಕರಾದ ಡಾ. ರಾಜಶೇಖರ ವಿ. ಪಾಟೀಲ್, ಖ್ಯಾತ ನೇತ್ರತಜ್ಞರಾದ ಸಂಜೀವ ದುಮಕನಾಳ ಭಾಗವಹಿಸಿದ್ದರು. ಹುಬ್ಬಳ್ಳಿಯ ಡಾ. ರಾಜಶೇಖರ ಪಾಟೀಲ ಅವರ ಐ ಬಡ್ಡಿ ಕಣ್ಣಿನ ಆಸ್ಪತ್ರೆ ವತಿಯಿಂದ ನೇತ್ರ ತಪಾಸಣೆ ನಡೆಯಿತು. ಭಗವತಿ ಸರ್ ಹಾಗೂ ಕಲಘಟಗಿ ತಾಲೂಕು ಘಟಕದ ಡಾಕ್ಟರ್ ಪಂಡಿತ್ ಪುಟ್ಟರಾಜ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ನಾಯಕ್ ಹಾಗೂ ರಾಜ್ಯ ಸಂಚಾಲಕರಾದ ಸುಮಾ ಹಡಪದ್ ಉಪಸ್ಥಿತರಿದ್ದರು.
ಶ್ರೀಮತಿ ಪಾರ್ವತಿ ದೀಕ್ಷಿತ, ಶ್ರೀಮತಿ ಸೀತಾ ಭಪರ, ಶ್ರೀಮತಿ ರೂಪಶ್ರೀ ಶೀಲವಂತ ಮತ್ತು ಶ್ರೀ ಸದಾನಂದ ಬಂಗೆಣ್ಣವರ ತಂಡದಿಂದ ನೃತ್ಯ ಕಾರ್ಯಕ್ರಮ, ಡಾ. ಸುರೇಶ್ ಕಳಸಣ್ಣವರ ಮತ್ತು ಸುಮಾ ಹಡಪದ ಮತ್ತು ದಾನೇಶ್ ಬುರಡಿ ಅವರಿಂದ ಗಾಯನ ನಡೆಯಿತು. ರಮೇಶ್ ಭಟ್ ಗುರೂಜಿ ತಬಲಾ ಸಾತ್ ನೀಡಿದರು.
ಶ್ರೀಮತಿ ಪಾರ್ವತಿ ಹಮ್ಮಿಗಿ ಸ್ವಾಗತಿಸಿ, ಶಿವು ಖನ್ನೂರ ನಿರೂಪಿಸಿ, ಕವಿಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಶ್ರೀಮತಿ ಸುಧಾ ಕಬ್ಬೂರ ನಡೆಸಿ, ಬಸವರಾಜ್ ಹಡಪದ್ ವಂದಿಸಿದರು ಕಾರ್ಯಕ್ರಮದಲ್ಲಿ ಕವಿಗೋಷ್ಠಿ, ಕಾವ್ಯ ಗಾಯನ ಮತ್ತು ನೃತ್ಯ ನಮನ ಜರುಗಿತು.