ಬೆಂಗಳೂರು : ‘ರಂಗಸ್ಥಳ ಯಕ್ಷಮಿತ್ರ ಕೂಟ’ದ ರಜತ ಪರ್ವ ೨೦೨೫ ರ ಅಂಗವಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸಹಯೋಗದೊಂದಿಗೆ ಸುವರ್ಣ ಸಂಭ್ರಮವನ್ನು ಆಚರಿಸುತ್ತಿರುವ ಕೋಟದ ಸಾಲಿಗ್ರಾಮ ಮಕ್ಕಳ ಮೇಳದ ಸರಣಿ ಕಾರ್ಯಕ್ರಮವಾಗಿ ಹಾರಾಡಿ ಮತ್ತು ಮಟಪಾಡಿ ಯಕ್ಷಗಾನ ಶೈಲಿಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮವು ದಿನಾಂಕ 22 ಜುಲೈ 2025ರಂದು ಬೆಂಗಳೂರಿನ ನಾಗರಬಾವಿಯ ಶ್ರೀಗಂಧ ಕಾವಲು, ಶ್ರೀ ವೇಣುಗೋಪಾಲಕೃಷ್ಣ ಸಮುದಾಯ ಭವನದಲ್ಲಿ ನಡೆಯಿತು.
ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕರಾದ ಎಚ್. ಶ್ರೀಧರ ಹಂದೆಯವರ ನಿರ್ದೇಶನದಲ್ಲಿ ಸುಜಯೀಂದ್ರ ಹಂದೆ ಮತ್ತು ಬಳಗದವರು ಹಾರಾಡಿ ತಿಟ್ಟಿನ ಗತ್ತುಗಾರಿಕೆಯ ಹೆಜ್ಜೆ ಮತ್ತು ಮಟಪಾಡಿ ಶೈಲಿಯ ಲಾಲಿತ್ಯ ಪೂರ್ಣವಾದ ಕುಣಿತಗಳನ್ನು ಅಭಿನಯಿಸಿ ತೋರಿಸಿದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹಾರಾಡಿ ರಾಮ ಗಾಣಿಗ, ಕುಷ್ಟ (ಕೃಷ್ಣ) ಗಾಣಿಗ, ಹಾರಾಡಿ ನಾರಾಯಣ ಗಾಣಿಗ, ಮಟಪಾಡಿ ವೀರಭದ್ರ ನಾಯಕ್ ಮೊದಲಾದ ಹಿರಿಯ ಕಲಾವಿದರ ನೆನಪು ಮೂಡಿಸುವಂತೆ ಒಡ್ಡೋಲಗ, ಯುದ್ಧ ಕುಣಿತ, ಹಸ್ತಾಭಿನಯ, ವಿವಿಧ ಪ್ರಸಂಗಗಳ ಪದ್ಯ ಪ್ರಸ್ತುತಿಯೊಂದಿಗೆ ಹಾರಾಡಿ ಮತ್ತು ಮಟಪಾಡಿ ಶೈಲಿಗಳ ನೃತ್ತ, ನೃತ್ಯ, ನಾಟ್ಯಗಳ ಭಿನ್ನತೆ, ಸಾಮ್ಯತೆ ಹಾಗೂ ವೈಶಿಷ್ಯತೆಗಳನ್ನು ಪ್ರದರ್ಶಿಸಲಾಯಿತು.
ಹಿಮ್ಮೇಳದಲ್ಲಿ ಮಕ್ಕಳ ಮೇಳದ ಹಿರಿಯ ಕಲಾವಿದರಾದ ಸ್ಕಂದ ಉರಾಳ, ಸುದೀಪ ಉರಾಳ ಮತ್ತು ಮುಮ್ಮೇಳದಲ್ಲಿ ನವೀನ್ ಮಣೂರು, ಮನೋಜ್ ಭಟ್, ಪ್ರದೀಪ ಮಧ್ಯಸ್ಥ ಭಾಗವಹಿಸಿದರು. ಇದೆ ಸಂದರ್ಭದಲ್ಲಿ ಮಕ್ಕಳ ಮೇಳದ ಕಾರ್ಯದರ್ಶಿ ಸುಜಯೀಂದ್ರ ಹಂದೆಯವರನ್ನು ಗೌರವಿಸಲಾಯಿತು.
ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಭಾಗವತ, ಲೇಖಕ ಡಾ. ಸುರೇಂದ್ರ ಪಣಿಯೂರು ಹಾಗೂ ಯಕ್ಷ ವಿಮರ್ಶಕ ಎಸ್. ವಿ. ಉದಯಕುಮಾರ ಶೆಟ್ಟಿ ಹಾರಾಡಿ ಮತ್ತು ಮಟಪಾಡಿ ತಿಟ್ಟುಗಳ ಕುರಿತಂತೆ ಪ್ರಬಂಧ ಮಂಡಿಸಿದರು. ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಿರಿಯ ಮದ್ದಳೆ ವಾದಕರಾದ ಬಿರ್ತು ಬಾಲಕೃಷ್ಣ ಗಾಣಿಗ, ಸಹಕಾರ ಸಂಘಗಳ ಉಪ ನಿಬಂಧಕರಾದ ಎಂ. ಪಿ. ಮಂಜುನಾಥ, ಕರಾವಳಿಗರ ಒಕ್ಕೂಟದ ಗೌರವಾಧ್ಯಕ್ಷರಾದ ಡಾ. ಸುರೇಶ್ ಜಿ. ಕೆ., ರಂಗಸ್ಥಳದ ಅಧ್ಯಕ್ಷ ಆರ್. ಕೆ. ನಾಗೂರು, ಅಖಿಲ ಕರ್ನಾಟಕ ಗಾಣಿಗರ ಸಂಘದ ಅಧ್ಯಕ್ಷ ರಾಜಶೇಖರ ಗಾಣಿಗ, ರಂಗಸ್ಥಳದ ಪ್ರಧಾನ ಕಾರ್ಯದರ್ಶಿ ಕೆ. ಎಂ. ನಾಗೂರು, ಕೆ. ಎಂ. ಶೇಖರ್ ಮೊದಲಾದವರು ಉಪಸ್ಥಿತರಿದ್ದರು.