ಕಾರ್ಕಳ : ಕಾಂತಾವರ ಕನ್ನಡ ಸಂಘದ 50ರ ಸಂಭ್ರಮದ ಪ್ರಯುಕ್ತ ಕಾರ್ಕಳದ ಶಾಸ್ತ್ರೀಯ ಸಂಗೀತ ಸಭಾದ ಸಹಯೋಗದಲ್ಲಿ ದಿನಾಂಕ 20 ಡಿಸೆಂಬರ್ 2025ರಂದು ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಭವನದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಮತ್ತು ಭಕ್ತಿ ಸಂಗೀತ ಕಾರ್ಯಕ್ರಮವು ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕರ್ನಾಟಕ ಕಲಾಶ್ರೀ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ನಿವೃತ್ತ ಉಡುಪಿಯ ಜಿಲ್ಲಾಧಿಕಾರಿಗಳೂ ಆಗಿರುವ ಡಾ. ಮುದ್ದು ಮೋಹನ್ ಇವರು ಮಾತನಾಡಿ “ಅವಿಭಜಿತ ದ.ಕ. ಜಿಲ್ಲೆಯ ಜನತೆಯೂ ಕಲೆ, ಸಂಸ್ಕೃತಿ, ಸಂಗೀತವನ್ನು ಆರಾಧಿಸುವವರಾಗಿದ್ದು ಕಲಾವಿದರಿಗೆ ಅವರು ನೀಡುವ ಗೌರವ, ಪ್ರೋತ್ಸಾಹ ಬೇರೆಲ್ಲೂ ಕಾಣಸಿಗದು. ಈ ಜಿಲ್ಲೆಯ ಜನರ ಪ್ರೀತಿ, ಹೃದಯ ಶ್ರೀಮಂತಿಕೆಗೆ ನಾನು ಮಾರುಹೋಗಿದ್ದೇನೆ” ಎಂದು ತಿಳಿಸಿದರು.
ಶಾಸ್ತ್ರೀಯ ಸಂಗೀತ ಸಭಾ ಇದರ ಸ್ಥಾಪಕ ಕಾರ್ಯದರ್ಶಿಗಳಾದ ಡಾ. ಪ್ರಕಾಶ್ ಶೆಣೈಯವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಡಾ. ಮುದ್ದು ಮೋಹನ್ ಇವರಿಗೆ ಸಹ ವಾದ್ಯ ಸಹಾಯಕರಾಗಿ ಹಾರ್ಮೋನಿಯಂನಲ್ಲಿ ಶ್ರೀ ಪಂಚಾಕ್ಷರಿ ಹಿರೇಮಠ, ತಬಲಾದಲ್ಲಿ ಶ್ರೀ ಕೇಶವ ಜೋಶಿ ಬೆಂಗಳೂರು, ವಯಲಿನ್ನಲ್ಲಿ ಟಿ. ರಂಗ ಪೈ, ತಂಬೂರಿಯಲ್ಲಿ ಉಡುಪಿಯ ಸಪ್ನಾರಾಜ್ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಮುನ್ನ ಐದು ಕಲಾವಿದರನ್ನು ಕೂಡಾ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಶ್ರೀಮತಿ ಮಿತ್ರಪ್ರಭಾ ಹೆಗ್ಡೆ, ದಿವಾಕರ್ ಕುಮಾರ್, ರತ್ನಾಕರ ಹೆಬ್ಬಾರ್ ಮುಂತಾದವರು ಉಪಸ್ಥಿತರಿದ್ದರು. ಸದಾನಂದ ನಾರಾವಿ ಕಾರ್ಯಕ್ರಮ ನಿರ್ವಹಿಸಿ, ಡಾ. ನಾ. ಮೊಗಸಾಲೆ ಸ್ವಾಗತಿಸಿ, ನಿತ್ಯಾನಂದ ಪೈ ವಂದಿಸಿದರು.
