ಪುತ್ತೂರು : ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿವಿಧ ಚಟುವಟಿಕೆಗಳ ಮುನ್ನುಡಿಯಾಗಿ ಕಲಾ ಸಂಘದ ಉದ್ಘಾಟನಾ ಸಮಾರಂಭ ದಿನಾಂಕ 06 ಆಗಸ್ಟ್ 2026ರಂದು ವೈದೇಹಿ ಸಭಾಂಗಣದಲ್ಲಿ ನೆರವೇರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವಿವೇಕಾನಂದ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಅನಿತಾ ಕಾಮತ್ ಕೆ. ಮಾತನಾಡಿ “ಕಲಾವಿಭಾಗ ಎಂಬುದು ಇತಿಹಾಸ, ಪರಂಪರೆ, ಸಂಸ್ಕೃತಿ, ದೇಶದ ಆರ್ಥಿಕ ಪರಿಸ್ಥಿತಿ, ವ್ಯವಹಾರ, ಅಭಿವೃದ್ಧಿ, ರಾಜಕೀಯ ವ್ಯವಸ್ಥೆಗಳು, ಸಮಾಜದ ಬಾಂಧವ್ಯ ಮುಂತಾದ ವೈವಿಧ್ಯಮಯ ವಿಷಯಗಳ ಸಾಗರ. ಕಲೆಯಿಂದ ಸೃಜನಶೀಲತೆ ಬೆಳೆಯುತ್ತದೆ. ವಿದ್ಯಾರ್ಥಿಗಳಲ್ಲಿ ಹಲವು ಬಗೆಯ ಪ್ರತಿಭೆಗಳು ಅಡಗಿವೆ. ಅವುಗಳ ಅನಾವರಣವಾಗಬೇಕಾದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಹಿಂಜರಿಯದೆ, ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಂಡು ಹೆಜ್ಜೆಯನ್ನು ಮುಂದಿಡಬೇಕು. ವಿದ್ಯಾರ್ಥಿಗಳಲ್ಲಿ ಮಾನವಿಕ ಮೌಲ್ಯಗಳ ಬೆಳವಣಿಗೆ, ಇತರರ ಭಾವನೆಗೆ ಸ್ಪಂದಿಸುವ ಮನಸ್ಸು ಇರಬೇಕು” ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದೇವಿಚರಣ್ ರೈ. ಎಂ. ವಹಿಸಿಕೊಂಡರು. ವೇದಿಕೆಯಲ್ಲಿ ದ್ವಿತೀಯ ಕಲಾ ವಿಭಾಗದ ವಿದ್ಯಾರ್ಥಿ ಹಾಗೂ ಕಲಾ ಸಂಘದ ಅಧ್ಯಕ್ಷರಾದ ಅನೂಪ್ ರೈ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ, ಉಪನ್ಯಾಸಕೇತರ ವೃಂದ, ಪ್ರಥಮ ಹಾಗೂ ದ್ವಿತೀಯ ಪಿ. ಯು. ಸಿ. ಕಲಾ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದರು.
ದ್ವಿತೀಯ ಪಿ. ಯು. ಸಿ. ವಿದ್ಯಾರ್ಥಿನಿಯರು ಪ್ರಾರ್ಥಿಸಿ, ವಿದ್ಯಾರ್ಥಿ ಅನೂಪ್ ರೈ ಸ್ವಾಗತಿಸಿ, ಚಿನ್ಮಯ ಎಸ್. ಸೇಮಿತ ಕಾರ್ಯಕ್ರಮವನ್ನು ನಿರೂಪಿಸಿ, ಬಿಂದು ಕೆ. ಜೆ. ವಂದಿಸಿದರು.