ಮಂಗಳೂರು: ಗಾನ ಗಂಧರ್ವ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಜನ್ಮದಿನೋತ್ಸವದ ಅಂಗವಾಗಿ ಗಾಯಕ ಯಶವಂತ ಎಂ. ಜಿ. ಅವರಿಂದ 24 ಗಂಟೆಗಳ ಕಾಲ ನಿರರ್ಗಳವಾಗಿ ಗಾಯನ ಕಾರ್ಯಕ್ರಮ ‘ಬಾಲಗಾನ ಯಶೋಯಾನ’ಕ್ಕೆ ಚಾಲನಾ ಕಾರ್ಯಕ್ರಮ ದಿನಾಂಕ 03 ಜೂನ್ 2025ರ ಮಂಗಳವಾರದಂದು ಮಂಗಳೂರಿನ ಕುದ್ದುಲ್ ರಂಗರಾವ್ ಪುರಭವನದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿದ ವಿರಾಜಪೇಟೆ ಡಿವೈಎಸ್ಪಿ ಎಸ್. ಮಹೇಶ್ ಕುಮಾರ್ ಮಾತನಾಡಿ “ಒಬ್ಬನೇ ವ್ಯಕ್ತಿ 24 ಗಂಟೆ ಹಾಡುವುದು ಸಾಮಾನ್ಯ ವಿಷಯವಲ್ಲ. ಇದೊಂದು ಅದ್ಭುತ ಕಾರ್ಯಕ್ರಮ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಸಲ್ಲಿಸುವ ನೈಜ ಗೌರವವಾಗಿದೆ” ಎಂದರು.
ಉದ್ಯಮಿ ಮಲ್ಲಿಕಾ ಶೆಟ್ಟಿ, ಕರಾವಳಿ ಸಂಗೀತ ಒಕ್ಕೂಟದ ಅಧ್ಯಕ್ಷರಾದ ಕೇಶವ ಕನಿಲ, ಶ್ರೀರಂಗ ಕನ್ಸ್ಟಕ್ಷನ್ಸ್ ಇದರ ರಾಘವೇಂದ್ರ ಆಚಾರ್ಯ, ಉದ್ಯಮಿ ಕೆ. ಕೆ. ನೌಷಾದ್ ಮುಖ್ಯ ಅತಿಥಿಗಳಾಗಿದ್ದರು. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಏಷಿಯಾ ಮುಖ್ಯಸ್ಥ ಡಿ.ಮನೀಶ್ ವಿಲ್ಲೋಯ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮ್ಯಾಂಡೋಲಿನ್ ವಾದಕ ದೇವರಾಜ ಆಚಾರ್, ಕೀಬೋರ್ಡ್ ವಾದಕ ಸತೀಶ್ ಸುರತ್ಕಲ್, ಸಂಗೀತ ಕಲಾವಿದ ತೋನ್ಸೆ ಪುಷ್ಕಳ ಕುಮಾರ್ ಇವರಿಗೆ ಗುರುವಂದನೆ ಸಲ್ಲಿಸಲಾಯಿತು. ಗಾಯಕ ಯಶವಂತ್ ಎಂ. ಜಿ. ಸ್ವಾಗತಿಸಿ, ದಾಮೋದರ ಶರ್ಮಾ ನಿರೂಪಿಸಿದರು.
24 ಗಂಟೆಗಳ ನಿರಂತರ ಗಾಯನ!
03 ಜೂನ್ 2025ರ ಸಂಜೆ ಘಂಟೆ 3.00 ರಿಂದ 04 ಜೂನ್ 2025ರ ಸಂಜೆ ಘಂಟೆ 3.00ರ ತನಕ 24 ಗಂಟೆಗಳ ಕಾಲ ನಿರಂತರವಾಗಿ ಗಾಯಕ ಎಸ್. ಪಿ. ಬಿ. ಅವರು ಹಾಡಿದ ಶೇ.90 ರಷ್ಟು ಕನ್ನಡ ಚಿತ್ರಗೀತೆಗಳು, ಶೇ.5ರಷ್ಟು ಭಕ್ತಿ ಗೀತೆಗಳು ಹಾಗೂ ಶೇ.5ರಷ್ಟು ಭಾವಗೀತೆಗಳನ್ನು ಯಶವಂತ ಅವರು ಹಾಡಲಿದ್ದಾರೆ. ಇದಕ್ಕಾಗಿ ಅವರು 240ಕ್ಕಿಂತ ಹೆಚ್ಚಿನ ಹಾಡುಗಳನ್ನು ಸಿದ್ಧಮಾಡಿಕೊಂಡಿದ್ದಾರೆ.
ನಿರಂತರ ಗಾಯನದಲ್ಲಿ ಒಂದೊಂದು ಗಂಟೆಗೆ 5 ನಿಮಿಷಗಳ ವಿರಾಮ ಇರುತ್ತದೆ. ಆಹಾರ ಸೇವಿಸದೆ ಬರೀ ಜ್ಯೂಸ್ ಕುಡಿದು ಹಾಡಲಿದ್ದಾರೆ. ಇವರ ಜತೆಯಲ್ಲಿ ಗಿಟಾರ್ನಲ್ಲಿ ರಾಜ್ ಗೋಪಾಲ್, ಕೀಬೋರ್ಡ್ ನಲ್ಲಿ ದೀಪಕ್ ಜಯಶೀಲನ್, ಡ್ರಮ್ಸ್ ಮತ್ತು ರಿದಂನಲ್ಲಿ ವಾಮನ್ ಕೆ., ತಬಲಾದಲ್ಲಿ ಪ್ರಜ್ವಲ್ ಆಚಾರ್ಯ, ಕೊಳಲಿನಲ್ಲಿ ವರ್ಷ ಬನ್ನೂರ್ ಹಾಗೂ ಸಿತಾರ್ನಲ್ಲಿ ಸುಮುಖ್. ಆಚಾರ್ಯ ಸಹಕರಿಸಲಿದ್ದಾರೆ. ಈ ವಿಶ್ವದಾಖಲೆಯಲ್ಲಿ ಅವರು ಕೂಡ ಭಾಜನರಾಗುತ್ತಾರೆ. ಒಂದೊಂದು ಗಂಟೆ ಕುಳಿತು ಒಂದೊಂದು ಗಂಟೆ ನಿಂತು ಹಾಡಲಿದ್ದಾರೆ.