ಬಡಿಯಡ್ಕ : ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿ ಯಕ್ಷಗಾನ ತರಬೇತಿಯ ನೂತನ ವರ್ಗದ ಚಾಲನಾ ಸಮಾರಂಭವು ದಿನಾಂಕ 08 ಜೂನ್ 2025 ರಂದು ಬದಿಯಡ್ಕದ ನವಜೀವನ ವಿದ್ಯಾಲಯದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪಬೆಳಗಿ ಉದ್ಘಾಟಿಸಿದ ಯಕ್ಷಗಾನ ಗುರುಗಳಾದ ಶ್ರೀ ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಮಾತನಾಡಿ “ಯಕ್ಷಗಾನ ಕಲಿಕೆಯಿಂದ ನಮ್ಮಲ್ಲಿ ಉತ್ತಮ ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯ” ಎಂದು ಹೇಳಿದರು.
ರಂಗಸಿರಿಯ ಸ್ಥಾಪಕ ಕಾರ್ಯದರ್ಶಿ ಡಾ. ಶ್ರೀಶ ಕುಮಾರ ಪಂಜಿತ್ತಡ್ಕ ಪ್ರಾಸ್ತಾವಿಕವಾಗಿ ಮಾತಾಡಿ “ಹದಿನೈದು ವರ್ಷಗಳ ಬೆಳವಣಿಗೆ ಕಂಡಿರುವ ರಂಗಸಿರಿಯು ಕಳೆದ ವರ್ಷ 45ಕ್ಕೂ ಹೆಚ್ಚು ಯಕ್ಷಗಾನ ಪ್ರದರ್ಶನ ನೀಡಿ ಸಾಧನೆಮಾಡಿದೆ. ಅಂತಹ ಸಾಧಕ ಸಂಸ್ಥೆಯ ಅಂಗವಾಗಿ ಯಕ್ಷಗಾನ ಕಲಿಯಲು ಮುಂದಾಗಿರುವ ಎಲ್ಲ ವಿದ್ಯಾರ್ಥಿಗಳೂ ಅಭಿನಂದನಾರ್ಹರು” ಎಂದು ಹೇಳಿದರು.
ರಂಗಸಿರಿಯ ಸದಸ್ಯರಾದ ದಿನೇಶ ಮಾಸ್ಟರ್, ಸಂಸ್ಥೆಯ ಕಲಾವಿದರಲ್ಲೊಬ್ಬರಾದ ಅಭಿಜ್ಞಾ ಭಟ್ ಶುಭಹಾರೈಸಿದರು. ವಿದ್ಯಾರ್ಥಿಗಳು ಉತ್ಸಾಹದಿಂದ ಯಕ್ಷಗಾನಕ್ಕೆ ಆರಂಭಿಕ ಹೆಜ್ಜೆಗಳನ್ನಿಟ್ಟರು.