ಉಡುಪಿ : ಉಡುಪಿ ಯಕ್ಷ ಶಿಕ್ಷಣ ಟ್ರಸ್ಟ್ (ರಿ) ಪ್ರಾಯೋಜಿತ ಯಕ್ಷಗಾನ ತರಬೇತಿಯ ಉದ್ಘಾಟನಾ ಸಮಾರಂಭವು ದಿನಾಂಕ 16 ಜುಲೈ 2025ರಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ಬಿದ್ಕಲ್ ಕಟ್ಟೆ ಪ್ರೌಢಶಾಲಾ ವಿಭಾಗದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರು ಹಾಗೂ ಹಿರಿಯ ಯಕ್ಷಗಾನ ಕಲಾವಿದರಾದ ದಿನಕರ ಹೆಗ್ಡೆ ಮಾತನಾಡಿ “ಜಗತ್ತಿನ ಲಲಿತಕಲೆಗಳಲ್ಲಿ ಯಕ್ಷಗಾನ ಅಗ್ರಸ್ಥಾನದಲ್ಲಿದೆ. ನಮ್ಮ ಬದುಕಿಗೆ ಶುದ್ಧ ಸಂಸ್ಕಾರವನ್ನು ಒದಗಿಸುವ ಇಂತಹ ದೇವಕಲೆಯನ್ನು ವಿಶೇಷ ಕಲಾಭಿಯಾನದ ಮೂಲಕ ಅಕ್ಷರಶಿಕ್ಷಣದೊಂದಿಗೆ ಪಸರಿಸುವ ಯಕ್ಷಶಿಕ್ಷಣ ಟ್ರಸ್ಟ್ ನ ಇಂತಹ ಕಲಾತ್ಮಕ ಕಾರ್ಯ ಅನುಕರಣೀಯ, ಶ್ಲಾಘನೀಯ” ಎಂದರು. ಬಳಿಕ ಹೆಗ್ಡೆಯವರು ಭೀಷ್ಮವಿಜಯದ ಸಾಲ್ವನ ಅರ್ಥಗಾರಿಕೆಯ ಮೂಲಕ ವಿದ್ಯಾರ್ಥಿಗಳ ಮನರಂಜಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಉಪ ಪ್ರಾಂಶುಪಾಲರಾದ ಮೊಗೆಬೆಟ್ಟು ಕರುಣಾಕರ ಶೆಟ್ಟಿ ಮಾತನಾಡಿ “ಯಕ್ಷಗಾನದಿಂದಾಗಿ ಮಾನವನ ವ್ಯಕ್ತಿತ್ವ ವಿಕಸನವಾಗುತ್ತದೆ” ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಯಕ್ಷಗುರು- ಭಾಗವತರಾದ ಪ್ರಸಾದ್ ಕುಮಾರ್ ಮೊಗೆಬೆಟ್ಟು ಇವರು ಯಕ್ಷಗಾನ ತರಗತಿಯ ರೂಪುರೇಷೆ, ಯಕ್ಷಗಾನದ ಮಹತ್ವ, ಯಕ್ಷಶಿಕ್ಷಣ ಟ್ರಸ್ಟ್ ಹಾಗೂ ಉಡುಪಿ ಯಕ್ಷಗಾನ ಕಲಾರಂಗದ ಸಾಧನೆ, ವಿಶೇಷತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಆಂಗ್ಲ ಭಾಷಾ ಶಿಕ್ಷಕರಾದ ಪ್ರಕಾಶ್ ಶೆಟ್ಟಿ ಸ್ವಾಗತಿಸಿ, ಕನ್ನಡ ಅಧ್ಯಾಪಕ ನಾಗರಾಜ. ಎನ್. ಕಾರ್ಯಕ್ರಮ ನಿರೂಪಿಸಿ, ಕನ್ನಡ ಅಧ್ಯಾಪಕ ಸುಧಾಕರ ವಂದಿಸಿದರು. ಸುಮಾರು ಅರವತ್ತು ವಿದ್ಯಾರ್ಥಿಗಳು ಈ ಸಾಲಿನ ಯಕ್ಷ ಶಿಕ್ಷಣದ ಕಲಿಕಾರ್ಥಿಗಳಾದರು.

									 
					