ಬೆಂಗಳೂರು : ಆಶಾ ರಘು ಇವರು ಆರಂಭಿಸಿರುವ ಪುಸ್ತಕ ಮಳಿಗೆ ಉಪಾಸನ ಬುಕ್ಸ್ ಇದರ ಆರಂಭೋತ್ಸವವು ದಿನಾಂಕ 07 ಫೆಬ್ರವರಿ 2025ರಂದು ಬೆಂಗಳೂರಿನ ರಾಜಾಜಿ ನಗರದಲ್ಲಿ ಉದ್ಘಾಟನೆಗೊಂಡಿದ್ದು, ಸಾಹಿತ್ಯದ, ಧಾರ್ಮಿಕ, ಮಕ್ಕಳ ಮತ್ತು ಶೈಕ್ಷಣಿಕ ಪುಸ್ತಕಗಳು ಲಭ್ಯವಿರುತ್ತದೆ. ಇದೇ ಸಂದರ್ಭದಲ್ಲಿ ಆಶಾ ರಘು ಇವರ ‘ವಕ್ಷ ಸ್ಥಲ’ ಕಾದಂಬರಿ ಮತ್ತು ‘ಕೆಂಪು ದಾಸವಾಳ’ ಕಥಾ ಸಂಕಲನ ಎರಡು ಕೃತಿಗಳು ಲೋಕಾರ್ಪಣೆಗೊಂಡವು.
ಉಪಾಸನ ಬುಕ್ಸ್ ನ ಆರಂಭೋತ್ಸವದಲ್ಲಿ ಪಾಲ್ಗೊಂಡ ನಟ, ರಂಗ ನಿರ್ದೇಶಕ ಶ್ರೀನಿವಾಸ ಪ್ರಭುರವರು ಮಾತನಾಡಿ “ಪುಸ್ತಕ ಸಂಸ್ಕೃತಿ ಎಷ್ಟು ವ್ಯಾಪಕವಾಗಿ ಬೆಳೆಯುವುದೋ ಅಷ್ಟು ಮಾನವ ಸಂಸ್ಕೃತಿ ಬೆಳೆಯುತ್ತದೆ. ಆ ನಿಟ್ಟಿನಲ್ಲಿ ಆಶಾ ರಘುರವರು ಒಂದು ಮಹತ್ವದ ಹೆಜ್ಜೆಯನ್ನು ಇಟ್ಟಿದ್ದಾರೆ” ಎಂದು ಅಭಿಪ್ರಾಯಪಟ್ಟರು.
ಆಶಾ ರಘುರವರ ಕೃತಿ ಲೋಕಾರ್ಪಣೆಗೊಳಿಸಿದ ಶ್ರೀಮತಿ ರಂಜಿನಿ ಪ್ರಭು ಮಾತನಾಡಿ “ವಾಸ್ತವ-ಕಲ್ಪನೆ-ಅತಿಂದ್ರೀಯ-ದೈವೀಕ ಎಲ್ಲ ನೆಲೆಗಳ ಚಿತ್ರಣವನ್ನೂ ಏಕತ್ರಗೊಳಿಸಿ ಪ್ರತಿಮಾತ್ಮಕವಾಗಿ ಕಟ್ಟಿಕೊಡುವಲ್ಲಿ ಆಶಾ ರಘು ಇವರು ಯಶಸ್ವಿಯಾಗಿದ್ದಾರೆ. ಸ್ವಾರಸ್ಯಕರವಾಗಿ ಕಥಾನಕವನ್ನು ಕಟ್ಟಿಕೊಡುವುದರಲ್ಲಿ, ಭಾಷೆಯನ್ನು ಸಮರ್ಥವಾದ ವಾಹಕವಾಗಿಸುವಲ್ಲಿ ಆಶಾರವರು ಸಿದ್ಧಹಸ್ತರು” ಎಂದು ಅಭಿಪ್ರಾಯಪಟ್ಟರು.
“ಪ್ರಕಾಶನ ಸಂಸ್ಥೆಗಳು ಯುವ ಬರಹಗಾರರ ಕೃತಿಗಳನ್ನು ಪ್ರಕಟಿಸಬೇಕು ಮತ್ತು ಪುಸ್ತಕ ಮಳಿಗೆಗಳಲ್ಲಿ ಯುವ ಬರಹಗಾರರ ಕೃತಿಗಳಿಗೆ ಯೋಗ್ಯ ಸ್ಥಳಾವಕಾಶ ಕಲ್ಪಿಸಿಕೊಟ್ಟು ಪ್ರೋತ್ಸಾಹಿಸಬೇಕು. ಅಂತಹ ಕೆಲಸವನ್ನು ಉಪಾಸನ ಬುಕ್ಸ್ ಮಾಡುತ್ತದೆ ಎಂಬ ಭರವಸೆ ಇದೆ” ಎಂದು ಪತ್ತೇದಾರಿ ಕಾದಂಬರಿಕಾರ ಶ್ರೀ ಕೌಶಿಕ್ ಕೂಡುರಸ್ತೆಯವರು ಪುಸ್ತಕ ಮಳಿಗೆಯ ಆರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
“ದೊಡ್ಡ ಜಾಗದಲ್ಲಿ ಅರ್ಥವಿಲ್ಲದ ಕಾರ್ಯಕ್ರಮಕ್ಕಿಂತ ಸಣ್ಣ ಜಾಗದಲ್ಲಿ ಅರ್ಥಪೂರ್ಣ ಕಾರ್ಯಕ್ರಮ ಮೌಲಿಕವಾದದ್ದು. ಸ್ಥಳ ಚಿಕ್ಕದು ದೊಡ್ಡದು ಎನ್ನುವುದಕ್ಕಿಂತ ಅವರ ಹಿಂದೆ ಇರುವ ವ್ಯಕ್ತಿ ಯಾರು ಎನ್ನುವುದು ಮುಖ್ಯ” ಎಂದು ಮುಖ್ಯ ಅತಿಥಿಯಾಗಿದ್ದ ಕವಿ ಶ್ರೀ ವಾಸುದೇವ ನಾಡಿಗ್ ಅವರು ಅಭಿಪ್ರಾಯಪಟ್ಟರು.
ಉಪಸ್ಥಿತರಿದ್ದ ಲೇಖಕಿ ಮತ್ತು ಪ್ರಕಾಶಕಿ ಶ್ರೀಮತಿ ಆಶಾ ರಘು ಇವರು ತಮ್ಮ ಕೃತಿಗಳ ಕುರಿತು ಹಾಗೂ ತಾವು ಆರಂಭಿಸಿರುವ ಪುಸ್ತಕ ಉದ್ಯಮದ ಕುರಿತು ಸಂತಸ ವ್ಯಕ್ತಪಡಿಸಿ, ಓದುಗರು ನನ್ನ ಕೃತಿಗಳಿಗೆ ತೋರುತ್ತಿರುವ ಪ್ರೀತಿಯನ್ನೇ ನನ್ನ ಹೊಸ ಪ್ರಯತ್ನಕ್ಕೂ ನೀಡುತ್ತಾರೆಂದು ನಂಬಿದ್ದೇನೆ ಎಂದು ಹೇಳಿದರು.