ಮಂಗಳೂರು : ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ, ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾ ಘಟಕ, ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಇವರ ಸಂಯುಕ್ತ ಆಶಯದಲ್ಲಿ ‘ಮನೆ ಮನೆ ಕನ್ನಡ ಜಾಗೃತಿ ಅಭಿಯಾನ’ ಮಂಗಳೂರಿನಲ್ಲಿ ದಿನಾಂಕ 22 ಜೂನ್ 2025ರಂದು ಉದ್ಘಾಟನೆಗೊಂಡಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿ ಮತ್ತು ಸಾಹಿತ್ಯ ಪರಿಚಾರಕ ಡಾ. ಕೊಳ್ಚಪ್ಪೆ ಗೋವಿಂದ ಭಟ್ ವಹಿಸಿದ್ದರು. ಈ ಉಪಕ್ರಮವು ಸ್ಥಳೀಯ ಸಂಘಟನಾ ಕಾರ್ಯದರ್ಶಿ ಅನಿತಾ ಶೆಣೈಯವರ ಕುಲಶೇಖರ ಮನೆಯಲ್ಲಿ ಸಂಚಲನ ಮೂಡಿಸಿತು. ಈ ಅಭಿಯಾನದ ರೂವಾರಿ ಮತ್ತು ಈ ಸಂಸ್ಥೆಗಳ ಸ್ಥಾಪಕ ಸಂಚಾಲಕ ವಾಮನ ರಾವ್ ಬೇಕಲ್ ಮತ್ತು ಸಂಧ್ಯಾ ರಾಣಿ ಟೀಚರ್ ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯ ಸಂಚಾಲಕರಾದ ಜಯಾನಂದ ಪೆರಾಜೆ ಇವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತ “ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಸ್ವಯಂ ಅಳವಡಿಸಿ, ಪರಿಸರದಲ್ಲಿ ಕನ್ನಡ ಪ್ರಜ್ಞೆ ಮೂಡಿಸುವುದೇ ಮನೆ ಮನೆ ಕನ್ನಡ ಜಾಗೃತಿ ಅಭಿಯಾನದ ಗುರಿ” ಎಂದು ಕನ್ನಡ ನಾಡು ನುಡಿಯ ಅಭಿಮಾನ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಬಗ್ಗೆ ಒತ್ತಾಸೆ ಮಾಡಿದರು. ಆ ನಿಟ್ಟಿನಲ್ಲಿ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. ಇದರ ಅಂಗವಾಗಿ ದ.ಕ. ಘಟಕದ ಅಧ್ಯಕ್ಷರಾದ ಡಾ. ಕೊಳ್ಚಪ್ಪೆ ಗೋವಿಂದ ಭಟ್ ಇವರಿಗೆ ಕನ್ನಡ ಧ್ವಜವನ್ನು ನೀಡಿ ಅಭಿಯಾನಕ್ಕೆ ಶುಭ ಹಾರೈಸಿದರು.
“ಕನ್ನಡ ಪ್ರಜ್ಞೆ, ಕನ್ನಡ ನೆಲ, ಜಲ, ಭಾಷೆಯ ಬಗ್ಗೆ ಆತ್ಮಾಭಿಮಾನ ಮೂಡಿಸುವ ನಿಟ್ಟಿನಲ್ಲಿ ಕನ್ನಡ ಕಾರ್ಯಕ್ರಮಗಳನ್ನು ತಳಮಟ್ಟದಲ್ಲಿ ಸಂಘಟಿಸಿ ಕನ್ನಡ ಪ್ರಜ್ಞೆ ಮೂಡಿಸಲು ಸಂಘಟನೆ ಅಹರ್ನಿಷಿ ದುಡಿಯಲಿದೆ” ಎಂದು ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣದಲ್ಲಿ ಅಧ್ಯಕ್ಷತೆ ವಹಿಸಿದ್ದ ಡಾ. ಕೊಳ್ಚಪ್ಪೆ ಗೋವಿಂದ ಭಟ್ ಹೇಳಿದರು. ಮುಖ್ಯ ಅತಿಥಿಯಾಗಿ ಕಥಾಬಿಂದು ಪ್ರಕಾಶಕ ಪಿ.ವಿ. ಪ್ರದೀಪ್ ಕುಮಾರ್, ಕನ್ನಡ ಭವನ ದ.ಕ. ಜಿಲ್ಲಾ ಕಾರ್ಯಧ್ಯಕ್ಷರಾದ ಉಮೇಶ್ ರಾವ್ ಕುಂಬ್ಳೆ, ಸಾಹಿತಿ ಸತ್ಯವತಿ ಭಟ್ ಕೊಳಚಪ್ಪು, ನಿವೃತ್ತ ಆಕಾಶವಾಣಿ ನಿರ್ದೇಶಕ ಮತ್ತು ಸಾಹಿತಿ ಡಾ. ಶಿವಾನಂದ ಬೇಕಲ್ ಕನ್ನಡ ಭಾಷಾ ಸಂಸ್ಕೃತಿ ಬೆಳೆಸುವ ಬಗ್ಗೆ ದಿಕ್ಸೂಚಿ ಭಾಷಣ ಮಾಡಿದರು. ಪ್ರಯೋಜಕರಾದ ಕನ್ನಡ ಚು.ಸಾ.ಪ. ಮಂಗಳೂರು ವಲಯ ಸಂಘಟನಾ ಕಾರ್ಯದರ್ಶಿ ಕವಯತ್ರಿ ಅನಿತಾ ಶೆಣೈ ಇವರಿಗೆ ಈ ಸಂದರ್ಭದಲ್ಲಿ ಕನ್ನಡ ಭವನದ ಪ್ರತಿಷ್ಠಿತ ರಾಜ್ಯಾಂತರ ಪ್ರಶಸ್ತಿಯಾದ ‘ಕನ್ನಡ ಪಯಸ್ವಿನಿ ಪ್ರಶಸ್ತಿ 2025’ಯನ್ನು ಕನ್ನಡ ಭವನದ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಪ್ರದಾನ ಮಾಡಿದರು. ನಂತರ ನಡೆದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಇನ್ನೊರ್ವ ರಾಜ್ಯ ಸಂಚಾಲಕರಾದ ಡಾ. ಶಾಂತಾ ಪುತ್ತೂರು ವಹಿಸಿದರು. ಕವಿಗಳಾದ ಅಪೂರ್ವ ಕಾರಂತ, ಜಯಾನಂದ ಪೆರಾಜೆ, ಕಸ್ತೂರಿ ಜಯರಾಮ್, ಶ್ರೀದೇವಿ ಭಂಡಾರಿ, ಗಾಯತ್ರಿ ಮನೋಹರ, ಪಿ.ವಿ. ಪ್ರದೀಪ್ ಕುಮಾರ್, ಅನಿತಾ ಶೆಣೈ, ಡಾ. ಕೊಳ್ಚಪ್ಪೆ ಗೋವಿಂದ ಭಟ್, ಆರ್.ಎಂ. ಗ್ರೊಗೇರಿ, ಪ್ರತಿಭಾ ಸಾಲಿಯಾನ್ ಸ್ವರಚಿತ ಕವನಗಳನ್ನು ವಾಚಿಸಿದರು. ರೇಖಾ ಸುದೇಶ್ ರಾವ್ ಮತ್ತು ಅಪೂರ್ವ ಕಾರಂತ ಕಾರ್ಯಕ್ರಮ ನಿರ್ವಹಿಸಿದರು.