ಕೋಣಾಜೆ : ‘ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆ ವತಿಯಿಂದ ಮಂಗಳೂರು ವಿಶ್ವವಿದ್ಯಾನಿಲಯ ಡಾ. ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಯಕ್ಷಭಾರತಿ ಪುತ್ತೂರು ಇವರ ಸಹಯೋಗದಲ್ಲಿ ನಡೆಯಲಿರುವ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2025’ ಮಂಗಳೂರಿನ ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ದಿನಾಂಕ 23 ನವೆಂಬರ್ 2025ರಂದು ಉದ್ಘಾಟನೆಗೊಂಡಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ವಿ.ವಿ. ಕುಲಸಚಿವ ಕೆ. ರಾಜು ಮೊಗವೀರ “ಅನೇಕ ಕಲಾಪ್ರಕಾರಗಳ ನಡುವೆ ಯಕ್ಷಗಾನ ನಮ್ಮ ಸಂಸ್ಕೃತಿಯನ್ನು ಪ್ರತಿನಿಧಿಸುವ ಕಲೆಯಾಗಿ ಗುರುತಿಸಿದೆ. ಕರಾವಳಿಯ ಭಾಷೆ, ಸಂಸ್ಕೃತಿ, ಭಾವ ಯಕ್ಷಗಾನದಲ್ಲಿ ಪ್ರಕಟವಾಗುತ್ತವೆ. ಕಲಾವಿದರು ಕಲೆಯ ಆತ್ಮವಾದರೆ ಕಲಾ ಪೋಷಕರು ಕಲೆಯ ಹೃದಯವಿದ್ದಂತೆ. ಯಕ್ಷಗಾನ ಕಲಾವಿದರ ಪುರಾಣ ಜ್ಞಾನ, ಶುದ್ದ ಕನ್ನಡ ಮಾದರಿಯಾದುದು. ಕಲಾವಿದರ ವಿಶ್ಲೇಷಣಾ ಶಕ್ತಿ ಉನ್ನತಮಟ್ಟದಲ್ಲಿರುತ್ತದೆ. ಅವರ ಮೂಲಕ ಸಾಹಿತ್ಯ, ವೈಚಾರಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಲು ಸಾಧ್ಯ” ಎಂದು ಹೇಳಿದರು.


ಕಲಾಪ್ರೇಮಿ, ಕಲಾಪೋಷಕರಾದ ಉದ್ಯಮಿ ರವೀಂದ್ರ ಶೇಟ್ ಅವರು ಯಕ್ಷಗಾನ ರಾಜ್ಯೋತ್ಸವ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.

ಮಂಗಳೂರು ವಿ.ವಿ.ಯ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಧನಂಜಯ ಕುಂಬ್ಳೆಯವರು ಮಾತನಾಡಿ, “ಸಾವಿರಾರು ಕಲಾವಿದರು ಈ ಯಕ್ಷಗಾನ ಕುಟುಂಬದಲ್ಲಿದ್ದಾರೆ. ಯಕ್ಷಗಾನ ಹಲವು ಶತಮಾನಗಳಿಂದ ಹಲವಾರು ಕಲಾವಿದರ ಪರಿಶ್ರಮದ ಮೂಲಕ ಬೆಳೆದು ಬಂದ ಕಲೆಯಾಗಿದೆ. ಈ ಕಲಾವಿದ ಕುಟುಂಬಕ್ಕೆ ಎಂದಿಗೂ ಧಕ್ಕೆಯಾಗುವ ಮಾತನ್ನಾಡದೆ ಗೌರವಿಸೋಣ” ಎಂದು ಹೇಳಿದರು.

ಅಧ್ಯಕ್ಷತೆಯನ್ನು ಎ.ಜೆ. ಸಂಸ್ಥೆಯ ಸಂಚಾಲಕ ಡಾ. ಎ.ಜೆ. ಶೆಟ್ಟಿಯವರು ವಹಿಸಿದ್ದು, “ಕಳೆದ ಹಲವಾರು ವರ್ಷಗಳಿಂದ ತಾಳಮದ್ದಳೆಯ ಸಪ್ತಾಹ ಆಯೋಜಿಸುವ ಮೂಲಕ ಯಕ್ಷಾಂಗಣ ಸಂಸ್ಥೆಯು ಯಕ್ಷಗಾನದ ಸೇವೆ, ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಾ ಬರುತ್ತಿರುವುದು ಶ್ಲಾಘನೀಯ” ಎಂದರು.
ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಸ್ಮಾರ್ಟ್ ಸಿಟಿಯ ಜನರಲ್ ಮ್ಯಾನೇಜರ್ ಅರುಣ್ ಪ್ರಭಾ, ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್, ವಿ.ವಿ. ಕಾಲೇಜು ಪ್ರಾಂಶುಪಾಲ ಗಣಪತಿ ಗೌಡ ಮೊದಲಾದವರಿದ್ದರು. ಯಕ್ಷಾಂಗಣದ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿಯವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ತೋನ್ಸೆ ಪುಷ್ಕಲ್ ಕುಮಾರ್ ವಂದಿಸಿ, ಸಂಚಾಲಕ ರವೀಂದ್ರ ರೈ ಕಲ್ಲಿಮಾರ್ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ತುಳು ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ದಿವೀತ್ ಪೆರಾಡಿ ರಚನೆಯ ‘ಮಿತ್ತ ಲೋಕದ ಪತ್ತೆ’ ಯಕ್ಷಗಾನ ತಾಳಮದ್ದಳೆ ಪ್ರಸ್ತುತಗೊಂಡಿತು.

