Subscribe to Updates

    Get the latest creative news from FooBar about art, design and business.

    What's Hot

    ಪರಿಚಯ ಲೇಖನ | ಯಕ್ಷರಂಗದ ಕ್ರಿಯಾಶೀಲ ಪ್ರತಿಭೆ – ಸುಜನ್ ಕುಮಾರ್ ಅಳಿಕೆ

    May 25, 2025

    ವಿಶೇಷ ಲೇಖನ | ಸುಗಮ ಸಂಗೀತದ ಸರದಾರ ‘ಯಶವಂತ ಹಳಿಬಂಡಿ’

    May 25, 2025

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವ್ಯಕ್ತಿ ಪರಿಚಯ | ‘ಬೀchi’ ಎಂಬ ಹಾಸ್ಯದ ಚಕ್ರವರ್ತಿ
    Article

    ವ್ಯಕ್ತಿ ಪರಿಚಯ | ‘ಬೀchi’ ಎಂಬ ಹಾಸ್ಯದ ಚಕ್ರವರ್ತಿ

    April 26, 2024No Comments4 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕನ್ನಡ ಸಾರಸ್ವತ ಲೋಕ ಕಂಡಂತಹ ಅತ್ಯಂತ ಅಪರೂಪದ ಮತ್ತು ಅನರ್ಘ್ಯ ರತ್ನ ಬೀಚೀ ಅಂದರೆ ಅತಿಶಯೋಕ್ತಿಯಾಗದು. ಕನ್ನಡ ಸಾಹಿತ್ಯ ಲೋಕದಲ್ಲಿ ಕರ್ನಾಟಕದ ‘ಜಾರ್ಜ್ ಬರ್ನಾಡ್ಷಾಘ’ ಎಂಬ ಬಿರುದನ್ನು ಅವರು ಪಡೆದಿದ್ದರು. ಅತ್ಯಂತ ಮಾರ್ಮಿಕನಾಗಿ, ಸಂವೇದನಾಶೀಲರಾಗಿ ಮತ್ತು ಚುರುಕು ಮುಟ್ಟಿಸುವ ರೀತಿಯಲ್ಲಿ ಭಾಷೆಯನ್ನು ಬಳಸಿದ ಕೆಲವೇ ಕೆಲವು ಅಗ್ರಗಣ್ಯ ಹಾಸ್ಯ ಕವಿಗಳಲ್ಲಿ ಬೀಚೀಯವರೂ ಒಬ್ಬರು. ಅವರ ಪೂರ್ತಿ ಹೆಸರು ರಾಯಸಂ ಭೀಮಸೇನ ರಾವ್ ಎಂಬುದಾಗಿದೆ. ಆದರೆ ಅವರ ಕಾವ್ಯನಾಮ ಎಷ್ಟು ಚಿರಪರಿಚಿತವಾಗಿದೆ ಎಂದರೆ ಅವರ ಮೂಲ ಹೆಸರನ್ನು ಎಲ್ಲರೂ ಮರೆತು ಹೋಗುವಷ್ಟರ ಮಟ್ಟಿಗೆ ಅವರು ‘ಬೀಚೀ’ ಎಂಬ ಹೆಸರಿನಿಂದ ಪ್ರಸಿದ್ದರಾಗಿದ್ದರು. ಕನ್ನಡದ ಬಗ್ಗೆ ಅಪರಿಮಿತವಾದ ಗೌರವ ಮತ್ತು ಪ್ರೀತಿ ಇದ್ದ ಕಾರಣದಿಂದ ತಮ್ಮ ಕಾವ್ಯನಾಮ ‘ಬೀಚೀ’ ಬದಲಾಗಿ ‘ಬೀchi’ ಎಂದು ಬರೆದು ನಾನು ಇಂಗ್ಲೀಷಿಗಿಂತ ಕನ್ನಡಕ್ಕೇ ಆದ್ಯತೆ ನೀಡುತ್ತೇನೆ ಎಂದು ಪರೋಕ್ಷವಾಗಿ ಓದುಗರಿಗೆ ಮತ್ತು ನಾಡಿನ ಜನರಿಗೆ ಸಂದೇಶ ನೀಡಿದ್ದರು. 1913 ಏಪ್ರಿಲ್ 23ರಂದು ಹರಪನ ಹಳ್ಳಿಯಲ್ಲಿ (ಈಗಿನ ವಿಜಯನಗರ ಜಿಲ್ಲೆ) ಜನಿಸಿ, 67 ವರ್ಷಗಳ ತುಂಬು ಜೀವನ ನಡೆಸಿ 1980, ಡಿಸೆಂಬರ್ 07ರಂದು ಮರಣಿಸಿದರು. ಸಂಪ್ರದಾಯಸ್ಥ ಮಾಧ್ವ ಕುಟುಂಬವೊಂದರಲ್ಲಿ ಆರ್. ಶ್ರೀನಿವಾಸರಾಯರು ಮತ್ತು ಭಾರತಮ್ಮ ದಂಪತಿಗಳ ಎರಡನೇ ಮಗನಾಗಿ ಬೀchi ಜನಿಸಿದರು. ಎಸ್.ಎಸ್.ಎಲ್.ಸಿ.ವರೆಗೆ ಕಲಿತ ಅವರು ಪೊಲೀಸ್ ಇಲಾಖೆಯಲ್ಲಿ ಅಟೆಂಡರ್ ಆಗಿ ವೃತ್ತಿ ಜೀವನ ಆರಂಭಿಸಿದ್ದರು.

    ಅಪ್ರತಿಮ ವ್ಯಂಗ ಶೈಲಿಯಲ್ಲಿ ಬೀಚೀಯವರು ಕನ್ನಡ ಭಾಷೆಯ ಬೇರುಗಳೊಳಗೆ ನೀರಿನಂತೆ ಇಳಿದು, ಅದರ ಒಳ ಮೈಯ ಇಕ್ಕಟ್ಟಾದ ಸ್ಥಳಗಳನ್ನು ಶೋಧಿಸುವ ಕೆಲಸವನ್ನು ಅತ್ಯಂತ ಮಾರ್ಮಿಕವಾಗಿ ಮನಮುಟ್ಟುವಂತೆ ಕೈಗೊಂಡು ಕನ್ನಡಿಗರ ಜನ ಮಾನಸದಲ್ಲಿ ಅಜರಾಮರರಾದರು.

    ಆರಂಭದಲ್ಲಿ ಪ್ರಸಿದ್ಧ ಇಂಗ್ಲೀಷ್ ಕಾದಂಬರಿಗಳ ನಗೆ ಚುಟುಕುಗಳ ಸಾಮಾಗ್ರಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು. ಅವರ ಅನುವಾದದಲ್ಲಿ ಕನ್ನಡದ ಮತ್ತು ಭಾಷಾ ಪ್ರಜ್ಞೆಯ ಛಾಪು ಇದೆ. ತನ್ನದೇ ವಿಶಿಷ್ಟ ಶೈಲಿಯಲ್ಲಿ ಶಬ್ದಗಳ ಬೆನ್ನು ಹತ್ತಿ, ಅದರ ವಕ್ರಗತಿಗಳನ್ನು ತೋರಿಸಿಕೊಡುವುದು ಮತ್ತು ಹಾಸ್ಯದೃಷ್ಟಿಯನ್ನಿರಿಸಿಕೊಂಡು ಶಬ್ದದ ಆಚೆ ಈಚೆಗೆ ವಿಚಾರದ ಮಗ್ಗುಲುಗಳನ್ನು ಅವರು ಬಹಳ ಸಲೀಸಾಗಿ, ಲೀಲಾಜಾಲವಾಗಿ ಮಾರ್ಮಿಕವಾಗಿ ಹೊರಹಾಕುತ್ತಿದ್ದರು. ಎಲ್ಲರಂತೆ ಬೀಚೀಯವರಿಗೆ ಮೊದಲು ಕನ್ನಡದ ಬಗ್ಗೆ ತಾತ್ಸರ ಮತ್ತು ಅಸಡ್ಡೆ ಇತ್ತು. ಅವರ ಪತ್ನಿಗೆ ಕನ್ನಡ ಅಭಿಮಾನ ಮತ್ತು ಹುಚ್ಚು ಸ್ವಲ್ಪ ಹೆಚ್ಚೇ ಇತ್ತು. ಅವರ ಪತ್ನಿಯ ಒತ್ತಾಯಕ್ಕೆ ಮಣಿದು ತಿರಸ್ಕಾರದ ಭಾವದಿಂದಲೇ ಪುಸ್ತಕದ ಅಂಗಡಿಗೆ ಹೋಗಿ “ಯಾವುದಾದರೂ ಕನ್ನಡ ಪುಸ್ತಕ ಕೊಡಿ, ರೈಲ್ವೆ ಟೈಮ್ ಟೇಬಲ್ ಪುಸ್ತಕ ಕೊಟ್ಟರೂ ಅಡ್ಡಿ ಇಲ್ಲ ಆದರೆ ಕನ್ನಡದಲ್ಲಿ ಇರಬೇಕು ಎಂದರಂತೆ. ಪುಣ್ಯಕ್ಕೆ ಅಂಗಡಿಯವ ಕೊಟ್ಟ ಪುಸ್ತಕ ‘ಸಂಧ್ಯಾ ರಾಗ’ ಎಂಬ ಕಾದಂಬರಿ. ಅದನ್ನು ರೈಲು ಪ್ರಯಾಣದ ಸಮಯದಲ್ಲಿ ಕದ್ದು ಓದಿದ ಬೀಚೀ ಸದ್ದಿಲ್ಲದೆ ಕನ್ನಡದ ಪ್ರೇಮಿಯಾದರು. ಆ ಬಳಿಕ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. ಹಾಸ್ಯ ಬರಹ ಬರೆಯಲು ಆರಂಭಿಸಿದರು. ಮುಂದೆ ನಡೆದದ್ದು ಇತಿಹಾಸ.

    ಬೀಚೀ ಅವರ ಹೆಚ್ಚಿನ ಎಲ್ಲಾ ಬರಹಗಳಿಗೆ ನಾಯಕ ತಿಂಮ. ಅದೇ ತಿಂಮನ ವಿಚಾರವಾಗಿ ಅವರ ವ್ಯಾಖ್ಯಾನ ಹೀಗಿದೆ. “ಯಾವೊಬ್ಬ ತಿರುಮಲರಾಯನನ್ನಾಗಲಿ, ತಿಂಮಪ್ಪನನ್ನಾಗಲಿ ಮುಂದಿಟ್ಟುಕೊಂಡು ಇದನ್ನು ಬರೆದಿಲ್ಲ. ಮಕ್ಕಳ ಆಟದಲ್ಲಿ, ಗೆಳೆಯರ ಕೂಟದಲ್ಲಿ ಹಿರಿ ಕಿರಿಯರ, ಕಿರಿ ಹಿರಿತನಗಳಲ್ಲಿ, ಚತುರರ ಹೆಡ್ಡತನದಲ್ಲಿ, ಹೆಡ್ಡರ ದೊಡ್ಡತನದಲ್ಲಿ ಕಂಡು ಕೇಳಿದ ಚೇಷ್ಟೆಗಳಿಗೆಲ್ಲ ಪಾಪ ತಿಂಮನನ್ನೇ ನಾಯಕನನ್ನಾಗಿ ಒಡ್ಡಿದ್ದೇನೆ. ತಿಂಮನ ನಗು ದೇಹವಾದರೆ, ಆ ನಗುವಿನ ಹಿಂದೆ ಹುದುಗಿಕೊಂಡಿರುವ ನೋವೇ ಜೀವ. ಅದನ್ನು ಗುರುತಿಸದಿದ್ದರೆ ದೊರೆಯುವುದು ತಿಂಮನ ಹೆಣ ಮಾತ್ರ.

    ಬೀಚೀಯವರು ಸುಮಾರು 66 ಕೃತಿಗಳನ್ನು ರಚಿಸಿದ್ದು, ಅವುಗಳಲ್ಲಿ 35 ಕಾದಂಬರಿಗಳು. ಅಂದನಾ ತಿಂಮ, ತಿಂಮ ಸತ್ತಾಗ, ತಿಂಮನ ತಲೆ, ತಿಂಮಾಯಣ, ತಿಮ್ಮಿಕ್ಷನರಿ, ತಿಂಮ ರಸಾಯನ, ಉತ್ತರ ಭೂಪ, ತೋಚಿದ್ದು ಗೀಚಿದ್ದು, ಸುಬ್ಬ, ಸಾಹೂಕಾರ ಸುಬ್ಬಮ್ಮ, ಮೇಡಮ್ಮನ ಗಂಡ, ಬೀಚೀ ಬುಲೇಟಿನ್, ಅಮ್ಮಾವ್ರ ಕಾಲ್ಗುಣ, ಆರಿದ ಚಹಾ.. ಇವುಗಳು ಬಹಳ ಪ್ರಸಿದ್ಧ ಕಾದಂಬರಿಗಳು. ಅವರ ಅಂಕಣಬರಹಗಳಾದ ಕೆನೆಮೊಸರು (ವಿಶಾಲ ಕರ್ನಾಟಕ), ಬೇವಿನ ಕಟ್ಟಿ (ರೈತ), ನೀವು ಕೇಳಿವಿರಿ (ಸುಧಾ) ಬಹಳ ವಿಶ್ವ ವಿಖ್ಯಾತಿಯನ್ನು ಅವರಿಗೆ ತಂದುಕೊಟ್ಟಿತು. ಅವರ ಆತ್ಮಕತೆ ‘ನನ್ನ ಭಯಾಗ್ರಫಿ’ ಕೂಡಾ ಅವರ ಮನೋಸ್ಥಿತಿಗೆ ಹಿಡಿದ ಕೈಗನ್ನಡಿ ಎಂದರೂ ತಪ್ಪಾಗಲಾರದು

    ಭೀಮಸೇನ ಹೇಗೆ ಬೀಚೀಯಾದ್ದದು?
    ಬೀಚೀಯವರ ನಿಜ ನಾಮಧೇಯದಲ್ಲಿ ಹೆದರಿಕೆ ಹುಟ್ಟಿಸುವಂತಹ ಬಲಶಾಲಿಯಾದ ಭೀಮಸೇನ ಇದ್ದಾನೆ. ಆದರೂ ತಾನು ಯಾಕೆ ಬೀಚೀಯಾದೆ ಎಂಬುದರ ಬಗ್ಗೆ, ಅವರ ಹೆಸರಿನ ಬಗ್ಗೆ ಅವರ ನೀಡಿದ ವ್ಯಾಖ್ಯಾನ ಅತ್ಯಂತ ಮಾರ್ಮಿಕವಾಗಿದೆ. “ಪಾರ್ಥಸಾರಥಿ ಪಾಚು ಆಗುತ್ತಾನೆ, ನಾರಾಯಣ ನಾಣಿ, ಅಂತೆಯೇ ಭೀಮಸೇನ ಬೀಚೀಯಾದ. ಅವರಿವರ ಬಾಯಿಯಲ್ಲಿ ಹಾಗಾದುದೇ ಒಳ್ಳೆಯದಾಯಿತು. ಸದಾ ಕರುಳಿನ ಬೇನೆಯಿಂದ ನರಳುವ ಈ ಹೊಟ್ಟೆ ರೋಗಿ ‘ಭೀಮಸೇನ ಹೇಗಾದಾನು?’” (ವಾಸ್ತವದಲ್ಲಿ ಬೀಚೀಯವರಿಗೆ ಕುಡಿತದ ಚಟವಿತ್ತು ಮತ್ತು ಯಾವತ್ತೂ ಹೊಟ್ಟೆ ನೋವು ಕಾಡುತ್ತಿತ್ತು. ನೋಡಲೂ ಕೂಡ ಕಡ್ಡಿ ಪೈಲ್ವಾನ್ ತರ ಪೀಚಲು, ಪೀಚಲಾಗಿ ಇರುತ್ತಿದ್ದರು) ಹೀಗಾಗಿ ಈ ಕಾಚಿಕಡ್ಡಿ ಪೈಲುವಾನ್ ಅವರ ಅಮ್ಮನ ಮುದ್ದಿನ ನುಡಿಗತ್ತರಿಗೆ ಸಿಲುಕಿ ಬೀಚೀಯಾದ ಎಂದು ಅವರು ಅತ್ಯಂತ ಹಾಸ್ಯಮಯವಾಗಿ ತಮ್ಮನ್ನೇ ಹಾಸ್ಯದ ವಸ್ತುವಾಗಿ ಮಾಡಿಕೊಂಡು ತಮ್ಮ ಹೆಸರಿನ ಹಿಂದಿನ ರಹಸ್ಯವನ್ನು ಜಗತ್ತಿಗೆ ತೆರೆದಿಟ್ಟಿದ್ದರು.

    ಕೊನೆ ಮಾತು :
    ಬೀಚಿಯವರ ಮೊದಲ ಕಾದಂಬರಿ ‘ದಾಸರಕೂಟ’, 1945ರಲ್ಲಿ ಪ್ರಕಟಣೆಯಾಯಿತು. ಆಗ ಅವರಿಗೆ 32 ವರ್ಷ ವಯಸ್ಸು ಆಗಿತ್ತು. ಈ ಪುಸ್ತಕ ಅವರಿಗೆ ಬಹಳಷ್ಟು ಖ್ಯಾತಿ ಮತ್ತು ಹೆಸರು ತಂದು ಕೊಟ್ಟಿತು. ಆ ಬಳಿಕ ಅವರು ಅತ್ಯಂತ ಪರಿಣಾಮಕಾರಿಯಾಗಿ ಸಮಾಜದ ಜ್ವಲಂತ ಸಮಸ್ಯೆಗಳನ್ನು ಬಣ್ಣಿಸಿ ಜನಪ್ರತಿಸಿಧಿಗಳಿಗೆ ಮತ್ತು ಸರಕಾರಕ್ಕೆ ಚುರುಕು ಮುಟ್ಟಿಸುವ ಕಲೆಯನ್ನು ಕರಗತ ಮಾಡಿಕೊಂಡರು. ಸಮಾಜದ ಜನರ ಮನೋಸ್ಥಿತಿಯನ್ನು, ರಾಜಕಾರಣಿಗಳ ಎಡೆಬಿಡಂಗಿತನವನ್ನು ಅತ್ಯಂತ ಕಟುಶಬ್ದಗಳಲ್ಲಿ ವ್ಯಂಗ್ಯವಾಗಿ ಹೇಳಿ ದಾರಿಗೆ ತರುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದರು. ಕನ್ನಡ ಹಾಸ್ಯ ಸಾಹಿತ್ಯ ಲೋಕ ಕಂಡಂತಹಾ ಅತ್ಯಂತ ಪ್ರತಿಭಾನ್ವಿತ ಮತ್ತು ವಿಶಿಷ್ಟ ಶೈಲಿಯ ಲೇಖಕರು ಅವರಾಗಿದ್ದರು. ಅವರ ನೆನಪಿಗಾಗಿ ಭಾರತೀಯ ಅಂಚೆ ಇಲಾಖೆ ವಿಶೇಷ ಅಂಚೆ ಕವರನ್ನು ಹೊರ ತಂದು ಅವರ ಸಾಹಿತ್ಯ ಸೇವೆಯನ್ನು ಗುರುತಿಸಿತ್ತು. ಅವರ ಬರವಣಿಗೆಯಲ್ಲಿನ ಹೊಸತನ, ಅಸಾಂಪ್ರದಾಯಕವಾದ ಬರವಣಿಗೆ ಶೈಲಿ, ವ್ಯಂಗಭರಿತ ಬರವಣಿಗೆ ಮತ್ತು ತಾಜಾತನ ಅವರನ್ನು ಕನ್ನಡ ಸಾರಸ್ವತ ಲೋಕದ ಮಿನುಗುತಾರೆಯನ್ನಾಗಿಸಿತು ಎಂದರೆ ಅತಿಶಯೋಕ್ತಿಯಾಗಲಾರದು. ಯಾವ ವಿಚಾರವನ್ನು ಮುಚ್ಚಿಡದೆ, ಸಮಾಜದ ಎಲ್ಲಾ ಜನರ ಮತ್ತು ಜನನಾಯಕರ ಎಡೆ ಬಿಡಂಗಿತನವನ್ನು ಬಹಳ ಸುಲಲಿತವಾಗಿ ತೆರೆದಿಟ್ಟು, ಸಾರ್ವಜನಿಕವಾಗಿ ಅವರನ್ನು ಬೆತ್ತಲು ಮಾಡಿ ಕೆಲಸ ಮಾಡಿಸಿಕೊಳ್ಳುವ ಚಾಕಚಕ್ಯತೆ ಅವರ ಲೇಖನಿಗೆ ಇತ್ತು. ನಮ್ಮ ಈಗಿನ ಮುಖವಾಡದ ಬದುಕು ಬದುಕುವ ಜನರನ್ನು ಮತ್ತು ಜನನಾಯಕರನ್ನು ಸರಿದಾರಿಗೆ ತರಲು ಅಂತಹಾ ಮಹಾನ್ ವ್ಯಕ್ತಿ ಬೀಚಿಯವರ ಅತೀ ಅಗತ್ಯ ಎಂದರೂ ತಪ್ಪಾಗಲಾರದು.

    ಡಾ. ಮುರಲೀ ಮೋಹನ್‍ ಚೂಂತಾರು (ಮೊ : 9845135787)

    ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ‘ಚೂಂತಾರು’ ಎಂಬಲ್ಲಿ ಜನಿಸಿದ ಮುರಲೀ ಮೋಹನ ಚೂಂತಾರು ಶ್ರೀಮತಿ ಸರೋಜಿನಿ ಭಟ್ ಮತ್ತು ಲಕ್ಷ್ಮೀನಾರಾಯಣ ಭಟ್ ದಂಪತಿಗಳ ಸುಪುತ್ರ. ಸರಕಾರಿ ಮೆರಿಟ್ ಕೋಟಾದಲ್ಲಿ ಸರಕಾರಿ ದಂತ ವೈದ್ಯಕೀಯ ಕಾಲೇಜು ಬೆಂಗಳೂರು ಇಲ್ಲಿ ಉಚಿತ ಅರ್ಹತೆ ಪಡೆದು ಬಿ.ಡಿ.ಎಸ್. ಪದವಿ, ಎಂ.ಡಿ.ಎಸ್. ಸೀಟನ್ನು ಕೂಡ ಸರಕಾರಿ ಕೋಟಾದಲ್ಲಿಯೇ ಪಡೆದ ಇವರು ದಂತ ವೈದ್ಯಕೀಯ ಶಾಸ್ತ್ರದಲ್ಲಿ ಡಿ.ಎನ್.ಬಿ. ಪದವಿಯನ್ನು ಪಡೆದಿದ್ದಾರೆ.

    ದಂತ ವೈದ್ಯರಾದರೂ ಬರವಣಿಗೆಯ ಕಲೆಯನ್ನು ಕರಗತಗೊಳಿಸಿಕೊಂಡ ಇವರು ಸಾಹಿತ್ಯಾಸಕ್ತರೂ ಹೌದು. ‘ರಕ್ತದಾನ ಜೀವದಾನ’, ‘ಸುರಕ್ಷಾ ದಂತ ಆರೋಗ್ಯ ಮಾರ್ಗದರ್ಶಿ’, ‘ಕಚಗುಳಿ’ ದಂತ ಹನಿಗವನಗಳು, ‘ಚಿತ್ರಾನ್ನ 32 ನೈಜ ದಂತಕತೆಗಳು’, ‘ಸಂಜೀವಿನಿ ಆರೋಗ್ಯ ಮಾರ್ಗದರ್ಶಿ’, ‘ಸಂಜೀವಿನಿ ಆರೋಗ್ಯ ಮಾರ್ಗದರ್ಶಿ ಭಾಗ-2’, ‘ಅರಿವು ಬಾಯಿ ಕ್ಯಾನ್ಸರ್ ಮಾರ್ಗದರ್ಶಿ’, ‘ಸಂಗಾತಿ ಜ್ವರ ಸಂಹಿತೆ’, ‘ಧನ್ವಂತರಿ ವೈದ್ಯಕೀಯ ಲೇಖನಗಳು’, ‘ಸುಮುಖ ದಂತ ಆರೋಗ್ಯ ಮಾರ್ಗದರ್ಶಿ’, ‘ಸಂಕಲ್ಪ-2020 ಕೋವಿಡ್ -19 ಆರೋಗ್ಯ ಮಾರ್ಗದರ್ಶಿ’, ‘ಅಶೀತಿ ಮತ್ತು ಸ್ವಾದ ಆಹಾರ ಸಂಹಿತೆ’ ಎಂಬಂತೆ 13 ಕೃತಿಗಳನ್ನು ಈವರೆಗೆ ಬರೆದು ಪ್ರಕಟಿಸಿದ್ದಾರೆ.

    ಈವರೆಗೂ ಸುಮಾರು 5000 ಆರೋಗ್ಯ ಜಾಗೃತಿ ಲೇಖನಗಳನ್ನು ಬರೆದು ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡಿದ ಡಾ. ಮುರಲಿಯವರ ಅಗಾಧ ಸೇವೆಯನ್ನು ಗುರುತಿಸಿ ಬೆಂಗಳೂರಿನ ರಾಜೀವ್ ಗಾಂಧಿ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯ ಕರ್ನಾಟಕ ಸರಕಾರ 2020ನೇ ಸಾಲಿನ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ಮತ್ತು ಕಲಬುರಗಿಯ ಶಂಕರ್ ಪ್ರತಿಷ್ಠಾನ 2000ನೇ ಇಸವಿಯ ‘ಶ್ರೀ ವೈದ್ಯಸಾಹಿತಿ ಪ್ರಶಸ್ತಿ’ ನೀಡಿ ಗೌರವಿಸಿದೆ. ಪ್ರಕೃತ ಹೊಸಂಗಡಿ – ಮಂಜೇಶ್ವರ ಹೃದಯಭಾಗದಲ್ಲಿ ‘ಸುರಕ್ಷಾ ದಂತ ಚಿಕಿತ್ಸಾಲಯ’ವನ್ನು ತೆರೆದು ತಮ್ಮ ಧರ್ಮಪತ್ನಿ ಡಾ. ರಾಜಶ್ರೀ ಮೋಹನ್ ಇವರ ಜೊತೆಗೂಡಿ ದಂತ ಸಂಬಂಧಿ ತೊಂದರೆಗಳಿಗೆ ಪರಿಹಾರ ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Article‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮದಲ್ಲಿ ಬೆಂಗಳೂರಿನ ವಿದುಷಿ ಸ್ಮೃತಿ ಸುರೇಶ್ ಇವರ ನೃತ್ಯ ಪ್ರದರ್ಶನ | ಏಪ್ರಿಲ್ 29
    Next Article ಕೊಪ್ಪಳದಲ್ಲಿ ನಡೆಯಲಿರುವ ‘ಮೇ ಸಾಹಿತ್ಯ ಮೇಳ’ದ ‘ಕಲಾ ಶಿಬಿರ’ಕ್ಕೆ ಕಲಾವಿದರಿಗೆ ಆಹ್ವಾನ
    roovari

    Add Comment Cancel Reply


    Related Posts

    ಪರಿಚಯ ಲೇಖನ | ಯಕ್ಷರಂಗದ ಕ್ರಿಯಾಶೀಲ ಪ್ರತಿಭೆ – ಸುಜನ್ ಕುಮಾರ್ ಅಳಿಕೆ

    May 25, 2025

    ವಿಶೇಷ ಲೇಖನ | ಸುಗಮ ಸಂಗೀತದ ಸರದಾರ ‘ಯಶವಂತ ಹಳಿಬಂಡಿ’

    May 25, 2025

    ಪುಸ್ತಕ ವಿಮರ್ಶೆ | ‘ವ್ಯಥೆ ಕಥೆ’ ಕನ್ನಡದ ವಿಶಿಷ್ಟವಾದ ಕಿರು ಕಾದಂಬರಿ

    May 24, 2025

    ‘ಭಾಷಾಂತರ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜೂನ್ 20

    May 24, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.