ಉಡುಪಿ : ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯದ ಕರಕುಶಲ ಅಭಿವೃದ್ಧಿ ಮಂಡಳಿಯ ವತಿಯಿಂದ ಕಾವಿ ಕಲೆಯ ವಿನ್ಯಾಸಗಳ ಅಭಿವೃದ್ಧಿ ಕಾರ್ಯಾಗಾರವು ದಿನಾಂಕ 15 ನವೆಂಬರ್ 2025ರಂದು ಹಾವಂಜೆಯ ಭಾಸ ಗ್ಯಾಲರಿ ಮತ್ತು ಸ್ಟುಡಿಯೋದಲ್ಲಿ ಪ್ರಾರಂಭವಾಯಿತು.

ಹಾವಂಜೆ ಗ್ರಾಮ ಪಂಚಾಯತ್ನ ಉಪಾಧ್ಯಕ್ಷರಾದ ಗುರುರಾಜ ಕಾರ್ತಿಬೈಲು ಇವರು ಈ ಕಾರ್ಯಾಗಾರವನ್ನು ಉದ್ಘಾಟನೆಗೊಳಿಸಿ “ಈ ರೀತಿಯ ಕಾರ್ಯಾಗಾರಗಳು ನಮ್ಮ ಹಳ್ಳಿಯಲ್ಲಿ ನಡೆಯುತ್ತಿರುವುದು ನಮಗೊಂದು ಹೆಮ್ಮೆ, ಕಾವಿ ಕಲೆಯನ್ನು ಬೆಳೆಸಿ, ಗ್ರಾಮೋದ್ಯೋಗವನ್ನು ಸೃಜಿಸುವ ಡಾ. ಹಾವಂಜೆಯವರ ಪ್ರಯತ್ನ ಶ್ಲಾಘನೀಯ” ಎಂಬುದಾಗಿ ಹೇಳಿದರು.

“ಮಣ್ಣಿನ ಉತ್ಪನ್ನಗಳು, ಬಟ್ಟೆ, ಮರ ಮೊದಲಾದ ವಿವಿಧ ಮಾಧ್ಯಮದಲ್ಲಿ ಕಾವಿ ಕಲೆಯ ವಿನ್ಯಾಸಗಳನ್ನು ಬೆಳೆಸುವ ಈ ಕಾರ್ಯಾಗಾರವು ಸುಮಾರು 25 ದಿನಗಳ ಕಾಲ ನಡೆಯಲಿದ್ದು, ಉಡುಪಿ ಭಾಗದ ಕಲಾವಿದರು ಇದರಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಾಗಾರವು ಕಾವಿ ಕಲೆಯ ವಿನ್ಯಾಸಗಳನ್ನು ಉತ್ತೇಜಿಸುವುದು ಹಾಗೂ ದಿನಬಳಕೆಯ ವಸ್ತುಗಳಲ್ಲಿ ಅದನ್ನು ತರುವ ಪ್ರಯತ್ನ” ಎಂಬುದಾಗಿ ಕಾರ್ಯಾಗಾರದ, ಸಂಪನ್ಮೂಲ ವ್ಯಕ್ತಿ ಹಾಗೂ ಕಾವಿ ಕಲಾವಿದ ಡಾ. ಜನಾರ್ದನ ಹಾವಂಜೆ ತಿಳಿಸಿದರು.

ದೆಹಲಿಯ ವಿನ್ಯಾಸಗಾರ ಬ್ರಿಜೇಶ್ ಜೈಸ್ವಾಲ್ ಈ ಕಾರ್ಯಾಗಾರದಲ್ಲಿ ಕಲಾವಿದರುಗಳ ವಿನ್ಯಾಸಗಳ ಬೆಳವಣಿಗೆಗೆ ಸಹಕರಿಸುವರಲ್ಲದೇ ವಿವಿಧ ಮಾಧ್ಯಮಗಳ ಮೇಲೆ ಇದರ ಬಳಕೆಯ ಸಾಧ್ಯತೆಯನ್ನು ಪ್ರಯೋಗಿಸುತ್ತಾರೆ. ಪುತ್ತೂರಿನ ಕುಂಬಾರರ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಜನಾರ್ದನ ಮೂಲ್ಯ, ಕರಕುಶಲ ನಿಗಮದ ಹೆಚ್.ಪಿ.ಒ. ಸುಪ್ರಿಯಾ ಭಾರದ್ವಾಜ್ ಹಾಗೂ ಕಾವಿ ಆರ್ಟ್ ಫೌಂಡೇಶನ್ನ ಮಂಜುನಾಥ ರಾವ್ ಉಪಸ್ಥಿತರಿದ್ದರು.
