ಕಾಸರಗೋಡು : ಕರ್ನಾಟಕ ರಾಜ್ಯದ ಹಿರಿಯ ರಂಗಭೂಮಿ ಮತ್ತು ಸಾಂಸ್ಕೃತಿಕ ಸಂಘಟನೆಯಾದ ವಿ.ಕೆ.ಎಂ. ಕಲಾವಿದರು (ರಿ.) ಬೆಂಗಳೂರು ಇದರ 44ನೇ ಸಂಸ್ಥಾಪನಾ ವರ್ಷಾಚರಣೆಯ ಅಂಗವಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಬೆಂಗಳೂರು ಇದರ ಪ್ರಾಯೋಜಕತ್ವದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕನ್ನಡ ಗ್ರಾಮ ಕಾಸರಗೋಡು ಇದರ ಸಹಯೋಗದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ ದಿನಾಂಕ 27 ಮಾರ್ಚ್ 2025ರಂದು ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ ಹಳೆ ನಾಟಕಗಳ ಸವಿನೆನಪು, ಕಾಸರಗೋಡು ಕನ್ನಡ ನಾಟಕೋತ್ಸವದಲ್ಲಿ ನಾಲ್ಕು ಕನ್ನಡ ನಾಟಕಗಳ ಪ್ರದರ್ಶನ ಮತ್ತು ಕರ್ನಾಟಕ ಗಡಿನಾಡ ಉತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ವಿ.ಕೆ.ಎಂ. ಕಲಾವಿದರು (ರಿ.) ಬೆಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ಸಿ.ಎಂ. ತಿಮ್ಮಯ್ಯ ಬೆಂಗಳೂರು ಇವರ ಸಾರಥ್ಯದಲ್ಲಿ ಈ ನಾಲ್ಕು ಕನ್ನಡ ನಾಟಕಗಳು ಗಡಿನಾಡಿನ ಕಾಸರಗೋಡು ಕನ್ನಡ ಗ್ರಾಮದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿರುತ್ತದೆ.
ಬೆಂಗಳೂರಿನ ರೂಪ ಕಲಾನಿಕೇತನ ಅಭಿನಯಿಸುವ ಎನ್.ಎಸ್. ರಾವ್ ವಿರಚಿತ ‘ವರ ಭ್ರಷ್ಟ’ ಕನ್ನಡ ನಾಟಕ ನಿರ್ದೇಶನ : ಡಿ. ವೆಂಕಟರಮಣಯ್ಯ (ಅಪ್ಪಾಜಿ), ಬೆಂಗಳೂರು
ಬೆಂಗಳೂರಿನ ರಂಗಸೇತುವೆ ಟ್ರಸ್ಟ್ ಅಭಿನಯಿಸುವ, ರಚನೆ : ಡಾ. ಪ್ರಭು ಶಂಕರ ಅವರ ‘ಅಂಗುಲೀಮಾಲಾ’ ಕನ್ನಡ ನಾಟಕ, ನಿರ್ದೇಶನ ಮತ್ತು ಸಂಗೀತ : ಐ.ಟಿ.ಐ.ಆರ್. ರಾಮಮೂರ್ತಿ, ಬೆಂಗಳೂರು
ಬೆಂಗಳೂರಿನ ವಿ.ಕೆ.ಎಂ. ಕಲಾವಿದರು (ರಿ.) ಅಭಿನಯಿಸುವ ಎನ್.ಎಸ್ . ರಾವ್ ಅವರ ‘ರಣದುಂದುಭಿ’ ಕನ್ನಡ ನಾಟಕ. ನಿರ್ದೇಶನ : ಡಿ. ವೆಂಕಟರಮಣಯ್ಯ, ಸಿ.ಎಂ. ತಿಮ್ಮಯ್ಯ ಬೆಂಗಳೂರು
ಧಾರವಾಡದ ರಂಗ ಪರಿಸರ ಅಭಿನಯಿಸುವ ಎಂ.ಎನ್. ಕಲಬುರ್ಗಿ ಅವರ ‘ಖರೇ ಖರೇ ಸಂಗ್ಯಾ ಬಾಳ್ಯ’ ಕನ್ನಡ ನಾಟಕ, ನಿರ್ದೇಶನ : ವಿಠಲ್ ಕೊಪ್ಪದ್, ಧಾರವಾಡ
ಬಳಿಕ ಧಾರವಾಡ ಕೆ. ಲಕ್ಷ್ಮಣ ಸುವರ್ಣ ಇವರಿಂದ ಸುಗಮ ಸಂಗೀತ ಗಾಯನ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಿತು.
ವಿ.ಕೆ.ಎಂ. ಕಲಾವಿದರು (ರಿ.) ಬೆಂಗಳೂರು ಇದರ ಸಂಸ್ಥಾಪಕರಾದ ಸಿ.ಎಂ. ತಿಮ್ಮಯ್ಯರವರು ಗಡಿನಾಡು, ಹೊರನಾಡು ಮತ್ತು ವಿವಿಧ ರಾಜ್ಯಗಳಲ್ಲಿ ವರ್ಷಂಪ್ರತಿ ಕನ್ನಡ ನಾಟಕಗಳ ಪ್ರದರ್ಶನ ಮತ್ತು ಸಾಂಸ್ಕೃತಿಕ ಉತ್ಸವಗಳನ್ನು ಸಂಘಟಿಸಿ ಕರ್ನಾಟಕ ರಾಜ್ಯದಿಂದ ವಿವಿಧ ನಾಟಕ ಮತ್ತು ಸಾಂಸ್ಕೃತಿಕ ಸಂಘ ಸಂಸ್ಥೆಗಳ ಕಾರ್ಯಕ್ರಮಗಳನ್ನು ತಮ್ಮ ನೇತೃತ್ವದಲ್ಲಿ ಸಾಂಸ್ಕೃತಿಕ ನಿಯೋಗದೊಂದಿಗೆ ಕೊಂಡೊಯ್ಯುತ್ತಿದ್ದಾರೆ. ಸಿ.ಎಂ. ತಿಮ್ಮಯ್ಯರವರಿಗೆ 2025ರ ಅವಧಿಯ ಕರ್ನಾಟಕ ರಾಜ್ಯದ ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲ್ಪಡಲು ಈಗಾಗಲೇ ವಿವಿಧ ಸಂಘ-ಸಂಸ್ಥೆಗಳು ಶಿಫಾರಸ್ಸು ಮಾಡುತ್ತಿದ್ದಾರೆ. ಸಿ.ಎಂ. ತಿಮ್ಮಯ್ಯ ಬೆಂಗಳೂರು ಇವರಿಗೆ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ‘ಪ್ರತಿಷ್ಠಿತ ಜೀವಮಾನ ಸಾಧನಾ ಪ್ರಶಸ್ತಿ – 2025’ ನೀಡಿ ಗೌರವಿಸಲಾಯಿತು.
ವಿಶ್ವರಂಗಭೂಮಿ ದಿನಾಚರಣೆಯ ಅಂಗವಾಗಿ ಕಾಸರಗೋಡು ಕನ್ನಡ ನಾಟಕೋತ್ಸವದಲ್ಲಿ ನಾಲ್ಕು ಕನ್ನಡ ನಾಟಕಗಳ ಪ್ರದರ್ಶನ ಮತ್ತು ಕರ್ನಾಟಕ ಗಡಿನಾಡ ಉತ್ಸವದಲ್ಲಿ ಗಾಯಕ, ಗಾಯಕಿಯರಿಂದ ಏಕಕಂಠಗಾಯನ, ಗಾಯಕ ಗಾಯಕಿಯರಿಂದ ಸಮೂಹ ಕನ್ನಡ ನಾಡಗೀತಾ ಗಾಯನ, ರೈತ ಗೀತಾ ಗಾಯನ, ಕನ್ನಡ ಚಿತ್ರ ಗೀತಾ ಗಾಯನವನ್ನು ಏರ್ಪಡಿಸಲಾಯಿತು. ಕಾಸರಗೋಡು ಕೇರಳ ಮತ್ತು ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಯ ಕನ್ನಡ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶಾಲಾ, ಕಾಲೇಜಿನ ವಿದ್ಯಾರ್ಥಿಗಳು, ಅಧ್ಯಾಪಕರು, ಮಾಧ್ಯಮದವರು, ಗಾಯಕರು ಏಕಕಂಠ ಗಾಯನದಲ್ಲಿ ಭಾಗವಹಿಸಿದ್ದಾರೆ.