ದಾವಣಗೆರೆ : ಸಾಂಸ್ಕೃತಿಕ ಸಂಸ್ಥೆ ದಾವಣಗೆರೆ 69ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಿವಿಧ ಕ್ಷೇತ್ರಗಳ ಸಾಧಕರಿಗೆ ಕೊಡಮಾಡುವ ‘ಕರ್ನಾಟಕ ಮುಕುಟಮಣಿ’ ರಾಜ್ಯ ಪ್ರಶಸ್ತಿ ಪ್ರದಾನ ಹಾಗೂ ‘ಹೊಂಗನಸು’ ಕವನ ಸಂಕಲನ ಲೋಕಾರ್ಪಣೆ ಸಮಾರಂಭವು ದಿನಾಂಕ 01 ಡಿಸೆಂಬರ್ 2024ರ ಭಾನುವಾರ ಪೂರ್ವಾಹ್ನ ಘಂಟೆ 9.30 ರಿಂದ ದಾವಣಗೆರೆಯ ರೈಲ್ವೆ ನಿಲ್ದಾಣ ರಸ್ತೆಯ ಗಡಿಯಾದ ಗೋಪುರದ ಬಳಿ ಇರುವ ಚೆನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
ಕನ್ನಡ ಸಾಹಿತ್ಯ ಪರಿಷತ್ತು ದಾವಣಗೆರೆ ಜಿಲ್ಲೆ ಇದರ ಜಿಲ್ಲಾಧ್ಯಕ್ಷರಾದ ಮಾನ್ಯಶ್ರೀ ಬಿ. ವಾಮದೇವಪ್ಪ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ರಾಯಚೂರಿನ ‘ಬೆಳಕು’ ಸಾಹಿತ್ಯ, ಶೈಕ್ಷಣಿಕ ಸಾಂಸ್ಕೃತಿಕ ಟ್ರಸ್ಟ್ (ರಿ.) ಇದರ ಸಂಸ್ಥಾಪಕರಾದ ಮಾನ್ಯಶ್ರೀ ಅಣ್ಣಪ್ಪ ಮೆಜುಗೌಡ ಉದ್ಘಾಟಿಸಲಿದ್ದಾರೆ. ರಾಯಚೂರಿನ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ರಾಜ್ಯ ಸಮಿತಿಯ ಸಂಸ್ಥಾಪಕರು ಯುವಸಾಹಿತಿ ಹಾಗೂ ಕವಯತ್ರಿಯಾದ ಶ್ರೀಮತಿ ಗಿರಿಜಾ ಮಾಲಿ ಪಾಟೀಲ್ ‘ಹೊಂಗನಸು’ ಕವನ ಸಂಕಲನವನ್ನು ಲೋಕಾರ್ಪಣೆ ಗೊಳಿಸಲಿದ್ದು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ಬೀದರ್ ಇದರ ರಾಜ್ಯಾಧ್ಯಕ್ಷರಾದ ಡಾ. ಸುಬ್ಬಣ್ಣ ಕರಕನಹಳ್ಳಿ, ಅಶ್ವನಿ ಪ್ರಕಾಶನ ಗದಗ ಇದರ ಅಧ್ಯಕ್ಷರಾದ ಡಾ. ವಿ. ವಿ. ಹಿರೇಮಠ, ಬಾಗಲಕೋಟೆ ಜಿಲ್ಲೆ ಜಮಖಂಡಿಯ ಯುವ ಸಾಹಿತಿ ಹಾಗೂ ಕವಯತ್ರಿಯಾದ ಡಾ. ಶ್ರೀದೇವಿ ಸೂರ್ಯಕಾಂತ ಸುವರ್ಣಬಂಡಿ, ಶಿವಮೊಗ್ಗ ಜಿಲ್ಲೆ ಸಾಗರದ ‘ಸಂಪದ ಸಾಲು’ ಪತ್ರಿಕೆಯ ಸಂಪಾದಕರಾದ ಮಾನ್ಯಶ್ರೀ ವೆಂಕಟೇಶ ಎಸ್. ಸಂಪ, ಕಲಬುರ್ಗಿ ಜಿಲ್ಲೆ ಯಡ್ರಾಮಿ ಇಲ್ಲಿನ ಲೇಖಕರಾದ ಮಾನ್ಯಶ್ರೀ ಮಲ್ಲಿಕಾರ್ಜುನ ಎಸ್, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ದಾವಣಗೆರೆ ಇದರ ಅಧ್ಯಕ್ಷರಾದ ಶ್ರೀ ಕೆ. ಹೆಚ್. ಮಂಜುನಾಥ್ ಹಾಗೂ ಕಲಾಕುಂಚ ಮಹಿಳಾ ವಿಭಾಗ ದಾವಣಗೆರೆ ಇದರ ಅಧ್ಯಕ್ಷೆಯಾದ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಭಾಗವಹಿಸಲಿದ್ದಾರೆ.

