ಮಂಗಳೂರು : ಹೋಟೆಲ್ ಮಾಯಾ ಇಂಟರ್ನ್ಯಾಷನಲ್ನಲ್ಲಿ ದಿನಾಂಕ 31 ಮೇ 2025ರ ಶನಿವಾರದಂದು ನಡೆದ ಮಂಗಳೂರು ಮೆಟ್ರೋ ರೋಟರಿ ಕ್ಲಬ್ನ ವಾರದ ಕುಟುಂಬ ಸಭೆ ಹಾಸ್ಯ, ನೆನಪು ಮತ್ತು ಪ್ರೇರಣೆಯ ಸಂಜೆಯಾಗಿ ಪರಿವರ್ತಿತವಾಯಿತು. ನಾಡಿನ ಖ್ಯಾತ ನಾಟಕಕಾರರೂ ಹಾಗೂ ಚಿತ್ರರಂಗದ ಅಭಿಜಾತ ಕಲಾವಿದರೂ ಆದ ಕಾಸರಗೋಡು ಚಿನ್ನಾ (ಸುಜೀರ್ ಶ್ರೀನಿವಾಸ್ ರಾವ್) ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಕನ್ನಡ, ತುಳು, ಕೊಂಕಣಿ, ಮಲಯಾಳಂ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿನ 400ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿರುವ ಚಿನ್ನಾರವರು, ಕಾಸರಗೋಡಿನ ಸಣ್ಣ ವೇದಿಕೆಯಿಂದ ಬೆಳ್ಳಿತೆರೆಗೆ ಸಾಗಿದ ತಮ್ಮ ಕಲಾಜೀವನದ ಪಯಣವನ್ನು ಮನಮೋಹಕವಾಗಿ ಹಂಚಿಕೊಂಡರು. ಅವರ ಚುಟುಕು ಮಾತುಗಳು, ಹೃದಯಸ್ಪರ್ಶಿ ಕಥೆಗಳು ಹಾಗೂ ಹಾಸ್ಯಭರಿತ ನೆನೆಪುಗಳು ಸಭಿಕರ ಮುಖದಲ್ಲಿ ಮಂದಹಾಸ ಮೂಡಿಸಿತು. “ಬದುಕು ಕ್ಷಣಿಕ ಆದರೆ ಸುಂದರ. ಕೆಟ್ಟದನ್ನು ಬಿಟ್ಟು ಧನಾತ್ಮಕವಾಗಿ ಚಿಂತಿಸಿ, ಇಡಿಯಾಗಿ ಬದುಕಿ” ಎಂಬ ಅವರ ಮಾತುಗಳು ಸಭಿಕರ ಮನದಲ್ಲಿ ಚಿರಸ್ಥಾಯಿಯಾಗಿ ಉಳಿದವು.
ಸಭೆಯ ಅಧ್ಯಕ್ಷತೆಯನ್ನು ಕ್ಲಬ್ ಅಧ್ಯಕ್ಷರಾದ ಶ್ರೀಮತಿ ಛಾಯಾ ಕಾಮತ್ ಹಾಗೂ ಕಾರ್ಯದರ್ಶಿ ಡಾ. ವಿದ್ಯಾ ವಹಿಸಿದ್ದರು. ಶ್ರೀ ರಂಗನಾಥ ಭಟ್ ಇವರು ಅತಿಥಿಯನ್ನು ಪರಿಚಯಿಸಿದರು. ಡಾ. ಅರವಿಂದ್ ಧನ್ಯವಾದ ಅರ್ಪಿಸಿದರು. ಒಟ್ಟಿನಲ್ಲಿ ನಗೆಯ ಹರಿವಿನಲ್ಲಿ ಸಾಗಿದ ಸಭೆ ಅರ್ಥಪೂರ್ಣ ಹಾಗೂ ನೆನಪಿನ ಸಂಜೆಯಾಗಿ ಎಲ್ಲರ ಮನದಲ್ಲಿ ಉಳಿಯಿತು.