ಕಾಸರಗೋಡು : ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ‘ಶ್ರೀ ದುರ್ಗಾಂಬ ವೇದಿಕೆ’ಯಲ್ಲಿ 22 ಸೆಪ್ಟೆಂಬರ್ 2025 ರಿಂದ 01 ಅಕ್ಟೋಬರ್ 2025ರ ತನಕ ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ-2025 ಜರುಗಲಿದೆ.
ಕನ್ನಡ ಭವನದ ಸಂಸ್ಥಾಪಕ ಶ್ರೀ ವಾಮನ್ ರಾವ್ ಬೇಕಲ್ ಸಾರಥ್ಯದಲ್ಲಿ ಕಳೆದ 12 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ದಸರಾ ಸಂಭ್ರಮದ ಈ ಬಾರಿಯ ಉದ್ಘಾಟನೆ ದಿನಾಂಕ 22 ಸೆಪ್ಟೆಂಬರ್ 2025ರಂದು ಬೆಳಿಗ್ಗೆ 11-00 ಗಂಟೆಗೆ ಪಾಂಗೋಡು ಕ್ಷೇತ್ರ ಸಭಾಂಗಣದಲ್ಲಿ ಧಾರ್ಮಿಕ, ಸಾಮಾಜಿಕ ಮುಂದಾಳು ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಉದ್ಘಾಟಿಸಲಿರುವರು. ಕ್ಷೇತ್ರ ಪಾತ್ರಿಗಳಾದ ಪಾಂಗೋಡು ಶ್ರೀ ಪ್ರವೀಣ್ ನಾಯಕ ದೀಪ ಪ್ರಜ್ವಲನೆಗೈಯುವರು. ಧಾರ್ಮಿಕ ಮುಂದಾಳು ಡಾ. ಅನಂತ ಕಾಮತ್, ಪಾಂಗೋಡು ಕ್ಷೇತ್ರ ಸಮಿತಿ ಅಧ್ಯಕ್ಷ ಶ್ರೀ ನಾಗೇಶ್ ಪಿ. ನಾಯಕ, ದ.ಕ. ಜಿಲ್ಲಾ ಮಹಿಳಾ ಮೋರ್ಚ ಅಧ್ಯಕ್ಷೆ ಡಾ. ಮಂಜುಳಾ ಅನಿಲ್ ರಾವ್ ಗೌರವ ಉಪಸ್ಥಿತಿಯಲ್ಲಿರುವರು.
ಧಾರ್ಮಿಕ ಮುಂದಾಳು ಅರಿಬೈಲು ಗೋಪಾಲ ಶೆಟ್ಟಿಯವರು ಅಧ್ಯಕ್ಷತೆ ವಹಿಸುವರು, ಡಾ. ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ, ಶ್ರೀ ಶ್ರೀಧರ್ ಶೆಟ್ಟಿ ಮುಟ್ಟಂ, ಶ್ರೀ ಪ್ರದೀಪ್ ಬೇಕಲ್, ಶ್ರೀ ಅಖಿಲೇಶ್ ನಗುಮುಗಂ, ಶ್ರೀ ವಿಶಾಲಾಕ್ಷ ಪುತ್ರಕಳ, ಶ್ರೀ ಗಂಗಾಧರ ತೆಕ್ಕೆಮೂಲೆ, ಶ್ರೀ ಜಗನ್ನಾಥ ಶೆಟ್ಟಿ, ಶ್ರೀ ವಸಂತ ಬಾರಡ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕಾರ್ಯಕ್ರಮ ಸಂಯೋಜಕರಾದ ಡಾ. ವಾಮನ್ ರಾವ್ ಸ್ವಾಗತಿಸಿ ಪ್ರಾಸ್ತಾವನೆ ಹಾಗೂ ಕೆ. ಜಗದೀಶ್ ಕೂಡ್ಲು ಮತ್ತು ಕಾರ್ಯದರ್ಶಿ ವಸಂತ್ ಕೆರೆಮನೆ ಧನ್ಯವಾದಗೈಯುವರು.
ಇದೇ ವೇದಿಕೆಯಲ್ಲಿ 12 ವರ್ಷದ ದಾಸ ಸಂಕೀರ್ತನಾ ದಶಾಹ ಹರಿದಾಸ ಶ್ರೀ ಜಯಾನಂದ ಕುಮಾರ್ ಹೊಸದುರ್ಗ ಸಂಕೀರ್ತನೆ ಹಾಡುವ ಮೂಲಕ ಉದ್ಘಾಟನೆ ಮಾಡುವರು. ಸುಮಾರು 30 ತಂಡಗಳು ಭಜನಾ ಸತ್ಸಂಗದಲ್ಲಿ ಭಾಗವಹಿಸಲಿದೆ. ಕಾಸರಗೋಡು ದಸರಾ ಕಾರ್ಯಕ್ರಮದಲ್ಲಿ ಸಾಹಿತಿ ಲೇಖಕ ಶ್ರೀ ರವಿ ನಾಯ್ಕಾಪು ಇವರಿಗೆ ಗೌರವಾರ್ಪಣೆ, ರಾಮಕ್ಷತ್ರಿಯ ಸಮಾಜ ನಡೆದು ಬಂದ ಹಾದಿ ಎಂಬ ಬೃಹತ್ ವಿಚಾರಗೋಷ್ಠಿ, ಕಾಸರಗೋಡು ದಸರಾ ಕವಿಗೋಷ್ಠಿ, ಶ್ರೀಮತಿ ದಿ. ಗಾಯತ್ರಿ ನಾಗೇಶ್ ರವರ ಮರೆಯಲಾಗದವರು ಕೃತಿ ಲೋಕಾರ್ಪಣೆ, ಸಂಸ್ಮರಣೆ, ಗಣ್ಯರಿಗೆ ದಸರಾ ಸಾಧಕ ಸನ್ಮಾನ, ಕುಮಾರಿ ಅನ್ವಿತಾ ಸಂತೋಷ್ ಬಳಗದವರಿಂದ ‘ಭಕ್ತಿ ಗಾನಾಮೃತ’, ಜಯಶ್ರೀ ದಿವಾಕರ ಅಶೋಕ ನಗರ ಸಾರಥ್ಯದಲ್ಲಿ ‘ನೃತ್ಯ ವೈಭವ’ ಪ್ರಸ್ತುತಗೊಳ್ಳಲಿದೆ.
ಈ ಕಾರ್ಯಕ್ರಮದಲ್ಲಿ ನೂರಕ್ಕೂ ಮಿಕ್ಕಿ ಸಾಧಕರಿಗೆ ‘ಕಾಸರಗೋಡು ದಸರಾ ಸಾಧಕ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು. ಈ ಕಾರ್ಯಕ್ರಮ ಪಾಂಗೋಡು ಕ್ಷೇತ್ರ ಸಾಂಸ್ಕೃತಿಕ ಘಟಕ, ಕ್ಷೇತ್ರ ಸಮಿತಿ, ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಸಹಯೋಗದೊಂದಿಗೆ ಕನ್ನಡ ಭವನ ಮತ್ತು ಗ್ರಂಥಾಲಯ ಪ್ರಾಯೋಜಕತ್ವದಲ್ಲಿ ನಡೆಯಲಿದೆ ಎಂದು ಕನ್ನಡ ಭವನ ಕಾರ್ಯದರ್ಶಿ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್, ವಸಂತ್ ಕೆರೆಮನೆ ತಿಳಿಸಿದ್ದಾರೆ.