ಮಂಜೇಶ್ವರ : ಸವಿಹೃದಯದ ಕವಿಮಿತ್ರರು ವೇದಿಕೆ ಪೆರ್ಲ ಇದರ ವತಿಯಿಂದ ಮಂಜೇಶ್ವರ ಗೋವಿಂದ ಪೈ ನಿವಾಸ ಗಿಳಿವಿಂಡುವಿನಲ್ಲಿ ದಿನಾಂಕ 25 ಡಿಸೆಂಬರ್ 2025ರಂದು ಕೃತಿ ಬಿಡುಗಡೆ ಹಾಗೂ ಕವಿಗೋಷ್ಠಿಯು ಜರಗಿತು.
ಈ ಕಾರ್ಯಕ್ರಮದಲ್ಲಿ ‘ಕಥಾ ದೀಪ್ತಿ’ ಸಂಪಾದಿತ ಕತೆಗಳು ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಶಂಪಾ ಪ್ರತಿಷ್ಠಾನ ಬೆಂಗಳೂರು ಸಂಸ್ಥಾಪಕ, ವಿಶ್ರಾಂತ ಪ್ರಾಧ್ಯಾಪಕಿ ಡಾ.ಪ್ರಮೀಳಾ ಮಾಧವ್ “ಕತೆ ಕೇಳುವ, ಹೇಳುವ ಅಭ್ಯಾಸ ಸೃಜನಶೀಲ ಮನಸ್ಸುಗಳನ್ನು ಸೃಷ್ಟಿಸುತ್ತವೆ. ಹಿಂದೆ ಹೆಚ್ಚಿನ ಮಕ್ಕಳು ಕತೆ ಹೇಳಲು ಹಿರಿಯರಿಗೆ ದುಂಬಾಳು ಬೀಳುತ್ತಿದ್ದರು. ಕತೆ ಮುಗಿದ ಬಳಿಕ ಕೂಡಾ ಹೇಳುತ್ತಿದ್ದ ಕತೆಯನ್ನು ಬೆಳೆಸಿ (ಸೃಷ್ಟಿಸಿ) ಮಕ್ಕಳಿಗೆ ಹೇಳುವ ಸಾಮರ್ಥ್ಯವನ್ನು ಹಿರಿಯರು ಹೊಂದಿದ್ದರು. ಕತೆಗಾಗಿ ಹಟ ಹಿಡಿಯುತ್ತಿದ್ದ ಸಣ್ಣ ಮಕ್ಕಳ ಕೈಗೆ ಇಂದು ಹಿರಿಯರು ಮೊಬೈಲ್ ಕೊಟ್ಟು ಸುಮ್ಮನಾಗಿಸುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಬದುಕು ಸುಂದರಗೊಳಿಸುವುದು, ಸ್ವಾಸ್ಥ್ಯ, ಸಮಾಜ ರೂಪಿಸುವುದು ಎಲ್ಲಾ ಸಾಹಿತ್ಯ ಪ್ರಕಾರಗಳ ಆಶಯವಾಗಿದೆ” ಎಂದರು.

ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡು ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಸಾಹಿತ್ಯಕ್ಕಾಗಿ ಸಾಹಿತ್ಯ ರಚಿಸದೆ, ಸತ್ವಶಾಲಿ ಕೃತಿಗಳು ಹೆಚ್ಚು ಬರಲಿ” ಎಂದು ಹಾರೈಸಿದರು.
ಕೃತಿ ಪರಿಚಯಿಸಿದ ಹಿರಿಯ ಕವಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ, “ನೂತನ 25 ಲೇಖಕರ 25 ಕತೆಗಳು ಇರುವ ನೂತನ ಕೃತಿ ವೈವಿಧ್ಯಮಯವಾಗಿದೆ. ಪ್ರತೀ ಕತೆ ತನ್ನದೇ ಆಗಿರುವ ಆಯಾಮ, ಸೊಬಗನ್ನು ಒಳಗೊಂಡಿದೆ ಎಂದರು. ‘ಕಾಸರಗೋಡಿನ ಲೇಖಕರು ಕನ್ನಡ ಸಾಹಿತ್ಯ ಲೋಕಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಕವಿ ಕಿಞ್ಞಣ್ಣರೈ, ಎಂ. ವ್ಯಾಸ, ಕೆ.ಟಿ. ಶ್ರೀಧರ್, ಶಶಿ ಭಾಟಿಯಾ ಮುಂತಾದ ಮಹತ್ವದ ಲೇಖಕರನ್ನು ಕಾಸರಗೋಡು ಜಿಲ್ಲೆಯಲ್ಲಿ ಗುರುತಿಸಬಹುದು” ಎಂದರು.

ಸಾಹಿತಿ ಮಧುರ ಕಾನನ ಗಣಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯ್ಯಕಟ್ಟೆ, ನಿವೃತ್ತ ಪ್ರಾಂಶುಪಾಲ ಪ್ರೊ. ಪಿ.ಎನ್. ಮೂಡಿತ್ತಾಯ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕಾಂತಾವರ ಕನ್ನಡ ಸಂಘದ ಕಾಂತಾವರ ಸಾಹಿತ್ಯ ಪುರಸ್ಕಾರ ಪಡೆದ ರಾಧಾಕೃಷ್ಣ ಕೆ. ಉಳಿಯತಡ್ಕ ಇವರನ್ನು ಸನ್ಮಾನಿಸಲಾಯಿತು. ಸವಿಹೃದಯದ ಕವಿಮಿತ್ರರು ವೇದಿಕೆ ಸಂಚಾಲಕ ಸುಭಾಷ್ ಪೆರ್ಲ ಪ್ರಸ್ತಾವನೆಗೈದರು. ಹರ್ಷಿತಾ ಪೆರ್ಲ ಪ್ರಾರ್ಥನೆ ಹಾಡಿದರು. ವ್ಯಂಗ್ಯ ಚಿತ್ರಕಾರ ವೆಂಕಟ್ ಭಟ್ ಎಡನೀರು ಸ್ವಾಗತಿಸಿ, ಪ್ರೇಮಾ ಉದಯಕುಮಾರ್ ವಂದಿಸಿ, ದಿವ್ಯಾ ಗಟ್ಟಿ ಪರಕ್ಕಿಲ ಮತ್ತು ಪವಿತ್ರಾ ದಿನೇಶ್ ಕೊಕ್ಕಡ ಕಾರ್ಯಕ್ರಮ ನಿರೂಪಿಸಿದರು.

