ಬದಿಯಡ್ಕ: ಬದಿಯಡ್ಕದಲ್ಲಿರುವ ಕಯ್ಯಾರ ಕಿಂಞಣ್ಣ ರೈ ಸ್ಮಾರಕ ಸಾರ್ವಜನಿಕ ಗ್ರಂಥಾಲಯದಲ್ಲಿ ಕವಿಯ 110ನೇ ಜನ್ಮ ದಿನಾಚರಣೆ ಹಾಗೂ ಕವಿ ನಮನ ಕಾರ್ಯಕ್ರಮ ದಿನಾಂಕ 08 ಜೂನ್ 2025ರ ಭಾನುವಾರದಂದು ನಡೆಯಿತು.
ಕಾರ್ಯಕ್ರಮವನ್ನು ಕಯ್ಯಾರರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸುವವಕ ಮೂಲಕ ಉದ್ಘಾಟಿಸಿದ ನಿವೃತ್ತ ಮುಖ್ಯೋಪಾಧ್ಯಾಯ, ಸಾಹಿತಿ ಡಾ. ಬೇ. ಸೀ. ಗೋಪಾಲಕೃಷ್ಣ ಭಟ್ ಮಾತನಾಡಿ “ನಾಡೋಜ ಕವಿ ಕಿಂಞಣ್ಣ ರೈಗಳು ಡಾ. ಕಯ್ಯಾರ ಮುನ್ನಡೆಸಿದ ಕನ್ನಡ ಪರ ಚಳವಳಿಗಳು ಎಂದಿಗೂ ಅಪೂರ್ವವಾದುದು. ಅವರ ಕಾವ್ಯಕ್ಕಿದ್ದ ಶಕ್ತಿ ವ್ಯವಸ್ಥೆಯನ್ನು ಬಡಿದೆಬ್ಬಿಸ ಬಹುದಾದ ಯುಗ ಪ್ರವರ್ತಕ” ಎಂದು ನುಡಿದರು.
ಗ್ರಂಥಾಲಯ ಸಮಿತಿಯ ಅಧ್ಯಕ್ಷರಾದ ರಾಜೀವನ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಬದಿಯಡ್ಕ ಗ್ರಾ. ಪಂ. ಇದರ ಮಾಜಿ ಉಪಾಧ್ಯಕ್ಷೆ ಮಾಹಿನ್ ಕೇಳೋಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶಿಕ್ಷಕಿ ಅನಿತಾ ಮಾತನಾಡಿ “ಮಹಾನ್ ಕವಿಗಳಾಗಿದ್ದ ಕಯ್ಯಾರರು ಅವಕಾಶಗಳಿದ್ದರೂ ಬೇರೆಡೆ ಹೋಗದೆ ಹುಟ್ಟೂರಲ್ಲೇ ನಿರ್ಮಿಸಿದ ಸಾಧನೆಗಳು ಅಪೂರ್ವವಾದುದು. ಅವರು ಅಧ್ಯಕ್ಷರಾಗಿದ್ದ ವೇಳೆ ಕುಗ್ರಾಮವಾಗಿದ್ದ ವಿದ್ಯಾಗಿರಿ ಹಾಗೂ ಉದಯಗಿರಿಗಳಲ್ಲಿ ಶಿಕ್ಷಣ ಸಾಕಾರತೆಗೆ ನಿರ್ಮಿಸಿದ ಶಾಲೆಗಳು ಇಂದಿಗೂ ಮಹತ್ವಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ. ವಿದ್ಯಾರ್ಥಿಗಳ ಸುಲಭ ಕಲಿಕೆಗಳಿಗಾಗಿ ಅವರು ರಚಿಸಿದ್ದ ಹಲವು ಪಠ್ಯ ಸಹಿತ ಇತರ ಉಪಕ್ರಮಗಳು ಗಮನಾರ್ಹವಾದುದು” ಎಂದರು. ಜೊತೆಗೆ ಕಯ್ಯಾರರ ವಿವಿಧ ಕಾವ್ಯ ಮತ್ತು ಬರಹಗಳನ್ನು ಉಲ್ಲೇಖಿಸಿದರು.
ನಿವೃತ್ತ ಶಿಕ್ಷಕ ಚಂದ್ರಹಾಸ ನಂಬ್ಯಾರ್ ಉದಯಗಿರಿ, ನಿವೃತ್ತ ಪ್ರಾಧ್ಯಾಪಕ ಪ್ರೊ. ಎ. ಶ್ರೀನಾಥ್, ಶಿಕ್ಷಕಿಯರಾದ ಜ್ಯೋತ್ಸಾ ಎಂ. ಕಡಂದೇಲು, ವಿದ್ಯಾ ಬಿ. ಎಚ್. ಉಪಸ್ಥಿತರಿದ್ದರು. ಶಿಕ್ಷಕ, ಗ್ರಂಥಾಲಯದ ಉಪಾಧ್ಯಕ್ಷರಾದ ನಿರಂಜನ ರೈ ಪೆರಡಾಲ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ಶ್ರೀಜಾ ವಂದಿಸಿದರು.