ಕಾಸರಗೋಡು : ಕಾಸರಗೋಡಿನ ಕನ್ನಡ ಭವನ ಮತ್ತು ಗ್ರಂಥಾಲಯದ ಆಶ್ರಯದಲ್ಲಿ ಕನ್ನಡದ ಹಿರಿಯ ಕವಿ, ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈಯವರ ಜನ್ಮದಿನೋತ್ಸವವನ್ನು ಕಾಸರಗೋಡಿನ ನುಳ್ಳಿಪ್ಪಾಡಿಯಲ್ಲಿರುವ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ಸಭಾಂಗಣದಲ್ಲಿ ದಿನಾಂಕ 08 ಜೂನ್ 2025ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.
ಕನ್ನಡ ಭವನದ ಸ್ಥಾಪಕ ಸಂಚಾಲಕರಾದ ಡಾ. ವಾಮನರಾವ್ ಬೇಕಲ್, ಸಂಧ್ಯಾರಾಣಿ ಟೀಚರ್ ದಂಪತಿಗಳು ಕಯ್ಯಾರರ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿ, ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಗಡಿನಾಡ ಚೇತನ ಪ್ರಶಸ್ತಿ ಪುರಸ್ಕೃತ ಕವಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಕಯ್ಯಾರರಿಗೆ ನುಡಿ ನಮನ ಸಲ್ಲಿಸಿ “ಕವಿ ಕಯ್ಯಾರರು ಅಪ್ರತಿಮ ಹೋರಾಟಗಾರರು. ಪಂಪನ ಹಾಗೆ ಕವಿಯೂ ಹೌದು ಕಲಿಯೂ ಹೌದು. ಸದಾ ಕನ್ನಡಕ್ಕಾಗಿ ತುಡಿದ, ಮಿಡಿದ ಶತಾಯುಷಿ ಕಯ್ಯಾರರ ಬದುಕು, ಸಾಹಿತ್ಯ, ಆದರ್ಶಗಳು ಕಾಸರಗೋಡಿನ ಕನ್ನಡಿಗರಿಗೆ ಸದಾ ದಾರಿದೀಪವಾಗಿದೆ” ಎಂದು ಹೇಳಿದರು.
ಹಿರಿಯ ಸಾಹಿತಿ ಕನ್ನಡ ಹೋರಾಟಗಾರ ಡಾ. ರಮಾನಂದ ಬನಾರಿ, ಸಾಹಿತಿ ಭಾರತೀಯ ಪ್ರಸಾರ ಸೇವೆಯ ನಿವೃತ್ತ ಅಧಿಕಾರಿ ಡಾ. ಶಿವಾನಂದ ಬೇಕಲ್, ಕವಿ ಮಾಧ್ಯಮ ತಜ್ಞ ಡಾ. ವಸಂತ ಕುಮಾರ್ ಪೆರ್ಲ, ಕಲಬುರಗಿ ದೂರದರ್ಶನ ಕೇಂದ್ರದ ವಿಶೇಷ ಕಾರ್ಯಕ್ರಮ ಸಂಯೋಜಕ ಡಾ. ಸದಾನಂದ ಪೆರ್ಲ ಇವರಿಗೆ ಕನ್ನಡ ಭವನದ ‘ನಾಡೋಜ ಡಾ. ಕಯ್ಯಾರ ರಾಷ್ಟ್ರೀಯ ಪ್ರಶಸ್ತಿ-2025’ ಪ್ರದಾನ ಮಾಡಲಾಯಿತು. ಸಾಹಿತಿ ಡಾ. ಶಿವಾನಂದ ಬೇಕಲ್ ಮತ್ತು ಕವಿ ಮಾಧ್ಯಮ ತಜ್ಞ ಡಾ. ವಸಂತಕುಮಾರ್ ಪೆರ್ಲ ತಮಗೆ ನೀಡಿದ ಪ್ರಶಸ್ತಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು.
ಧಾರ್ಮಿಕ ಮುಂದಾಳು ಡಾ. ವೆಂಕಟ್ರಮಣ ಹೊಳ್ಳ, ಹಿರಿಯ ಸಾಹಿತಿ ವೈ. ಸತ್ಯನಾರಾಯಣ ಕಾಸರಗೋಡು, ನ್ಯಾಯವಾದಿ ಕೆ. ಸತ್ಯನಾರಾಯಣ ತಂತ್ರಿ, ಕನ್ನಡ ಭವನದ ದ.ಕ. ಜಿಲ್ಲಾ ಕಾರ್ಯಾಧ್ಯಕ್ಷ ಉಮೇಶ ರಾವ್ ಕುಂಬಳೆ, ರಾಮಣ್ಣ ಮಾಸ್ಟರ್ ದೇಲಂಪಾಡಿ, ನಂ. ವಿಜಯ ಕುಮಾರ್ ಬೆಂಗಳೂರು, ಮಾಲತಿ ಬೆಂಗಳೂರು ಅತಿಥಿಗಳಾಗಿದ್ದರು. ಖ್ಯಾತ ಗಾಯಕ, ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಪ್ರಾರ್ಥನೆ ಹಾಡಿದರು. ಕನ್ನಡ ಭವನದ ಕಾರ್ಯದರ್ಶಿ ವಸಂತ ಕೆರೆಮನೆ ಸ್ವಾಗತಿಸಿ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರೂಪಿಸಿ, ದ.ಕ. ಜಿಲ್ಲಾ ಕನ್ನಡ ಭವನದ ಅಧ್ಯಕ್ಷೆ ರೇಖಾ ಸುಧೇಶ್ ರಾವ್ ಧನ್ಯವಾದ ಸಮರ್ಪಿಸಿದರು.
ಬಳಿಕ ಚು.ಸಾ.ಪ. ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷೆ, ಕವಯತ್ರಿ ಶಾರದಾ ಮೊಳೆಯಾರ್ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಸುಶೀಲಾ ಕೆ. ಪದ್ಯಾಣ, ಶಶಿಕಲಾ ಟೀಚರ್ ಕುಂಬಳೆ, ಸುಜಿತ್ ಕುಮಾರ್ ಬೇಕೂರು, ಮಾಲತಿ ಬೆಂಗಳೂರು, ಮೋಹನ್ ದಾಸ್ ಆನೆಪಾಲಡ್ಕ, ಚಿತ್ರಕಲಾ ದೇವರಾಜ ಆಚಾರ್ಯ, ದರ್ಶೀನ್ ಚಿರಾಲ್ ಆಚಾರ್ಯ, ಗಿರೀಶ್ ಪಿ.ಎಂ. ಚಿತ್ತಾರಿ, ಜೋತ್ಸ್ನಾ ಎಂ. ಕಡಂದೇಲು, ರೇಖಾ ರೋಷನ್ ಮಲ್ಲಿಗೆ ಮಾಡು, ವಿಶಾಲಾಕ್ಷ ಪುತ್ರಕಳ, ಶ್ರೀಹರಿ ಭಟ್ ಪೆಲ್ತಾಜೆ ಕವನ ವಾಚನ ಮಾಡಿದರು. ಚು.ಸಾ.ಪ. ಜಿಲ್ಲಾ ಕಾರ್ಯದರ್ಶಿ ದೇವರಾಜ್ ಆಚಾರ್ಯ ಸೂರಂಬೈಲು ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಕೀಕಾನ ವಿಷ್ಣುಪ್ರಿಯ ಮಹಿಳಾ ಸಂಘದ ಸದಸ್ಯೆಯರಾದ ಅಶಾ, ನಿರೀಕ್ಷಾ, ಶ್ರೀಲಕ್ಷ್ಮಿ, ಶೈಲಜ, ಜಯಶ್ರೀ, ವನಶ್ರೀ, ಕೀರ್ತಿ, ಶ್ವೇತ, ರತಿ, ಗಾಯತ್ರಿ ಇವರಿಂದ ಕುಣಿತ ಭಜನೆ, ಅರ್ಚನಾ ಹೇರೂರು ಇವರಿಂದ ನೃತ್ಯ, ಶ್ರೇಯಾಕೃಷ್ಣ ಮಂಗಳೂರು, ಕೃಷ್ಣಾನಂದ ಆಚಾರ್ಯ ಮಂಗಳೂರು, ಮುರಳಿಕೃಷ್ಣ ನೀರ್ಚಾಲು, ಯುಕ್ತಿ ಶೇಷವನ, ಮುಕ್ತಿ ಪಿ.ಆರ್. ಮಲ್ಲಿಗೆ ಮಾಡು ಮೊದಲಾದವರಿಂದ ಕಯ್ಯಾರರ ಆಯ್ದ ಕವಿತೆಗಳ ಗಾಯನ, ಮೋಕ್ಷಿ ಇವರಿಂದ ಯೋಗ ಪ್ರದರ್ಶನ ನಡೆಯಿತು.