ಮಂಗಳೂರು : ಸುರತ್ಕಲ್ ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕಯ್ಯಾರ ನೆನಪು 110ನೇ ಜನ್ಮದಿನಾಚರಣೆ ಕಾರ್ಯಕ್ರಮವು 08 ಜೂನ್ 2025ರಂದು ಸಾಹಿತಿ ಇಂದಿರಾ ಹೆಗ್ಗಡೆಯವರ ನಿವಾಸದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಹಿರಿಯ ಸಾಹಿತ್ಯ ಸಂಘಟಕ ಭುವನ ಪ್ರಸಾದ್ ಹೆಗ್ಗಡೆ ಮಾತನಾಡಿ “ಕನ್ನಡ ನಾಡು ನುಡಿ ಸಂಸ್ಕೃತಿಗಳ ಕುರಿತು ಬದ್ಧತೆ, ತತ್ವ, ಆದರ್ಶಗಳೊಂದಿಗೆ ಕವಿಯಾಗಿ ಹೋರಾಟಗಾರರಾಗಿ ಕಯ್ಯಾರ ಕಿಞ್ಞಣ್ಣ ರೈಗಳು ತಮ್ಮನ್ನು ಅರ್ಪಿಸಿಕೊಂಡ ಶ್ರೇಷ್ಟ ಮಾನ್ಯರು. ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆನ್ನುವ ಬಯಕೆಯಿಂದ ವ್ರತದಂತೆ ಹೋರಾಡಿದvರು” ಎಂದು ನುಡಿದರು.
ಕಯ್ಯಾರ ಕಿಞ್ಞಣ್ಣ ರೈಗಳ ಪುತ್ರಿ ದೇವಕೀದೇವಿ ಮಾತಾನಾಡಿ “ಕಯ್ಯಾರರ ಮನ ಸದಾ ನಾಡು ನುಡಿ ಮತ್ತು ತಮ್ಮ ವಿದ್ಯಾರ್ಥಿಗಳ ಅಭಿವೃದ್ದಿಗಾಗಿ ಮಿಡಿಯುತ್ತಿತ್ತು” ಎಂದರು. ಹಿರಿಯ ಸಾಹಿತಿ ಹಾಗೂ ಸಂಶೋಧಕಿ ಇಂದಿರಾ ಹೆಗ್ಗಡೆ ಅವರು ಮಾತನಾಡಿ “ಶಿಕ್ಷಣ, ಸಾಹಿತ್ಯ ಮತ್ತು ಸಮಾಜಸೇವೆ ಕ್ಷೇತ್ರಗಳಲ್ಲಿ ಸಮಾನ ಆಸಕ್ತರಾಗಿದ್ದ ಕಯ್ಯಾರರ ಕೊಡುಗೆ ಅಪಾರವಾದುದು” ಎಂದರು.
ಹಿರಿಯ ಕಲಾವಿದೆ ಗೀತಾ ಸುರತ್ಕಲ್ ಕಯ್ಯಾರ ನೆನಪುಗಳನ್ನು ಹಂಚಿಕೊಂಡರು. ಸಾಹಿತಿ ದೇವಿಕಾ ನಾಗೇಶ್, ಸುಜಾತಾ, ಪೌರ್ಣಿಮ ಪ್ರೇಮ್, ಪ್ರೇಮ್ ಪ್ರಸಾದ್ ಬೆಂಗಳೂರು, ಬೆನೆಟ್ ಅಮ್ಮನ್ನ, ಉದಯ, ಸಚಿತ, ಸತೀಶ್ ಕಯ್ಯಾರರ ಕವನಗಳನ್ನು ವಾಚಿಸಿದರು. ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಕೃಷ್ಣಮೂರ್ತಿ ಚಿತ್ರಾಪುರ ಸ್ವಾಗತಿಸಿದರು. ಕೋಶಾಧಿಕಾರಿ ಜ್ಯೋತಿ ಚೇಲೈರು ಕಯ್ಯಾರರ ಕುರಿತು ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸುರತ್ಕಲ್ ಹೋಬಳಿ ಘಟಕದ ಅಧ್ಯಕ್ಷೆ ಗುಣವತಿ ರಮೇಶ್ ವಂದಿಸಿದರು. ಕನ್ನಡ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರ ಕೊಡಮಾಡುವ ‘ಡಾ. ಎಂ.ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ’ ಪುರಸ್ಕೃತೆ ಇಂದಿರಾ ಹೆಗ್ಗಡೆಯವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಪ್ರಶಸ್ತಿ ಮೊತ್ತ ರೂ.1,25,000/- ನಗದನ್ನು ಇಂದಿರಾ ಹೆಗ್ಗಡೆಯವರು ಟ್ರಸ್ಟಿನ ಚಟುವಟಿಕೆಗಳಿಗಾಗಿ ನೀಡಿದರು.