ಕೊಡಗು : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ ಮತ್ತು ಅಮ್ಮತ್ತಿ ಕೊಡವ ಸಮಾಜದ ಸಹಯೋಗದಲ್ಲಿ ‘ಕೊಡವ ಬಲ್ಯ ನಮ್ಮೆ 2025’ ಎರಡು ದಿನಗಳ ಕಾರ್ಯಕ್ರಮವು ದಿನಾಂಕ 29 ಮತ್ತು 30 ಮಾರ್ಚ್ 2025ರಂದು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಹೋಬಳಿಯ ಕೊಡವ ಸಮಾಜದಲ್ಲಿ ನಡೆಯಿತು. ಕೊಡವ ಅಕಾಡೆಮಿಯ ಗೌರವ ಪ್ರಶಸ್ತಿ, ಪುಸ್ತಕ ಪ್ರಶಸ್ತಿ ಮತ್ತು ದುಡಿ ತಾಳ ಕೊಡ್ ಪ ಆಯಿಮೆ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಕೊಡವ ಭಾಷೆಯ ಕವಿಗೋಷ್ಠಿಯೂ ನಡೆಯಿತು. ಆಹ್ವಾನಿತ ಕವಿಗಳಾದ ಶ್ರೀಮತಿ ಪುತ್ತಾಮನೆ ವಿದ್ಯಾ ಜಗದೀಶ್, ಕೋಟೆರ ಉದಯ ಪೂಣಚ್ಚ, ಶ್ರೀಮತಿ ಅಜ್ಜಿಕುಟ್ಟಿರ ಭವ್ಯ ಬೋಪಣ್ಣ, ಶ್ರೀ ವೈಲೇಶ ಪಿ.ಎಸ್. ಕೊಡಗು, ಶ್ರೀಮತಿ ಬಾದುಮಂಡ ಬೀನ ಕಾಳಯ್ಯ, ಶ್ರೀ ಕಾಣತಂಡ ವಿವೇಕ್ ಅಯ್ಯಪ್ಪ, ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ, ಶ್ರೀ ಕೊಟ್ರಂಡ ಶ್ರೀಕಾಂತ್ ಪೂವಣ್ಣ, ಶ್ರೀ ಪಂದ್ಯಂಡ ರೇಣುಕಾ ಸೋಮಯ್ಯ ಮತ್ತು ಹಿರಿಯ ಕವಯಿತ್ರಿ ಶ್ರೀಮತಿ ಮೂಕೊಂಡ ಪುಷ್ಪ ಪೂಣಚ್ಚ ಇವರುಗಳು ಕವನ ವಾಚನ ಮಾಡಿದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಅಜ್ಜಿನಿಕಂಡ ಮಹೇಶ್ ನಾಚಯ್ಯ ಇವರ ಉಪಸ್ಥಿತಿಯಲ್ಲಿ ಕ್ಯಾಪ್ಟನ್ ಬಿದ್ದಂಡ ಡಿ. ನಾಣಯ್ಯನವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಶಕ್ತಿ ಪತ್ರಿಕೆಯ ಸಲಹಾ ಸಂಪಾದಕರಾದ ಬಿ.ಜೆ. ಅನಂತ ಶಯನರವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಜಾನಪದ ಮೆರವಣಿಗೆ, ಕೊಡವ ಆಟ್ ಪಾಟ್ ಸ್ಪರ್ಧೆ, ಪುಸ್ತಕ ಬಿಡುಗಡೆ, ಪುಸ್ತಕ ಪ್ರದರ್ಶನ ಮತ್ತು ಮಾರಾಟ, ವಿಚಾರಗೋಷ್ಠಿ, ಕವಿಗೋಷ್ಠಿ, ಅಕಾಡೆಮಿಯ ಗೌರವ ಪ್ರಶಸ್ತಿ, ಕೊಡವ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ ಮತ್ತು ವಾರ್ಷಿಕ ಪ್ರಶಸ್ತಿಗಳನ್ನು ನೀಡಲಾಯಿತು. ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಶ್ರೀ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಶ್ರೀಮತಿ ಪ್ರಮೀಳಾ ನಾಚಯ್ಯ ಇವರ ಜೊತೆಗೆ ಅಕಾಡೆಮಿಯ ಸರ್ವ ಸದಸ್ಯರು ಮತ್ತು ಹಲವಾರು ತೀರ್ಪುಗಾರರು, ಜಿಲ್ಲೆಯ ಶಾಸಕರು, ರಾಜಕೀಯ ಖ್ಯಾತನಾಮರು ಸಹ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣಕರ್ತರಾದರು.