ವಿರಾಜಪೇಟೆ : ಭಾರತದ ಜಾನಪದ ಇತಿಹಾಸದಲ್ಲಿ ಪ್ರಪ್ರಥಮ ಜಾನಪದ ಆಧಾರಿತ ಸಂಗ್ರಹ ಪುಸ್ತಕ ಪಟ್ಟೋಲೆ ಪಳಮೆಯನ್ನು ಪ್ರಕಟಿಸಿದ, ಜಾನಪದ ಬ್ರಹ್ಮ ಎಂದೇ ಖ್ಯಾತರಾಗಿರುವ, ದಿ. ನಡಿಕೇರಿಯಂಡ ಚಿಣ್ಣಪ್ಪ ಅವರ 150ನೇ ಜನ್ಮ ದಿನಾಚರಣೆಯ ಅಂಗವಾಗಿ ಕೊಡವಾಮೆರ ಕೊಂಡಾಟ ಸಂಘಟನೆ ವತಿಯಿಂದ ಕೊಡವ ಜಾನಪದ ನಾಳ್ ಮತ್ತು ಕೊಡವಾಮೆಗಾಗಿ ಎಲೆಮರೆಯಲ್ಲಿ ದುಡಿಯುತ್ತಿರುವ ಸುಮಾರು 250 ಜನರಿಗೆ ದಿವಂಗತ ಮುಕ್ಕಾಟಿರ ಶಿವು ಮಾದಪ್ಪ ನೆನಪಿನಲ್ಲಿ ಸ್ಮರಣಿಕೆ ವಿತರಣಾ ಕಾರ್ಯಕ್ರಮ ದಿನಾಂಕ 06 ಏಪ್ರಿಲ್ 2025ರಂದು ವಿರಾಜಪೇಟೆಯ ಕೊಡವ ಸಮಾಜದಲ್ಲಿ ನಡೆಯಿತು.
ಕಾರ್ಯಕ್ರಮದ ಮೊದಲಿಗೆ ಅತಿಥಿ ಗಣ್ಯರನ್ನು ಕೊಡವ ಸಂಪ್ರದಾಯದಂತೆ ದುಡಿಕೊಟ್ಸ್ ಪಾಟ್ ಮೂಲಕ ಸ್ವಾಗತಿಸಲಾಯಿತು. ಬಳಿಕ ಅತಿಥಿ ಗಣ್ಯರು ನಡಿಕೇರಿಯಂಡ ಚಿಣ್ಣಪ್ಪ ಅವರ ಭಾವಚಿತ್ರಕ್ಕೆ ನಮಿಸಿ ಅಕ್ಷತೆ ಹಾಕಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಿರಿಯ ಸಾಹಿತಿ, ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ, ಜಾನಪದ ತಜ್ಞರಾದ ಬಾಚರಣೆಯಂಡ ಬಿ.ಅಪ್ಪಣ್ಣ ಮಾತನಾಡಿ “ಜಾನಪದಕ್ಕೆ ಮೊಟ್ಟ ಮೊದಲಿಗೆ ವೈಜ್ಞಾನಿಕ ನೆಲೆಯಲ್ಲಿ ಸ್ವರೂಪವನ್ನು ದೇಶಿ ಶಕ್ತಿಯಾಗಿ ಪ್ರಚುರಪಡಿಸಿದ ನಡಿಕೇರಿಯಂಡ ಚಿಣ್ಣಪ್ಪ ಅವರ ‘ಪಟ್ಟೋಲೆ ಪಳಮೆ’ ಜಾನಪದ ಕ್ಷೇತ್ರಕ್ಕೆ ಮಹಾನ್ ಕೊಡುಗೆ. ಕಾವೇರಿ ನಾಡಿನ ಪುಣ್ಯ ಭೂಮಿಯಲ್ಲಿ ಹುಟ್ಟಿ ಬೆಳೆದ ನಾವುಗಳು ಕೊಡವ ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಎಲ್ಲೆಡೆ ಪಸರಿಸುವಂತಾಗಬೇಕು. ಕೊಡವ ಭಗವದ್ಗೀತೆ ಎಂದೇ ಕರೆಯುವ ಪಟ್ಟೋಳೆ ವಳಮೆ, ಸ್ವಾತಂತ್ರ್ಯ ಪೂರ್ವದಲ್ಲಿಯೇ ಪಟ್ಟೋಲೆ ಪಳಮೆ ಭಾಷೆ ಹಾಗೂ ಸಂಸ್ಕೃಂತಿಯ ಬೆಳವಣಿಗೆಯಲ್ಲಿ ಮಹತ್ವದ ಕೆಲಸವನ್ನು ಮಾಡಿದೆ. ಇಂತಹ ಅಮೂಲ್ಯ ಕೃತಿಯನ್ನು ರಚಿಸಿದ ಚಿಣ್ಣಪ್ಪ ಅವರ ಜನ್ಮಾದಿನಾಚರಣೆ ಅಂಗವಾಗಿ ಕಾರ್ಯಕ್ರಮ ಆಯೋಜನೆ ಮಾಡಿರುವುದರ ಮೂಲಕ ಅವರನ್ನು ಸ್ಮರಿಸಿ ಜಾನಪದ ಸಂಸ್ಕೃತಿ ಉಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿರುವುದು ಉತ್ತಮ ಕಾರ್ಯ. ಚಿಣ್ಣಪ್ಪ ಅವರು ಭಗವಂತನ ಹಾಡನ್ನು ಕೂಡ ರಚಿಸಿದ್ದು, ಅದನ್ನು ನಾವು ಹಾಡಬೇಕು. ಈ ಕೊಡಗಿನ ಮಣ್ಣಿನಲ್ಲಿ ಮತ್ತೊಮ್ಮೆ ಹುಟ್ಟಿ ಬರಬೇಕಾದರೆ ಪಟ್ಟೋಲೆ ಪಳಮೆ ಓದಬೇಕು. ಇದರಿಂದ ಕೊಡಗಿನಲ್ಲಿ ಹುಟ್ಟುವ ಭಾಗ್ಯ ಲಭಿಸುತ್ತದೆ. ಕೊಡವರ ಪದ್ದತಿಯಂತೆ ಚಾವು ವಾಟ್ ಇದೆ. ಅದನ್ನು ಈಗ ಹಾಡುವುದು ಎಲ್ಲೂ ಕಂಡುಬರುತ್ತಿಲ್ಲ. ಹೀಗೆ ನಮ್ಮ ಎಲ್ಲಾ ಆಚಾರ ವಿಚಾರಗಳು ಹಳಿ ತಪ್ಪಿ ಹೋಗುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಅಖಿಲ ಕೊಡವ ಸಮಾಜದ ಅಧ್ಯಕ್ಷರಾದ ಪರದಂಡ ಸುಬ್ರಮಣಿ ಮಾತನಾಡಿ ““ನನ್ನ ವಿನೋದಕ್ಕಾಗಿ ಕೊಡಗು ಪದಗಳನ್ನು ಬರೆಯುತ್ತಾ ಇದ್ದು ಕೆಲವು ಮಟ್ಟಿಗೆ ಹಾಡುಗಳು ದೊರೆತ ನಂತರ ಕೊಡವರ ಪದ್ಧತಿಗಳನ್ನು ಬರೆಯತೊಡಗಿದೆ” ಎಂದು ಪಟ್ಟೋಲೆ ಪಳಮ ಗ್ರಂಥದ ರಚನೆಯ ಹಿನ್ನೆಲೆಯನ್ನು ಕುರಿತು ಸರಳವಾಗಿ ಚಿಣ್ಣಪ್ಪನವರು ಹೇಳಿಕೊಂಡಿದ್ದಾರೆ. ಸುಮಾರು ಎರಡು ಸಾವಿರ ವರ್ಷಗಳಷ್ಟು ಪುರಾತನವಾದ ಒಂದು ವಿಶಿಷ್ಟ ಜನಾಂಗದ ಹಾಗೂ ಜಾನಪದದ ವಿವಿಧ ಪ್ರಕಾರಗಳನ್ನು ತಾವೊಬ್ಬರೇ ಜಾನಪದ ವಿದ್ವಾಂಸನಾಗಿ ಸಂಗ್ರಹಿಸುತ್ತಿರುವರೆಂಬುದರ ಕಲ್ಪನೆಯೇ ಇಲ್ಲದೆ, ಕನ್ನಡ ಜಾನಪದ ಸಾಹಿತ್ಯ ಸಂಗ್ರಹವೆಂಬ ಸೌಧದ ಮೊತ್ತಮೊದಲ ಅಡಿಗಲ್ಲನ್ನು ಹಾಕಿದ ಶ್ರೀಯುತರ ಸಾಹಿತ್ಯ ಸೇವೆ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥದ್ದು. ಇವರನ್ನು ಜಾನಪದ ಬ್ರಹ್ಮ ಎಂದು ಕರೆಯುವುದರಲ್ಲಿ ತಪ್ಪಿಲ್ಲ. ಕೊಡವಾಮೆ ಉಳಿಸಿ ಬೆಳೆಸಬೇಕು. ಅದರ ರಕ್ಷಣೆ ಆಗಬೇಕು” ಎಂದರು.
ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣೂ ಅಪ್ಪಣ್ಣ ಮಾತನಾಡಿ “ನಡಿಕೇರಿಯಂಡ ಚಿಣ್ಣಪ್ಪನವರು ಕನ್ನಡ ಜಾನಪದ ಸಂಗ್ರಹಗಳ ಕೃತಿಗಳಲ್ಲೇ ಆಚಾರ್ಯ ಕೃತಿಯೆಂದು ಪರಿಗಣಿಸಲಾಗಿರುವ ಪಟ್ರೋಲೆ ಪಳಮೆಯ ಸಂಗ್ರಾಹಕರು. ಚಿಣ್ಣಪ್ಪನವರು ಕೊಡಗಿನಾದ್ಯಂತ ಸಂಚರಿಸಿ ಕೊಡವರ ಜನಪದ ಸಾಹಿತ್ಯವನ್ನು ಕುರಿತು ಹಲವು ಹಿರಿಯರಿಂದ, ಹಾಡುಗಾರರಿಂದ ಮಾಹಿತಿಗಳನ್ನು ಸಂಗ್ರಹಿಸಿ ಪಟ್ಟೋಲೆ ಪಳಮೆಯನ್ನು ಬರೆದರು. ಅಂದಿನ ಕಮೀಷನರ್ ಸಿ. ಎನ್. ಸೂಟರ್ ಇವರ ಸಹಾಯದಿಂದ ಸರ್ಕಾರದ ವತಿಯಿಂದ ತಮ್ಮ ಗ್ರಂಥವನ್ನು ಪ್ರಕಟಿಸಿದರು. ಬಳಿಕ 1929ರಲ್ಲಿ ಭಗವದ್ಗೀತೆಯನ್ನು ಕೊಡವ ಜಾನಪದ ಗೀತೆಯ ರೂಪದಲ್ಲಿ ‘ಭಗವಂತಂಡ ಪಾಟ್ಸ್’ ಎಂಬ ಶೀರ್ಷಿಕೆಯಲ್ಲಿ ರಚಿಸಿ ಪ್ರಕಟಿಸಿದ್ದರು” ಎಂದರು.
ವದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಐಮುಡಿಯಂಡ ರಾಣಿ ಮಾಚಯ್ಯ ಮಾತನಾಡಿ “ಕೊಡವರು ತಮ್ಮ ಆಚಾರ, ವಿಚಾರ, ಪದ್ದತಿ ಪರಂಪರೆಗಳನ್ನು ಮರೆಯಬಾರದು. ಪೋಷಕರು ಮಕ್ಕಳಿಗೆ ಚಿಕ್ಕಂದಿನಿಂದಲೇ ನಮ್ಮ ಸಂಸ್ಕೃಂತಿಯನ್ನು ಹೇಳಿಕೊಡಬೇಕು. ಕೊಡಗು, ಕೊಡವ ಎಂದರೆ ಜಗತ್ತಿನ ಯಾವ ಮೂಲೆಗೆ ಹೋದರೂ ಗೌರವ ಸಿಗುತ್ತದೆ.” ಎಂದರು.
ಸರ್ಕಂಡ ಸೋಮಯ್ಯ ಮಾತನಾಡಿ “ನಡಿಕೇರಿಯಂಡ ಚಿಣ್ಣಪ್ಪ ಅವರ 150ನೇ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಸಾಕ್ಷಿಯಾದ ನಾವೇ ಧನ್ಯರು, ಆ ಕಾಲಘಟ್ಟದಲ್ಲಿ ‘ಪಟ್ಟೋಲೆ ಪಳಮೆ’ ಬರೆದ ಅವರಲ್ಲಿ ಅಪಾರವಾದ ಜ್ಞಾನ ಭಂಡಾರವೇ ಅಡಗಿತ್ತು. ಈ ಗ್ರಂಥವನ್ನು ಪ್ರತಿಯೊಬ್ಬರೂ ಓದಬೇಕು” ಎಂದರು.
ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷ ಚಾಮರ ದಿನೇಶ್ ಬೆಳ್ಯಪ್ಪ ಅವರ ಅಧ್ಯಕ್ಷತೆ ವಹಿಸಿ ಮಾತನಾಡಿ ’ಪಟ್ಟೋಲೆ ಪಳಮೆ’ ಕೃತಿಯು ಕೊಡವ ಭಾಷೆ, ಸಂಸ್ಕೃಂತಿಗೆ ಹಿಡಿದ ಕೈಗನ್ನಡಿಯಾಗಿದೆ. ಕೊಡವ ಭಾಷೆಯನ್ನು ಮಾತನಾಡುವ ಎಲ್ಲರೂ ಇದನ್ನು ಭಗವದ್ಗೀತೆಗೆ ನಮನಾಗಿಸಿದ್ದಾರೆ. ‘ಪಟ್ಟೋಲೆ ಪಳಮೆ’ ಕೊಡವ ಭಾಷೆ ಪದ್ಧತಿ ಸಂಸ್ಕೃತಿ ಪರಂಪರೆಯ ಹಿಂದಿನ ಪಾವಿತ್ರ್ಯತೆಯ ಕೃತಿಯಾಗಿದ್ದು ಇದನ್ನು ಪ್ರತಿಯೊಬ್ಬರಿಗೆ ಅರಿವು ಮೂಡಿಸಿ ಶಾಶ್ವತವಾಗಿ ಉಳಿಸಲು ಇಂದಿನ ಯುವ ಜನಾಂಗ ಎಲ್ಲಾ ರೀತಿಯಿಂದಲೂ ಶ್ರಮಿಸಬೇಕು. ಕೊಡವ ಭಾಷೆಯಲ್ಲಿ ರಚನೆಯಾದ ಈ ಕೃತಿ ಕೊಡಗಿನಲ್ಲಿ ಶಾಶ್ವತವಾಗಿ ಉಳಿಸಿ ಬೆಳೆಸುವ ಪ್ರಯತ್ನವಾಗಬೇಕು. ನಮ್ಮ ಆಚಾರ ವಿಚಾರ, ಪದ್ದತಿ ಪರಂಪರೆಗೆ ದಕ್ಕೆ ಬರುವಂತಹ ಸಂದರ್ಭದಲ್ಲಿ ಕೊಡವಾಮೆಯ ಉಳಿವಿಗಾಗಿ ನಡಿಕೇರಿಯಂಡ ಚಿಣ್ಣಪ್ಪ ಅವರು ಎಲ್ಲಾ ಕಡೆ ಸುತ್ತುತ್ತಾ ಪದ್ಧತಿ ಪರಂಪರೆಗಳನ್ನು ಅರಿತು ಅದನ್ನು ಪುಸ್ತಕ ರೂಪದಲ್ಲಿ ದಾಖಲಾಗುವಂತೆ ಮಾಡಿದ್ದಾರೆ. ಅಂದಿನ ಕಾಲದಲ್ಲಿ ಜನಪದದ ನೆಲೆಗಟ್ಟಿನಲ್ಲಿ ಕೊಡವರಿಗೆ ಇದು ಭಗವದ್ಗೀತೆ ರೂಪದಲ್ಲಿ ದೊರೆತ ಗ್ರಂಥವಾಗಿದ್ದು ಈ ಕಾರಣಕ್ಕಾಗಿ ಅವರನ್ನು ‘ಜಾನಪದ ಬ್ರಹ್ಮ’ ಎಂದೆ ಕರೆಯಲಾಗುತ್ತದೆ ಎಂದುರು. ನಡಿಕೇರಿಯಂಡ ಚಿಣ್ಣಪ್ಪ ಅವರ 150ನೇ ವರ್ಷಾಚರಣೆಯ ಅಂಗವಾಗಿ ರಾಜ್ಯಮಟ್ಟದ ಬೃಹತ್ ಜಾನಪದ ನಮ್ಮೆಯನ್ನು ಕರ್ನಾಟಕದ ಎಲ್ಲಾ ಜಿಲ್ಲೆಗಳ ಪ್ರಮುಖರನ್ನು ಸೇರಿಸಿ ಆಯೋಜಿಸಲಾಗುತ್ತದೆ. ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಇವರ ಜನ್ಮದಿನಾಚರಣೆ ಆಚರಿಸುವಂತಾಗಬೇಕು” ಎಂದರು.
ಮುಕ್ಕಾಟಿರ ಸುಧಾ ಪೂಣಚ್ಚ, ಪುತ್ತಾಮನೆ ವಿದ್ಯಾ ಜಗದೀಶ್, ಮೊಣ್ಣಂಡ ಶೋಭಾ ಸುಬ್ಬಯ್ಯ, ಪೋಡಮಾಡ ಭವಾನಿ ನಾಣಯ್ಯ ಕೊಡವ ಹಾಡುಗಳನ್ನು ಹಾಡಿದರು. ಕಾರ್ಯಕ್ರಮದಲ್ಲಿ ಕೊಡಗಿನ ಮೂಲೆ ಮೂಲೆಗಳಿಂದ ಆಗಮಿಸಿದ ವಿವಿಧ ಕೊಡವ ನಮಾಜಗಳ ಪ್ರಮುಖರು, ಸಂಘಟನೆಗಳ ಪದಾಧಿಕಾರಿಗಳು ಕೊಡಗಿನ ಮೂಲ ನಿವಾಸಿಗಳಾದ ಕೊಡವ ಭಾಷಿಕ ಜನಾಂಗ ಭಾಂಧವರು ಸೇರಿದಂತೆ ಕೊಡವಾಮೇರ ಕೊಂಡಾಟ ಸಂಘಟನೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಕೊಡಗಿನ ಎಲ್ಲಾ ಕೊಡವ ಸಮಾಜಗಳ ಪ್ರಮುಖರು, ಹೊರ ಜಿಲ್ಲೆಗಳಲ್ಲಿರುವ ಕೊಡವ ಸಮಾಜಗಳು, ಕೊಡಗಿನಲ್ಲಿರುವ ವಿವಿಧ ಕೊಡವ ಸಂಘಟನೆಗಳು, ಕೊಡವ ಕೇರಿಗಳು, ಪೊಮ್ಮಕ್ಕಡ ಕೂಟಗಳು, ಕೊಡಗಿನಲ್ಲಿರುವ ಕೊಡವ ಭಾಷಿಕ ಜನಾಂಗಗಳು, ಮತ್ತು ಕೊಡವಾಮೆಯ ಉಳಿವಿಕೆಗಾಗಿ ಶ್ರಮಿಸುತ್ತಿರುವ ಕೊಡವ ಮತ್ತು ಕೊಡವ ಭಾಷಿಕ ನಮುದಾಯಗಳ ಪ್ರಮುಖರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.