ಮೂಡಬಿದೆರೆ : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು, ಐ. ಸಿ. ವೈ. ಎಮ್. ಹೊಸ್ಪೆಟ್ ಘಟಕ ಇವರ ಸಹಯೋಗದಲ್ಲಿ ಆಯೋಜಿಸಿದ ಕೊಂಕಣಿ ಸಾಹಿತ್ಯ ಕಾರ್ಯಗಾರವು ದಿನಾಂಕ 20 ಜುಲೈ 2025ರಂದು ಮೂಡುಬಿದರೆಯ ಹೊಸ್ಪೆಟ್ ಚರ್ಚ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಗಾರದ ಆರಂಭದಲ್ಲಿ ಹೊಸ್ಪೆಟ್ ಚರ್ಚ್ ಇದರ ಧರ್ಮಗುರುಗಳಾದ ಅ. ವಂ. ಗ್ರೆಗೊರಿ ಡಿ’ಸೋಜ ಮಾತನಾಡಿ “ಅಕಾಡೆಮಿಯು ಇಂತಹ ಕಾರ್ಯಗಾರವನ್ನು ಹಮ್ಮಿಕೊಳ್ಳುವ ಮೂಲಕ ಹೊಸ ಸಾಹಿತಿಗಳನ್ನು ಪ್ರೋತ್ಸಾಹಿಸುತ್ತಿದೆ. ಭಾಗವಹಿಸಿದವರಲ್ಲಿ ಸಾಹಿತಿಗಳು ಹುಟ್ಟಿಕೊಳ್ಳಲಿ” ಎಂದು ಹೇಳಿ ಶುಭ ಹಾರೈಸಿದರು.
ಕಾರ್ಯಗಾರದಲ್ಲಿ ಶ್ರೀಮತಿ ಫೆಲ್ಸಿ ಲೋಬೊ ದೆರೆಬೈಲ್ ಇವರು ಕವನ ಬರೆಯುವ ಬಗ್ಗೆ ತರಬೇತಿ ನೀಡಿದರು. ಕಾರ್ಯಗಾರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳ ತಂಡಗಳನ್ನು ಮಾಡಿ ಕವನವನ್ನು ರಚಿಸಲು ಅವಕಾಶ ಮಾಡಿಕೊಟ್ಟರು. ರೊನಿ ಕ್ರಾಸ್ತಾ ಕೆಲರಾಯ್ ಹಾಗೂ ವಿನೋದ್ ಪಿಂಟೊ ತಾಕೊಡೆ ಸಹಾಯ ಮಾಡಿದರು. ಕಾರ್ಯಗಾರದ ಶಿಬಿರಾರ್ಥಿಗಳು ಹುಮ್ಮಸ್ಸಿನಿಂದ, ಸುಂದರವಾದ ಕವಿತೆಗಳನ್ನು ರಚಿಸಿ, ಕಾರ್ಯಗಾರದಲ್ಲಿ ಪ್ರಸ್ತುತಪಡಿಸಿದರು. ಶ್ರೀ ರೊನಿ ಕ್ರಾಸ್ತಾ, ಕೆಲರಾಯ್ ಇವರು ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಬಗ್ಗೆ, ಹಾಗೂ ಡಾ. ಜೊಯರ್ ರುಡೋಲ್ಪ್ ನೊರೊನ್ಹಾ ಇವರು ಕೊಂಕಣಿ ಇತಿಹಾಸ ಮತ್ತು ಸಾಹಿತ್ಯದ ಬಗ್ಗೆ ಉಪನ್ಯಾಸವನ್ನು ನೀಡಿದರು.
ಸಂಜೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಮಾತನಾಡಿ “ಕೊಂಕಣಿ ಜನರಿದ್ದಲ್ಲಿ ಅಕಾಡೆಮಿಯು ಬಂದು ಕೊಂಕಣಿ ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯಕ್ರಮವನ್ನು ನಡೆಸುತ್ತದೆ. ಜನರು ಇದರ ಪ್ರಯೋಜನವನ್ನು ಪಡೆಯಬೇಕು. ಕಾರ್ಯಕ್ರಮದ ಫಲವಾಗಿ ಒಬ್ಬರಾದರೂ ಕವಿ ಅಥವಾ ಕವಯಿತ್ರಿ ಉದಯಿಸಿದರೆ, ಅಕಾಡೆಮಿಯ ಪ್ರಯತ್ನವು ಫಲಿಸುತ್ತದೆ” ಎಂದರು. ಕಾರ್ಯಗಾರದಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಅಕಾಡೆಮಿ ಸದಸ್ಯರಾದ ನವೀನ್ ಲೋಬೊ, ಸಿ. ಎಸ್. ಸಿ. ಎ. ಅಧ್ಯಕ್ಷರಾದ ವಿನೋದ್ ಪಿಂಟೊ, ಐ. ಸಿ. ವೈ. ಎಮ್. ಇದರ ಅಧ್ಯಕ್ಷರಾದ ರೊಲ್ಸ್ಟನ್ ಫ್ಲೆಮಿಂಗ್ ಡಿ’ಸೋಜ, ಐ. ಸಿ. ವೈ. ಎಮ್. ಸಂಘಟನೆಯ ಪ್ರೇರಕರಾದ ಸೆಲ್ವಿನ್ ಜ್ಯೂಡ್ ಕುಲಾಸೊ ಹಾಗೂ ಡೆನಿಸ್ ಫರ್ನಾಂಡಿಸ್ ಉಪಸ್ಥಿತರಿದ್ದರು. ಕೆನರಾ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಎಸೋಸಿಯೇಶನ್ ಇವರು ಈ ಕಾರ್ಯಗಾರಕ್ಕೆ ಸಹಕಾರ ನೀಡಿದ್ದರು.