ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಮಾಂಡ್ ಸೊಭಾಣ್ ಸಹಯೋಗದಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಏರ್ಪಡಿಸಿದ 34ನೇ ಕೊಂಕಣಿ ಮಾನ್ಯತಾ ದಿನಾಚರಣೆಯನ್ನು ದಿನಾಂಕ 20 ಆಗಸ್ಟ್ 2025ರಂದು ಶಕ್ತಿನಗರದ ಕಲಾಂಗಣದಲ್ಲಿ ಶಾಲಾ ಕಾಲೇಜುಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸುವ ಮೂಲಕ ವೈಭವಯುತವಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮದ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಪ್ರೊ. ಅರುಣಾ ಕಾಮತ್ “ರಾಜ್ಯಭಾಷೆ ಯಾವುದೇ ಒಂದು ರಾಜ್ಯಕ್ಕೆ ಸೀಮಿತವಾದರೆ ಕೊಂಕಣಿಯ ವಿಶೇಷತೆ ಏನೆಂದರೆ ಅದು ಇಡೀ ಕೊಂಕಣ ಪ್ರದೇಶಕ್ಕೆ ಅನ್ವಯಿಸುವ ಭಾಷೆ. ಸಾವಿರಾರು ಭಾಷೆ, ಉಪಭಾಷೆಗಳಿರುವ ಭಾರತದಲ್ಲಿ ಕೇವಲ 22 ಭಾಷೆಗಳಿಗೆ ಮಾತ್ರ ಅಧಿಕೃತ ಭಾಷೆಯ ಸ್ಥಾನಮಾನವಿದೆ. ಅದರಲ್ಲಿ ಕೊಂಕಣಿ ಒಂದು ಎಂಬ ಅಭಿಮಾನ ನಮ್ಮದು. ಹಲವಾರು ಕಠಿಣ ನಿಬಂಧನೆಗಳನ್ನು ದಾಟಿ, ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲು ನಮ್ಮ ಹಿರಿಯರು ಶ್ರಮಿಸಿದ್ದಾರೆ. ಇಂದು ಕರ್ನಾಟಕದಲ್ಲಿ ಕೊಂಕಣಿ ಕಲಿಕೆಗೆ, ಸ್ನಾತಕೋತ್ತರ ಶಿಕ್ಷಣಕ್ಕೆ ಮತ್ತು ಸಂಶೋಧನೆಗೆ ಅವಕಾಶವಿದೆ. ಅದನ್ನು ಬಳಸಬೇಕು ಹಾಗೂ ಇದು ತಂತ್ರಜ್ಞಾನ ಯುಗ. ಸಾಮಾಜಿಕ ಮಾಧ್ಯಮ ಹಾಗೂ ಅಂತರ್ಜಾಲದ ಪ್ರಭಾವಿ ಬಳಕೆಯ ಮುಖಾಂತರ ಕೊಂಕಣಿಯನ್ನು ವಿಶ್ವಸ್ತರಕ್ಕೆ ಕೊಂಡೊಯ್ಯಲು ಯುವಜನತೆ ಶ್ರಮಿಸಬೇಕು” ಎಂದು ಹೇಳಿದರು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಜೋಕಿಂ ಜ್ಞಾನಿ ಆಲ್ವಾರಿಸ್ ಇವರು ಸ್ವಾಗತಿಸಿ, ಪ್ರಸ್ತಾವಿಕ ನುಡಿಗಳನ್ನಾಡಿ “ಭಾರತದ ಮಾನ್ಯತೆ ಪಡೆದ ಅಧಿಕೃತ 22 ಭಾಷೆಗಳಲ್ಲಿ ಕೊಂಕಣಿಯೂ ಒಂದು. ನಮ್ಮ ಭಾಷೆಗೆ 1992 ಆಗಸ್ಟ್ 20ರಂದು ದೊರೆತ ಮಾನ್ಯತೆಯನ್ನು ನಾವು ಕೊಂಕಣಿ ಮಾನ್ಯತಾ ದಿನಾಚರಣೆ ಹೆಸರಲ್ಲಿ ಸಂಭ್ರಮಿಸುತ್ತೇವೆ. ಯುವಜನರು ಇದರಿಂದ ಸ್ಪೂರ್ತಿ ಪಡೆದು ಕೊಂಕಣಿ ಕೀರ್ತಿಯನ್ನು ಇಡೀ ಜಗತ್ತಿಗೆ ವಿಸ್ತರಿಸಲು ಶ್ರಮಿಸಬೇಕು. ಭಾಷಾಭಿವೃದ್ಧಿಯ ಯಾವುದೇ ಹೊಸ ಯೋಚನೆಗಳಿಗೆ ಅಕಾಡೆಮಿ ಸಹಕಾರ ನೀಡಲಿದೆ” ಎಂದರು.
ಈ ದಿನಾಚರಣೆಯನ್ನು ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್ ರಂಗನಾಥ ಕಿಣಿ ಕೊಂಕಣಿ ಬಾವುಟ ಏರಿಸುವ ಮೂಲಕ ಉದ್ಘಾಟಿಸಿದರು. ನಂತರ ಪ್ರೌಢಶಾಲೆ ಹಾಗೂ ಕಾಲೇಜು ವಿಭಾಗಗಳಲ್ಲಿ ವಿವಿಧ ವಿನೋದಾವಳಿ ಸ್ಪರ್ಧೆಗಳು ನಡೆದವು. ಪ್ರೌಢಶಾಲಾ ವಿಭಾಗದಲ್ಲಿ ಕ್ರೈಸ್ಟ್ ಕಿಂಗ್ ಆಂಗ್ಲ ಮಾಧ್ಯಮ ಶಾಲೆ ಕಾರ್ಕಳ ಪ್ರಥಮ, ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್ ದ್ವೀತೀಯ ಮತ್ತು ಹೋಲಿ ಫ್ಯಾಮಿಲಿ ಅಂಗ್ಲ ಮಾಧ್ಯಮ ಶಾಲೆ ತೃತೀಯ ಸ್ಥಾನ ಪಡೆದರು. ಕಾರ್ಯಕ್ರಮ ನಿರ್ವಹಣೆಯಲ್ಲಿ ಕ್ರೈನ್ಸ್ ಕಿಂಗ್ ಶಾಲೆಯ ಬೆನಿಶಾ ಮೆಂಡೊನ್ನಾ ಮತ್ತು ಸಾನ್ವಿ ಮಾರ್ಟಿನ್ ಪ್ರಥಮ, ಮೌಂಟ್ ಕಾರ್ಮೆಲ್ ಶಾಲೆಯ ಆಲೋಮ ಲೋಬೊ ದ್ವಿತೀಯ ಹಾಗೂ ಕೆನರಾ ಪ್ರೌಢ ಶಾಲೆಯ ಜೀವಿಕಾ ಕುಡ್ವಾ ತೃತೀಯ ಸ್ಥಾನ ಪಡೆದರು.
ಕಾಲೇಜು ವಿಭಾಗದಲ್ಲಿ ಸಂತ ಎಲೋಶಿಯಸ್ ಪಿ.ಯು. ಕಾಲೇಜು ಬಿ ತಂಡ ಪ್ರಥಮ, ಸಂತ ಎಲೋಶಿಯಸ್ ಪಿ.ಯು. ಕಾಲೇಜು ಎ ತಂಡ ದ್ವಿತೀಯ ಹಾಗೂ ಕಾರ್ಮೆಲ್ ಪಿ.ಯು. ಕಾಲೇಜು ಮೊಡಂಕಾವು ತೃತೀಯ ಸ್ಥಾನ ಪಡೆದರು. ಕಾರ್ಯಕ್ರಮ ನಿರ್ವಹಣೆಯಲ್ಲಿ ಸಂತ ಎಲೋಶಿಯಸ್ ಪಿ.ಯು. ಕಾಲೇಜಿನ ಲಿನ್ಸನ್ ಕಾರ್ಲ್ ಪ್ರಥಮ, ಸಂತ ಎಲೋಶಿಯಸ್ ಪಿ.ಯು. ಕಾಲೇಜಿನ ಆಡ್ಲಿನ್ ಸಿಕ್ವೇರಾ ಮತ್ತು ಕೆನರಾ ಸಂಧ್ಯಾ ಕಾಲೇಜಿನ ಪಂಚಮಿ ಭಟ್ ದ್ವಿತೀಯ ಮತ್ತು ಸಂತ ಎಲ್ಲೋಶಿಯನ್ ಪರಿಗಣಿತ ವಿ.ವಿ.ಯ ಸಾನ್ವಿಯಾ ರೂತ್ ದಿಕುನ್ಹಾ ತೃತೀಯ ಸ್ಥಾನ ಪಡೆದರು. ವಿಕಾಸ್ ಕಲಾಕುಲ್ ಬಹುಮಾನಿತರ ವಿವರ ವಾಚಿಸಿದರು. ಇತ್ತೀಚೆಗೆ ಭರತನಾಟ್ಯದಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಕುಮಾರಿ ರೆಮೊನ ಇವೆಟ್ ಪಿರೇರಾ ಇವರನ್ನು ಸನ್ಮಾನಿಸಲಾಯಿತು. ಸನ್ಮಾನ ಪತ್ರವನ್ನು ಅಕಾಡೆಮಿ ಸದಸ್ಯೆ ಶ್ರೀಮತಿ ಅಕ್ಷತಾ ನಾಯಕ್ ವಾಚಿಸಿದರು.
ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಶ್ರೀ ರೊಯ್ ಕ್ಯಾಸ್ತಲಿನೊರವರು ‘ಚಾಲ್ತಿ ಕೊಂಕ್ಲಿ’ ಪುಸ್ತಕದ ಇ-ಬುಕ್ ಆವೃತ್ತಿಯನ್ನು ಬಿಡುಗಡೆಗೊಳಿಸಿದರು. ಪುಸ್ತಕದ ಬಗ್ಗೆ ಕೇರನ್ ಮಾಡ್ತಾ ಮಾಹಿತಿ ನೀಡಿದರು. ಮಾಂಡ್ ಸೊಭಾಣ್ ಅಧ್ಯಕ್ಷರಾದ ಶ್ರೀ ಲುವಿ ಜಿ. ಪಿಂಟೊ ತೀರ್ಪುದಾರರನ್ನು ಹಾಗೂ ಇತ್ತೀಚೆಗೆ ಗುರು ಶ್ರೇಷ್ಠ ಗೌರವ ಪಡೆದ ಶಿಕ್ಷಕಿ ಹಾಗೂ ಅಕಾಡೆಮಿ ಸದಸ್ಯೆ ಶ್ರೀಮತಿ ಸಪ್ನಾ ಕ್ರಾಸ್ತಾ ಇವರನ್ನು ಗೌರವಿಸಿದರು. ಅಕಾಡೆಮಿ ಸದಸ್ಯರಾದ ನವೀನ್ ಲೋಬೊ, ರೊನಿ ಕ್ರಾಸ್ತಾ, ದಯಾನಂದ ಮಡ್ಕೇಕರ್ ಉಪಸ್ಥಿತರಿದ್ದರು. ರಿಜಿಸ್ಟ್ರಾರ್ ರಾಜೇಶ್ ಜಿ. ಧನ್ಯವಾದ ಅರ್ಪಿಸಿದರು. ಉದ್ಘಾಟನಾ ಕಾರ್ಯವನ್ನು ಅಕಾಡೆಮಿ ಸದಸ್ಯ ಸಮರ್ಥ್ ಭಟ್ ಮತ್ತು ಸಮಾರೋಪ ಕಾರ್ಯಕ್ರಮವನ್ನು ವೆನಿಕಾ ಸಲ್ದಾನ್ಹಾ ನಿರೂಪಿಸಿದರು.