ಮಂಗಳೂರು : ಕೊಂಕಣಿ ಸಾಂಸ್ಕೃತಿಕ ಸಂಘ ಮಂಗಳೂರು, ಸಿದ್ದಿವಿನಾಯಕ ದೇವಸ್ಥಾನ ಮಂಗಳೂರು ವತಿಯಿಂದ ‘ದಮಯಂತಿ ಪುನಃ ಸ್ವಯಂವರ’ ಕೊಂಕಣಿ ಯಕ್ಷಗಾನ ಪ್ರದರ್ಶನ ದಿನಾಂಕ 31 ಮೇ 2025ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿ. ಎ. ನಂದಗೋಪಾಲ ಶೆಣೈ ಮಾತನಾಡಿ “ಪ್ರಸ್ತುತ ದಿನಗಳಲ್ಲಿ ವಿವಿಧ ಕೊಂಕಣಿ ಕಾರ್ಯಕ್ರಮಗಳು ಸಾಕಷ್ಟು ನಡೆಯುತ್ತಿವೆ. ಆದರೆ, ಕೊಂಕಣಿ ಪ್ರೇಕ್ಷಕ ವರ್ಗ ಹೇಗೆ ಹೆಚ್ಚಿಸುವುದು ಎಂಬುದು ಸವಾಲಿನದ್ದಾಗಿದೆ. ಕೊಂಕಣಿ ಭಾಷಿಗರು ಕೊಂಕಣಿಯ ಕಂಪು ಮತ್ತಷ್ಟು ಪಸರಿಸಲು ನೆರವಾಗಬೇಕು. ಕೊಂಕಣಿಗರು ವಿಶ್ವದಲ್ಲೇ 40 ಲಕ್ಷ ಮಂದಿ ಇದ್ದೇವೆ. ಸಂಖ್ಯೆಯಲ್ಲಿ ಕಡಿಮೆ ಇದ್ದರೂ ವಿಶ್ವದಾದ್ಯಂತ ವ್ಯಾಪಿಸಿಕೊಂಡಿದ್ದೇವೆ. ಕೊಂಕಣಿ ಮಾತನಾಡುವ 40 ವಿವಿಧ ಪಂಗಡಗಳಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನ ವಿದೇಶದಲ್ಲಿದ್ದಾರೆ. ಕೊಂಕಣಿಯಲ್ಲಿ ಯಾವುದೇ ಸಂಸ್ಥೆ ಕಾರ್ಯಕ್ರಮ ಇದ್ದರೂ ಎಲ್ಲರೂ ಭಾಗವಹಿಸಬೇಕು. ಯಾರಿಗೂ ನಿರ್ಬಂಧವಿರಬಾರದು. ಎಲ್ಲರಿಗೂ ಅವಕಾಶ ನೀಡಬೇಕು. ಗೋವಾದಲ್ಲಿ ಕೊಂಕಣಿ ಭಾಷೆಯನ್ನು ಪ್ರೀತಿಸುವಂತೆ ನಮ್ಮಲ್ಲೂ ಭಾಷೆಯನ್ನು ಬೆಳೆಸುವ ಪ್ರವೃತ್ತಿ ಹೆಚ್ಚಾಗಬೇಕು.
ಟ್ರಾಯಿ ಜುವೆಲ್ಲರ್ಸ್ ಇದರ ನಿರ್ದೇಶಕಿ ಶ್ರದ್ಧಾ ಸುಬ್ರಾಯ ಪೈ ಮಾತನಾಡಿ “ಇಂದಿನ ಯುವಜನರಿಗೆ ಆಂಗ್ಲದತ್ತ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಇದರಿಂದ ಕೊಂಕಣಿಯ ಆಸಕ್ತಿ ಕಡಿಮೆಯಾಗಿದೆ. ಮಕ್ಕಳಿಗೆ ಕೊಂಕಣಿ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಸಣ್ಣದಿಂದಲೇ ಕೊಂಕಣಿ ಕಾರ್ಯಕ್ರಮಗಳ ವೀಕ್ಷಣೆಗೆ ಬೆಂಬಲಿಸಬೇಕು. ಬ್ರಿಟಿಷರು ಭಾರತವನ್ನು ಲೂಟಿ ಮಾಡಿದಂತೆ ನಮ್ಮಸಂಸ್ಕೃತಿಯನ್ನು ಪಾಶ್ಚಾತ್ಯ ಸಂಸ್ಕೃತಿಯು ಲೂಟಿ ಮಾಡುತ್ತಿದ್ದು, ಇದಕ್ಕೆ ಅವಕಾಶ ನೀಡಬಾರದು” ಎಂದರು.