ಮಂಗಳೂರು : “ಪ್ರತಿಯೊಬ್ಬ ವ್ಯಕ್ತಿಯ ಒಳಗೊಬ್ಬ ಕಲಾವಿದ ಇರುತ್ತಾನೆ. ಅವನನ್ನು ಜಾಗ್ರತಗೊಳಿಸುವುದಷ್ಟೇ ನನ್ನ ಕೆಲಸ. ನಿಮ್ಮೊಳಗಿನ ಪ್ರತಿಭೆ ನಿಮಗೆ ತಿಳಿಯುವುದಿಲ್ಲ. ಆಸಕ್ತಿ, ಶ್ರದ್ದೆ, ಮತ್ತು ತಾಳ್ಮೆಯು ಕಲಾವಿದನಿಗೆ ಇರಬೇಕಾದ ಮುಖ್ಯ ಲಕ್ಷಣಗಳು”. ಎಂದು ಖ್ಯಾತ ರಂಗ ನಿರ್ದೇಶಕ, ನಟ ಕಾಸರಗೋಡು ಚಿನ್ನಾ ಅವರು ತಿಳಿಸಿದರು. ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದ ನೇತೃತ್ವದಲ್ಲಿ ವರ್ಷಂಪ್ರತಿ ಜರಗುವ “ಕ್ಷಿತಿಜ್ ” ಕಾರ್ಯಕ್ರಮದ ಅಂಗವಾಗಿ ಕೇಂದ್ರದಲ್ಲಿ ಜರಗಿದ ರಂಗ ತರಬೇತಿ ಶಿಬಿರದ ನಿರ್ದೇಶಕರಾಗಿ ಅವರು ಮಾತನಾಡುತ್ತಿದ್ದರು. ಮೇ ತಿಂಗಳ 25 ರಂದು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಊರುಗಳಿಂದ ಭಾಗವಹಿಸಿದ ಸುಮಾರು 70 ಮಂದಿ ವಿದ್ಯಾರ್ಥಿಗಳಿಗೆ ಧ್ವನಿ ಏರಿಳಿತ, ಮೂಕಾಭಿನಯ, ನಟನೆ ಮತ್ತು ಅಂಗಿಕ ಅಭಿನಯ ಸೇರಿದಂತೆ ರಂಗಭೂಮಿಯ ವಿವಿಧ ಆಯಾಮಗಳ ಬಗ್ಗೆ ವಿವರಿಸಿ ಹೇಳಿದರು. ವಿಶ್ವ ಕೊಂಕಣಿ ಕೇಂದ್ರದ ಆಡಳಿತ ನಿರ್ದೇಶಕರಾದ ಸಿ.ಎ. ನಂದಗೋಪಾಲ ಶೆಣೈ ಅವರು “ಕ್ಷಿತಿಜ್ ” ಕಾರ್ಯಾಗಾರದ ಪರವಾಗಿ ಸ್ಮರಣಿಕೆ ನೀಡಿ ಗೌರವಿಸಿದರು. ಕೇಂದ್ರದ ಶ್ರೀಮತಿ ಲಕ್ಷ್ಮಿ ಅವರು ಸ್ವಾಗತಿಸಿ, ವಿಶ್ವ ಕೊಂಕಣಿ ಕೇಂದ್ರದ ಸಿ.ಇ.ಒ ಡಾl ದೇವದಾಸ ಪೈ ವಂದಿಸಿದರು.