ಬಂಟ್ವಾಳ : ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಸಹಯೋಗದಲ್ಲಿ ವಿಶ್ವಭಾರತಿ ಯಕ್ಷ ಸಂಜೀವಿನಿ ಟ್ರಸ್ಟ್ ಮುಡಿಪು ವತಿಯಿಂದ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ತಾಳಮದ್ದಳೆ ಹಾಗೂ ಹಿರಿಯ ಭಾಗವತರಾದ ದಿವಂಗತ ಕುಬಣೂರು ಶ್ರೀಧರ ರಾವ್ ಸ್ಮರಣೆ ಕಾರ್ಯಕ್ರಮ ಬಿ.ಸಿ.ರೊಡಿನ ತುಳು ಶಿವಳ್ಳಿ ಸಭಾಭವನದಲ್ಲಿ ದಿನಾಂಕ 27 ಜುಲೈ 2025ರಂದು ನಡೆಯಿತು.
ತುಳು ಶಿವಳ್ಳಿ ಸೇವಾ ಟ್ರಸ್ಟ್ ಬಂಟ್ವಾಳ ಸಹಯೋಗದೊಂದಿಗೆ ಒಂಭತ್ತು ದಿನಗಳ ಕಾಲ ನಡೆದ ಭಾರತ ದರ್ಶನ ಸರಣಿ ತಾಳಮದ್ದಳೆಯ ಸಮಾರೋಪವೂ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ “ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವಿಶ್ವಭಾರತಿ ನಡೆಸುತ್ತಿರುವ ಪ್ರಯತ್ನಗಳು ಶ್ಲಾಘಿನೀಯ.
ಹಿರಿಯ ಯಕ್ಷಗಾನ ಕಲಾವಿದ ಜಬ್ಬಾರ್ ಸಮೋ ಸಂಪಾಜೆ ಇವರು ಕುಬಣೂರು ಶ್ರೀಧರ ರಾವ್ ಅವರ ಸಂಸ್ಮರಣೆಯನ್ನು ನೆರವೇರಿಸಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಕೃಷ್ಣಪ್ಪ ಕಿನ್ಯ, ಮಾಜಿ ಸದಸ್ಯ ಭಾಸ್ಕರ ರೈ ಕುಕ್ಕುವಳ್ಳಿ, ಸಚಿಪಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್, ವೈದ್ಯರಾದ ಡಾ. ಶಿವಪ್ರಸಾದ್ ಶೆಟ್ಟಿ, ತುಳು ಶಿವಳ್ಳಿ ಸೇವಾ ಟ್ರಸ್ಟ್ ಬಂಟ್ವಾಳ ತಾಲೂಕು ಇದರ ಅಧ್ಯಕ್ಷರಾದ ರಾಜಾರಾಮ ಭಟ್, ಯಕ್ಷಗಾನ ಸಂಘಟಕ ಬಿ. ಭುಜಬಲಿ ಧರ್ಮಸ್ಥಳ ಉಪಸ್ಥಿತರಿದ್ದರು.
ವಿಶ್ವ ಭಾರತಿ ಸಂಚಾಲಕ ಪ್ರಶಾಂತ್ ಹೊಳ್ಳ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿ, ಜಗದೀಶ ಹೊಳ್ಳ ಮೊಡಂಕಾಪು ಕಾರ್ಯಕ್ರಮ ನಿರ್ವಹಿಸಿ, ವಿಶ್ವಭಾರತಿ ಕಾರ್ಯದರ್ಶಿ ಕುಶಲ ಮುಡಿಪು ವಂದಿಸಿದರು.. ಬಳಿಕ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಗದಾಯುದ್ದ’ ಯಕ್ಷಗಾನ ತಾಳಮದ್ದಳೆ ನಡೆಯಿತು. ಇದೇ ವೇಳೆ ಅಶಕ್ತ ಕಲಾವಿದ ಜಿ. ಕೆ. ನಾವಡ ಇವರಿಗೆ ಗೌರವಾರ್ಪಣೆ ಮಾಡಲಾಯಿತು.

