ಬೆಂಗಳೂರು : ಕುಂದಾಪ್ರ ಕನ್ನಡ ಪ್ರತಿಷ್ಠಾನ (ರಿ.) ಬೆಂಗಳೂರು ಇದರ ವತಿಯಿಂದ ‘ಕುಂದಾಪ್ರ ಕನ್ನಡ ಹಬ್ಬ 2025’ ಕಾರ್ಯಕ್ರಮವನ್ನು ದಿನಾಂಕ 26 ಮತ್ತು 27 ಜುಲೈ 2025ರಂದು ಬೆಂಗಳೂರಿನ ಹೊಸಕೆರೆಹಳ್ಳಿ ನೈಸ್ ರೋಡ್ ಜಂಕ್ಷನ್ ಇಲ್ಲಿರುವ ನಂದಿ ಲಿಂಕ್ ಗ್ರೌಂಡ್
ನಲ್ಲಿ ಹಮ್ಮಿಕೊಳ್ಳಲಾಗಿದೆ.
‘ಕುಂದಾಪ್ರ ಕನ್ನಡ ಹಬ್ಬ-2025’ ಇದು ಆರನೇ ಕುಂದಾಪ್ರ ಕನ್ನಡ ಹಬ್ಬವಾಗಿದ್ದು, ಈ ಸಲ ಇದನ್ನು ಶನಿವಾರ ಸಂಜೆ 5-00 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ‘ಕುಂದಾಪ್ರ ಕನ್ನಡ ಅಧ್ಯಯನ ಪೀಠ’ವನ್ನು ಸಿ.ಎಂ., ಸಭಾಪತಿ ಯು.ಟಿ. ಖಾದರ್, ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್, ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿ ಮುಂತಾದವರು ಜೊತೆಯಾಗಿ ಲೋಕಾರ್ಪಣೆ ಮಾಡಲಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಕುಂದಾಪ್ರ ಕನ್ನಡ ಹಬ್ಬದ ಸಂದರ್ಭದಲ್ಲೇ ಈ ಪೀಠಕ್ಕಾಗಿ ಮನವಿ ಮಾಡಲಾಗಿತ್ತು. ಅದರಂತೆ ಸರ್ಕಾರ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕುಂದಾಪ್ರ ಕನ್ನಡ ಪೀಠ ಸ್ಥಾಪಿಸಿ ಅನುದಾನ ಕೂಡ ಬಿಡುಗಡೆ ಮಾಡಿದೆ.
ಈ ಸಲದ ಕುಂದಾಪ್ರ ಕನ್ನಡ ಹಬ್ಬದಲ್ಲಿ ಕುಂದಾಪುರ ಮೂಲದ ಸಾಧಕರಾದ ಮಣಿಪಾಲ ಗ್ರೂಪ್ ಆಫ್ ಹಾಸ್ಪಿಟಲ್ಸ್ ಅಧ್ಯಕ್ಷ ಡಾ.ಎಚ್. ಸುದರ್ಶನ ಬಲ್ಲಾಳ್ ಇವರಿಗೆ ಶನಿವಾರ ಸಿ.ಎಂ. ಸಿದ್ದರಾಮಯ್ಯ ಸಮ್ಮುಖದಲ್ಲಿ ಹಾಗೂ ಖ್ಯಾತ ಸಿನಿಮಾ ನಿರ್ದೇಶಕ ಯೋಗರಾಜ್ ಭಟ್ ಇವರಿಗೆ ಭಾನುವಾರ ಡಿಸಿಎಂ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ‘ಊರ ಗೌರವ’ ಎನ್ನುವ ವಿಶೇಷ ಪುರಸ್ಕಾರ ನೆರವೇರಲಿದೆ.
ಎರಡು ದಿನಗಳ ಈ ಸಮಾರಂಭದಲ್ಲಿ ನಟರಾದ ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಪ್ರವೀರ್ ಶೆಟ್ಟಿ, ಶೈನ್ ಶೆಟ್ಟಿ, ಸಂಗೀತ ನಿರ್ದೇಶಕ ರವಿ ಬಸ್ರೂರು, ನಟಿ ರಕ್ಷಿತಾ ಪ್ರೇಮ್ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರೂ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಇದು ಕುಂದಾಪ್ರ ಕನ್ನಡ ಹಬ್ಬವಾದರೂ ಸಮಸ್ತ ಕನ್ನಡಿಗರ ಸಂಭ್ರಮ, ಇದು ಪ್ರವೇಶ ಉಚಿತವಾಗಿರುವ ಸಮಾರಂಭವಾಗಿದ್ದು, ಎಲ್ಲರಿಗೂ ಮುಕ್ತ ಆಹ್ವಾನ ಇರಲಿದೆ.
ಎರಡು ದಿನಗಳಲ್ಲಿ 400ಕ್ಕೂ ಹೆಚ್ಚು ಕಲಾವಿದರು ವಿವಿಧ ಸಾಂಸ್ಕೃತಿಕ ಹಾಗೂ ಮನರಂಜನೆ ಕಾರ್ಯಕ್ರಮಗಳನ್ನು ನೀಡಲಿದ್ದಾರೆ. ‘ಅಟ್ಟಣಿಗೆ ಆಟ’ ಎನ್ನುವ ವಿಶೇಷ ಯಕ್ಷಗಾನ ಪ್ರದರ್ಶನ ಇರಲಿದ್ದು, ಕುಂದಾಪುರದ ಅಪರೂಪದ ವಿಶೇಷದ ಖಾದ್ಯಗಳ ಆಹಾರ ಮೇಳ, ಕುಂದಾಪುರದ್ದೇ ಆದ ವಿಶೇಷ ವಸ್ತುಗಳು ಸಿಗುವ ಕುಂದಾಪುರ ಸಂತೆ ಕೂಡ ಇರಲಿದೆ.
ಕುಂದಾಪ್ರ ಕನ್ನಡ ಹಬ್ಬ-2025ರ ವಿಶೇಷ ಕಾರ್ಯಕ್ರಮಗಳು 26 ಜುಲೈ 2025ರ ಶನಿವಾರ, ಬೆಳಗ್ಗೆ 9.30ರಿಂದ
1. ಸಾವ್ರ್ ಹಣ್ಣಿನ ವಸಂತ
2. ಹೌಂದರಾಯನ ವಾಲ್ಗ
3. ಕುಂದಾಪ್ರದಡುಗೆ: ವಿಶೇಷ ತಿಂಡಿ-ತಿನಿಸು, ಭಕ್ಷ್ಯ ಭೋಜನ ಒಳಗೊಂಡ ಆಹಾರ ಮೇಳ
4. ಮೂಕಜ್ಜಿಯ ಕನಸುಗಳು: ಪುಸ್ತಕ ಮೇಳ
5. ಸ್ವರ ಕುಂದಾಪ್ರ: ಸಂಗೀತ ಕಾರ್ಯಕ್ರಮ
6. ಪಟ್ಟಾಂಗ: ಕುಂದಾಪುರ ನೆಲಮೂಲದ ಆಚರಣೆ-ಆರಾಧನೆ, ಕಟ್ಟು-ಕಟ್ಟಳೆ ಕುರಿತ ಚರ್ಚೆ
7. ಬಾರ್ಕೂರಿನ್ ಹಡ್ಗ್: ವಿಶೇಷ ನೃತ್ಯರೂಪಕ
8. ನೂಪುರ ಸಂಚಾರ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಪ್ರಸ್ತುತಿ ಪಡಿಸುವ ಸಾಂಸ್ಕೃತಿ ಕಾರ್ಯಕ್ರಮ
9. ಅಟ್ಟಣಿಗೆ ಆಟ: ಎರಡು ವೇದಿಕೆಯಲ್ಲಿ ನಡೆಯುವ ವಿಶೇಷ ಯಕ್ಷಗಾನ, ಪ್ರಸಂಗ-ದಕ್ಷಯಜ್ಱ.
10. ವಿಶೇಷ ಅಭಿನಂದನೆ: ಆರೈಕೆ ನಿರಾಶ್ರಿತರ ಆಶ್ರಮ, ಬೆಂಗಳೂರು
ದಿನಾಂಕ 27 ಜುಲೈ 2025ರ ಭಾನುವಾರ, ಬೆಳಗ್ಗೆ 9.30ರಿಂದ ಆರಂಭ.
1. ಪಿಳ್ಳಂಗೋವಿಯ ಚೆಲುವ ಕೃಷ್ಣನಾ: ಡಾ.ವಿದ್ಯಾಭೂಷಣರ ಗಾನಯಾನದ ಸುವರ್ಣ ಸಂಭ್ರಮ.
2. ಬಾಲಗೋಪಾಲ: ಮಕ್ಕಳ ಮಹಾಸಂಗಮದ ಯಕ್ಷನೃತ್ಯ
3. ಹಂದಾಡಿ ಕ್ವಿಜ್: ಮನು ಹಂದಾಡಿ ನಡೆಸಿಕೊಡುವ ಕುಂದಾಪ್ರ ಕನ್ನಡದ ರಸಪ್ರಶ್ನೆ ಕಾರ್ಯಕ್ರಮ.
4. ಚಂದಾಮುಡಿ: ಕುಂದಾಪ್ರದ ಸುಂದರ-ಸುಂದರಿಯರ ಫ್ಯಾಷನ್ ಶೋ.
5. ಕಾಳಿಂಗ-ಕಾಳಿಂಗ: ಕಾಳಿಂಗ ನಾವಡ ಮತ್ತು ಪಿ. ಕಾಳಿಂಗರಾಯರ ಪದ-ಪದ್ಯಗಳ ಅನುರಣನ.
6. ರಘು ದೀಕ್ಷಿತ್ ಲೈವ್ ಕನ್ಸರ್ಟ್.
7. ವಿಶೇಷ ಅಭಿನಂದನೆ: ಕ್ಲೀನ್ ಕುಂದಾಪುರ, ಸೇವ್ ಅವರ್ ಓಷನ್.
ಎರಡೂ ದಿವಸ ದಿನವಿಡೀ ಹೊರಾಂಗಣದ ಕಾರ್ಯಕ್ರಮಗಳು ಇರುತ್ತವೆ. ಹುಲಿ ಕುಣಿತ, ಕೊರಗರ ಡೋಲುವಾದನ, ಹೋಳಿ ಕುಣಿತ, ಬ್ಯಾಂಡ್ ಸೆಟ್, ಬಿಡಿ ಪಟಾಕಿ, ಕುಂದಾಪುರದ ವಿಶೇಷ ವಸ್ತುಗಳು ಸಿಗುವ ಕುಂದಾಪ್ರ ಸಂತೆ ಹಾಗೂ ಕುಂದಾಪುರದ ಡಿಜಿಟಲ್ ಟೂರ್ ‘ಇಲ್ಕಾಣಿ ಕುಂದಾಪ್ರ’ ಇರಲಿವೆ.