ಉಡುಪಿ : ವಿಶ್ವ ಭಾರತ ಕರ್ನಾಟಕ ಪ್ರತಿಷ್ಠಾನ ಬೆನಗಲ್ ಪ್ರಾಯೋಜಿತ ಕವಿ ಕುರಾಡಿ ಸೀತಾರಾಮ ಅಡಿಗರ ನೆನಪಿನ ‘ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ’ಗಾಗಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ಸಂಸ್ಥೆಯು 2024ರಲ್ಲಿ ಮೊದಲ ಆವೃತ್ತಿಯಲ್ಲಿ ಪ್ರಕಟಣೆಗೊಂಡ ಕವನ ಸಂಕಲನಗಳನ್ನು ಆಹ್ವಾನಿಸಿತ್ತು.
ಈ ಪ್ರಶಸ್ತಿಗೆ ಬೆಂಗಳೂರಿನ ಶಶಿ ತರೀಕೆರೆಯವರ ‘ಪ್ಯೂಪಾ’ ಕವನ ಸಂಕಲನ ಆಯ್ಕೆಯಾಗಿರುತ್ತದೆ ಎಂದು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕರಾದ ರವಿರಾಜ್ ಎಚ್. ಪಿ. ತಿಳಿಸಿದರು. ಪ್ರಶಸ್ತಿಗೆ 88 ಕೃತಿಗಳು ಬಂದಿದ್ದು, ಕನ್ನಡ ಸಾಹಿತ್ಯ ಲೋಕದ ಹಿರಿಯ ಪ್ರಸಿದ್ಧ ಸಂಸ್ಕೃತಿ ಚಿಂತಕರೂ,ಲೇಖಕರು ಆದ ಬೆಂಗಳೂರಿನ ಶೂದ್ರ ಶ್ರೀನಿವಾಸ್ ಮತ್ತು ಪ್ರಸಿದ್ಧ ವಿಮರ್ಶಕರಾದ ಪ್ರೊ. ಎಚ್. ದಂಡಪ್ಪ ಅವರು ತೀರ್ಪುಗಾರರಾಗಿ ಸಹಕರಿಸಿದ್ದರು.
ಪ್ರಶಸ್ತಿಯು ರೂಪಾಯಿ 10,000 ಗೌರವ ನಗದಿನೊಂದಿಗೆ ಪ್ರಶಸ್ತಿಪತ್ರ ಹಾಗೂ ಫಲಕವನ್ನು ಒಳಗೊಂಡಿರುತ್ತದೆ. ನವೆಂಬರ್ ತಿಂಗಳಲ್ಲಿ ಪ್ರಶಸ್ತಿ ಪ್ರದಾನ ನಡೆಸಲಾಗುವುದು ಎಂದು ಪ್ರಶಸ್ತಿ ಸಮಿತಿಯ ಸಂಚಾಲಕಿ ಪೂರ್ಣಿಮಾ ಜನಾರ್ದನ್ ತಿಳಿಸಿರುತ್ತಾರೆ.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಉಡುಪಿ ವಿಶ್ವ ನಾಥ ಶೆಣೆೈ, ವಿಶ್ವ ಭಾರತ ಕರ್ನಾಟಕ ಪ್ರತಿಷ್ಠಾನದ ನಿರ್ದೇಶಕರಾದ ನಾರಾಯಣ ಮಡಿ ಹಾಗು ಕವಿತಾ ಎನ್ ಮಡಿ ಉಪಸ್ಥಿತರಿದ್ದರು.