ಕಾರ್ಕಳ : ಕಾರ್ಕಳದ ಕೋಟಿ ಚೆನ್ನಯ್ಯ ಥೀಂ ಪಾರ್ಕ್ ಆವರಣದಲ್ಲಿ ದಿನಾಂಕ 12 ಅಕ್ಟೋಬರ್ 2025ರಂದು ಕಾರ್ಕಳ ಯಕ್ಷ ರಂಗಾಯಣ ಮತ್ತು ಉಡುಪಿ ಜಿಲ್ಲೆಯ ಡಾ. ಶಿವರಾಮ ಕಾರಂತ ಟ್ರಸ್ಟಿನ ಸಹಯೋಗದಲ್ಲಿ ಡಾ. ಶಿವರಾಮ ಕಾರಂತರ ಜನ್ಮ ದಿನಾಚರಣೆ ಪ್ರಯುಕ್ತ ಕಾರಂತ ಉಪನ್ಯಾಸ ಮತ್ತು ಕಾರಂತ ರಂಗಪ್ರದರ್ಶನ ಕಾರ್ಯಕ್ರಮವು ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದ ಖ್ಯಾತ ವಿಮರ್ಶಕ ಡಾ. ಎಸ್.ಆರ್. ವಿಜಯಶಂಕರ್ “ಡಾ. ಶಿವರಾಮ ಕಾರಂತರು ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ದಾರಿ. ಬುದ್ಧ ಮತ್ತು ಗಾಂಧೀಜಿಯಂತೆ ಪ್ರಯೋಗಗಳ ಮೂಲಕ ಕಲಿತು ವ್ಯಕ್ತಿತ್ವವನ್ನು ರೂಪಿಸಿಕೊಂಡವರು ಕಾರಂತರು. ಯುವ ಜನರ ವ್ಯಕ್ತಿತ್ವ ಬೆಳವಣಿಗೆಗೆ ಕಾರಂತರ ದಾರಿ ಮಾದರಿಯಾಗಿದೆ ಎಂದು ಹೇಳಿ ಕಾರಂತರ ಒಡನಾಟದ ತಮ್ಮ ಅನುಭವವನ್ನು ವಿವರಿಸಿದರು.
ಆಶಯ ಮಾತನಾಡಿದ ಟ್ರಸ್ಟಿನ ಅಧ್ಯಕ್ಷ ಡಾ. ಗಣನಾಥ ಶೆಟ್ಟಿ ಎಕ್ಕಾರು ಟ್ರಸ್ಟಿನ ಉದ್ದೇಶಗಳನ್ನು ವಿವರಿಸಿದರು. ರಂಗಾಯಣದ ನಿರ್ದೇಶಕ ವೆಂಕಟರಮಣ ಐತಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಚರ್ಚೆ ಕಾರ್ಯಕ್ರಮ ನಡೆಯಿತು. ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಕೋಟ್ಯಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಸೌಮ್ಯ ನಿರೂಪಿಸಿ, ಚಂದ್ರನಾಥ್ ಬಜೆಗೋಳಿ ಸ್ವಾಗತಿಸಿ, ವಂದಿಸಿದರು. ಬಳಿಕ ನಿರ್ದಿಂಗತ ತಂಡದ ಕಾರಂತರ ಕಾದಂಬರಿ ಆಧಾರಿತ ‘ಮೈಮನಗಳ ಸುಳಿಯಲ್ಲಿ’ ನಾಟಕ ಪ್ರದರ್ಶನ ನಡೆಯಿತು.