ಕಾಸರಗೋಡು : ಕೇರಳ ರಾಜ್ಯ-ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ, ದಕ್ಷಿಣ ಕನ್ನಡ ಜಿಲ್ಲಾ ಘಟಕ ಮತ್ತು ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಸಂಯುಕ್ತ ಆಶ್ರಯದಲ್ಲಿ ‘ಮನೆ ಮನೆ -ಕನ್ನಡ ಜಾಗೃತಿ ಅಭಿಯಾನ’ದ ದ್ವಿತೀಯ ಕಾರ್ಯಕ್ರಮವು ದಿನಾಂಕ 27 ಜುಲೈ 2025ರಂದು ದ.ಕ. ಜಿಲ್ಲಾ ಅಧ್ಯಕ್ಷರಾದ ಸಾಹಿತಿ ಡಾ. ಗೋವಿಂದ ಭಟ್ ಕೊಳ್ಚಪ್ಪೆ ಇವರ ಮಂಗಳೂರಿನ ನಿವಾಸದಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಕನ್ನಡ ಭವನ ಮತ್ತು ಕೇರಳ ರಾಜ್ಯ-ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಸ್ಥಾಪಕ ಸಂಚಾಲಕರಾದ ಡಾ. ವಾಮನ್ ರಾವ್ ಬೇಕಲ್ ಇವರು ಮಾತನಾಡಿ “ಕನ್ನಡ ಭಾಷೆ, ಸಾಹಿತ್ಯ, ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕನ್ನಡದ ಕಟ್ಟಾಳುಗಳನ್ನು ಪರಸ್ಪರ ಜೋಡಿಸುವುದೇ ‘ಮನೆ ಮನೆ -ಕನ್ನಡ ಜಾಗೃತಿ ಅಭಿಯಾನ’ದ ಪ್ರಧಾನ ಉದ್ದೇಶ. ಕನ್ನಡ ಮನಸುಗಳು ಒಂದಾಗಬೇಕು. ಕನ್ನಡ ಪ್ರಜ್ಞೆ ಹೊಸ ತಲೆಮಾರಿನಲ್ಲಿ ಬೇರೂರಿಸುವ ಪ್ರಯತ್ನಕ್ಕೆ, ಕವಿಗಳು, ಸಾಹಿತಿಗಳು, ಕಲಾವಿದರು, ಸಂಘಟಕರು ಒಂದಾಗಿ ಸೇರಿ ಚರ್ಚಿಸುವ ವೇದಿಕೆ ನಿರ್ಮಾಣವಾಗಬೇಕು. ಹೊಸ ಹೊಸ ಯೋಚನೆ-ಯೋಜನೆಗಳ ಮೂಲಕ ಒಟ್ಟಾಗಿ ಕನ್ನಡ ಉಳಿಸುವ, ಬೆಳೆಸುವ ಪ್ರಯತ್ನಕ್ಕೆ ಪ್ರತಿಜ್ಞಾಬದ್ಧರಾಗಬೇಕು” ಎಂದು ಹೇಳಿದರು.
ಸಾಹಿತಿ ಪ್ರಕಾಶಕ ಕಲ್ಲಚ್ಚು ಮಹೇಶ್ ಆರ್. ನಾಯಕ್ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮ ಸಂಯೋಜಕರಾದ ಡಾ. ಕೊಳ್ಚಪ್ಪೆ ಗೋವಿಂದ ಭಟ್ ಸ್ವಾಗತಿಸಿ, ಡಾ. ಶಾಂತಾ ಪುತ್ತೂರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಸಾಹಿತಿ, ಡಾ. ವಸಂತ್ ಕುಮಾರ್ ಪೆರ್ಲ, ಕಥಾಬಿಂದು ಪ್ರಕಾಶನದ ರೂವಾರಿ ಪಿ.ವಿ. ಪ್ರದೀಪ್ ಕುಮಾರ್, ಪತ್ರಕರ್ತ, ಸಾಹಿತಿ ಜಯಾನಂದ ಪೆರಾಜೆ, ಸಾಹಿತಿ ವೈದ್ಯ ಡಾ. ಸುರೇಶ್ ನೆಗಳಗುಳಿ ಸಮಾಯೋಚಿತವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಕ್ಕೆ ಬಾಜನರಾದ ಶ್ರೀ ಬಿ.ಕೆ. ಮಾದವ ರಾವ್, ‘ಸೊಗಸು’ ಪುಸ್ತಕ ಬಹುಮಾನಕ್ಕೆ ಭಾಜನರಾದ ಶ್ರೀ ಪಿ.ವಿ. ಪ್ರದೀಪ್ ಕುಮಾರ್ ಹಾಗೂ ಇತ್ತೀಚಿಗೆ ಆಕಾಶವಾಣಿಯಿಂದ ನಿವೃತ್ತಿ ಹೊಂದಿದ ಡೆಪ್ಯೂಟಿ ಡೈರೆಕ್ಟರ್ ಶ್ರೀ ಪಿ. ಸೂರ್ಯನಾರಾಯಣ್ ಭಟ್ ಇವರಿಗೆ ಪರಿಷತ್ತಿನ ‘ದಕ್ಷಿಣ ಕನ್ನಡ ಜಿಲ್ಲಾ ಸಾಧಕ ಶ್ರೀ ಪ್ರಶಸ್ತಿ 2025’ ನೀಡಿ ಗೌರವಿಸಲಾಯಿತು. ಹಿರಿಯ ಸಾಹಿತಿ ಶ್ರೀಮತಿ ಬಿ. ಸತ್ಯವತಿ ಭಟ್ ಕೊಳಚಪ್ಪು ವಂದನಾರ್ಪಣೆ ಸಲ್ಲಿಸಿದರು.
ಕಾರ್ಯಕ್ರಮದಂಗವಾಗಿ ಆಯೋಜಿಸಿದ್ದ ಚುಟುಕು ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ ವೈದ್ಯ ಡಾ. ಸುರೇಶ್ ನೆಗಳಗುಳಿ ವಹಿಸಿದರು. ಕವಿಗೋಷ್ಠಿಯಲ್ಲಿ ಸತ್ಯವತಿ ಭಟ್ ಕೊಳಚಪ್ಪು, ಲಕ್ಷ್ಮೀ ವಿ. ಭಟ್, ಉಮೇಶ್ ಕಾರಂತ್, ಅಕೃತಿ ಭಟ್, ಅನಿತಾ ಶೆಣೈ, ಸೌಮ್ಯ ಅಂಗ್ರಾಜೆ, ಸುಲೋಚನಾ ನವೀನ್, ಪ್ರತಿಭಾ ಸಾಲಿಯಾನ್, ಮನ್ಸೂರ್ ಮೂಲ್ಕಿ, ಕಸ್ತೂರಿ ಜಯರಾಮ್, ಅಪೂರ್ವ ಕಾರಂತ್ ಪುತ್ತೂರು, ಡಾ. ಶಾಂತಾ ಪುತ್ತೂರು, ಜಯಾನಂದ ಪೆರಾಜೆ ಭಾಗವಹಿಸಿದರು. ಕವಿತೆ ವಾಚನ ಮಾಡಿದ ಕವಿಗಳಿಗೆ ಶಾಲು, ಸ್ಮರಣಿಕೆ, ಪುಸ್ತಕ, ಪ್ರಮಾಣಪತ್ರ ನೀಡಲಾಯಿತು. ಅಧ್ಯಕ್ಷತೆ ವಹಿಸಿದ ಸಾಹಿತಿ ಡಾ. ಸುರೇಶ್ ನೆಗಳಗುಳಿಯವರಿಗೆ ಕೇಂದ್ರ ಸಮಿತಿ ವತಿಯಿಂದ ಡಾ. ವಾಮನ್ ರಾವ್ -ಸಂದ್ಯಾ ರಾಣಿ ದಂಪತಿ ವಿಶೇಷ ಗೌರವರ್ಪಣೆ ನೀಡಿ ಸನ್ಮಾನಿಸಿದರು.
ಶ್ರೀಮತಿ ಸುಲೋಚನಾ ನವೀನ್ ಪ್ರಾರ್ಥನೆ ಹಾಡಿದರು. ಪರಿಷತ್ತು ಜಿಲ್ಲಾ ಕಾರ್ಯದರ್ಶಿ ಕು. ಅಪೂರ್ವ ಕಾರಂತ್ ಪುತ್ತೂರು ಮತ್ತು ಶೀಮತಿ ಕಸ್ತೂರಿ ಜಯರಾಮ್ ಕಾರ್ಯಕ್ರಮ ನಿರೂಪಿಸಿದರು. ಪ್ರಸಿದ್ಧ ಗಾಯಕಿ ಪ್ರತಿಭಾ ಸಾಲ್ಯಾನ್, ಅನಿತಾ ಶೆಣೈ, ಗ್ರೇಗೋರಿ ತಂಡ ಗಾಯನ ಮನರಂಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಇದೇ ವೇಳೆ ಮುಂದಿನ ‘ಮನೆ ಮನೆ ಕನ್ನಡ ಜಾಗೃತಿ ಅಭಿಯಾನ’ ದಿನಾಂಕ 09 ಆಗಸ್ಟ್ 2025ರಂದು ಪರಿಷತ್ತು ಗೌರವ ಅಧ್ಯಕ್ಷೆ ಶ್ರಿಮತಿ ಬಿ. ಸತ್ಯವತಿ ಭಟ್ ಕೊಳಚಪ್ಪು ಇವರ ನಿವಾಸದಲ್ಲಿ ಎಂದು ನಿಶ್ಚಯಿಸಲಾಯಿತು.