ಬೆಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ವತಿಯಿಂದ ‘ಮೂಡಲಪಾಯ ಯಕ್ಷೋತ್ಸವ’ ಕಾರ್ಯಕ್ರಮವನ್ನು ದಿನಾಂಕ 24 ಮತ್ತು 25 ಜೂನ್ 2025ರಂದು ಬೆಳಿಗ್ಗೆ 10-00 ಗಂಟೆಗೆ ಬೆಂಗಳೂರಿನ ನಯನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 24 ಜೂನ್ 2025ರಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಾಲ್ಲೂರು ಶಿವರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾನ್ಯ ನಿರ್ದೇಶಕರಾದ ಶ್ರೀಮತಿ ಕೆ.ಎಂ. ಗಾಯತ್ರಿ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಮೈಸೂರಿನ ಶ್ರೀ ಹೇಮಾಂಭಿಕಾ ಯಕ್ಷಗಾನ ಕಲಾ ಸಂಘ (ರಿ.) ಇವರಿಂದ ‘ಅಂಗಧ ಸಂಧಾನ’ ಮೂಡಲಪಾಯ ತಾಳಮೇಳ ಪ್ರಸ್ತುತಗೊಳ್ಳಲಿದೆ. ಮಧ್ಯಾಹ್ನ 12-00 ಗಂಟೆಗೆ ‘ಮೂಡಲಪಾಯ ಕೇಳಿಕೆ, ಘಟ್ಟದಕೋಣೆ, ಬೊಂಬೆಯಾಟದ ಪಾತ್ರಗಳ ವೈಶಿಷ್ಟ್ಯ’ ಕುರಿತು ವಿಚಾರ ಸಂಕಿರಣ ನಡೆಯಲಿದೆ. ಬಳಿಕ ಬೆಂಗಳೂರಿನ ಡಾ. ದತ್ತಾತ್ರೇಯ ಅರಳಿಕಟ್ಟೆ ಇವರಿಂದ ‘ಕುಮಾರ ಸಂಭವ’ ಮೂಡಲಪಾಯ ಬೊಂಬೆಯಾಟ ಪ್ರದರ್ಶನಗೊಳ್ಳಲಿದೆ.
ದಿನಾಂಕ 25 ಜೂನ್ 2025ರಂದು ‘ಮೂಡಲಪಾಯ ಯಕ್ಷಗಾನದ ಇತ್ತೀಚಿನ ಸ್ಥಿತ್ಯಂಥರಗಳು’ ಎಂಬ ವಿಷಯದ ಕುರಿತು ವಿಚಾರ ಸಂಕಿರಣ ನಡೆಯಲಿದೆ. ಮಧ್ಯಾಹ್ನ 12-00 ಗಂಟೆಗೆ ತುಮಕೂರು ಅರಳಗುಪ್ಪೆಯ ಸೋಮಶೇಖರ್ ಮತ್ತು ತಂಡದವರಿಂದ ‘ತ್ರಿಪುರ ಸಂಹಾರ’ ಮೂಡಲಪಾಯ ಯಕ್ಷಗಾನ ಪ್ರದರ್ಶನ ಹಾಗೂ 2-30 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.