ಮಣಿಪಾಲ : ರೇಡಿಯೊ ಮಣಿಪಾಲ್ 90.4 MHz, ಸಮುದಾಯ ಬಾನುಲಿ ಕೇಂದ್ರ, ಮಣಿಪಾಲ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಹಯೋಗದೊಂದಿಗೆ ‘ವಿಷುಕಣಿ-ಕವಿದನಿ’ ಬಹುಭಾಷಾ ಕವಿಗೋಷ್ಠಿ ದಿನಾಂಕ 10 ಏಪ್ರಿಲ್ 2025ರಂದು ಮಣಿಪಾಲದ ರೇಡಿಯೊ ಮಣಿಪಾಲ್ ಎಂ.ಐ.ಸಿ. ಕ್ಯಾಂಪಸ್ನಲ್ಲಿ ನಡೆಯಿತು.
ಸಭಾ ಕ್ರಾಯಕ್ರಮದ ಉದ್ಘಾಟನೆಯನ್ನು ಮಣಿಪಾಲ್ ಇನ್ಸಿಟ್ಯೂಟ್ ಆಫ್ ಕಮ್ಯುನಿಕೇಶನ್ ಮಾಹೆ ಮಣಿಪಾಲ ಇದರ ನಿರ್ದೇಶಕರಾದ ಡಾ. ಶುಭ ಹೆಚ್.ಎಸ್. ಇವರು ನೆರವೇರಿಸಿ ಮಾತನಾಡಿ, “ಕವನಗಳಿಗೆ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ಅವಕಾಶವಿದೆ, ಹೀಗಾಗಿ ಕವಿತೆಗಳಿಗೆ ವಿಮರ್ಶೆಯ ಅವಶ್ಯಕತೆ ಎದುರಾಗುವುದಿಲ್ಲ, ಯುಗಾದಿ ಹಬ್ಬದ ಕುರಿತು ನಮ್ಮಲ್ಲಿರುವ ಸಂಸ್ಕೃತಿ ಆಚಾರಗಳನ್ನು ಕವನಗಳ ಮೂಲಕ ಪ್ರಚುರಪಡಿಸುವ ಈ ಅಪೂರ್ವ ಅವಕಾಶ ಸಿಕ್ಕಿರುವುದು ಎಲ್ಲರಿಗೂ ಅಭಿನಂದನೀಯ ವಿಚಾರ” ಎಂದರು.
ಸಭಾಧ್ಯಕ್ಷತೆಯನ್ನು ಭಾಷಾ ತಜ್ಞ ನಾಡೋಜ ಪ್ರೊ. ಕೆ.ಪಿ. ರಾವ್ ವಹಿಸಿ ಮಾತನಾಡಿ “ಭಾಷೆಗಳನ್ನು ಉಳಿಸಿ ಬೆಳೆಸಬೇಕು. ಇಲ್ಲವಾದಲ್ಲಿ ಭಾಷೆಯೊಂದಿಗೆ ಅದರ ಅಪೂರ್ವ ಸಂಸ್ಕೃತಿ ಕೂಡ ಅವನತಿಯಾಗುವ ಸಂಭವವಿರುತ್ತದೆ. ನಮ್ಮ ದೇಶದಲ್ಲಿರುವ ಹಲವಾರು ಭಾಷೆಗಳು ಅವನತಿಯ ಹಾದಿಯಲ್ಲಿರುವುದು ದುಃಖದ ವಿಷಯ” ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಪೂರ್ಣಿಮಾ “ಸಮುದಾಯ ಬಾನುಲಿ, ರೇಡಿಯೊ ಮಣಿಪಾಲ್ ಮತ್ತು ಉಡುಪಿ ಜಿಲ್ಲಾ ಕ.ಸಾ.ಪ. ಉಡುಪಿ ತಾಲೂಕು ಈ ರೀತಿಯ ವಿನೂತನ ಕಾರ್ಯಕ್ರಮಗಳ ಮೂಲಕ ರಾಜ್ಯದಲ್ಲಿ ಮಾದರಿಯಾಗಿದೆ” ಎಂದರು.
ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ರವಿರಾಜ್ ಎಚ್.ಪಿ. ಉಪಸ್ಥಿತರಿದ್ದರು. ಕ.ಸಾ.ಪ. ಜಿಲ್ಲಾ ಮಾಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ್ ಶುಭ ಹಾರೈಸಿದರು. ಕವಿಗೋಷ್ಠಿಯ ಸಮನ್ವಯಕಾರರಾಗಿ ಸಾಹಿತಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಭಾಗವಹಿಸಿ ಕವನಗಳು ಹುಟ್ಟುವ ಬಗ್ಗೆ ಅದೇ ರೀತಿ ಕವನಗಳನ್ನು ಮತ್ತಷ್ಟು ಆಕರ್ಷಕವಾಗಿ ಬರೆಯುವ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಕವಿಗಳಾದ ಕವಿತಾ ಎಸ್. ಮಣಿಪಾಲ (ಹವ್ಯಕ ಕನ್ನಡ), ವೈಷ್ಣವಿ ಸುಧೀಂದ್ರ ರಾವ್ (ಕುಂದಾಪ್ರ ಕನ್ನಡ), ರಾಮಾಂಜಿ ಉಡುಪಿ (ಕನ್ನಡ), ಮಾಲತಿ ರಮೇಶ್ ಭಂಡಾರಿ ಕೆಮ್ಮಣ್ಣು (ತುಳು), ಕೆ. ವಾಣಿಶ್ರೀ ಅಶೋಕ್ ಐತಾಳ್ (ತೆಲುಗು), ಪ್ರಣತಿ ಪಿ. ಭಟ್ ಮಣಿಪಾಲ (ಹಿಂದಿ), ವಿನೋದ ಪಡುಬಿದ್ರಿ (ತುಳು), ವಿಜಯಲಕ್ಷ್ಮೀ ಆರ್. ಕಾಮತ್ (ಕೊಂಕಣಿ), ಮನೋಹರ ಶೆಟ್ಟಿ ಬಿದ್ಕಲ್ಕಟ್ಟೆ (ತುಳು), ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ (ಮಲಯಾಳಂ), ವಸುಧಾ ಅಡಿಗ ನೀಲಾವರ (ಕನ್ನಡ), ಲಲಿತ ಪ್ರದೀಪ್ ಭಟ್ (ಕನ್ನಡ) ಮಂಜುನಾಥ ಮರವ೦ತೆ (ಕುಂದಾಪ್ರ ಕನ್ನಡ), ಸುಲೋಚನ ಪಚ್ಚಿನಡ್ಕ (ತುಳು), ನೀಮಾ ಲೋಬೊ ಶಂಕರಪುರ (ಕೊಂಕಣಿ), ಪುಂಡಲೀಕ ನಾಯಕ್ ಬೈಂದೂರು ಇವರೆಲ್ಲರು ಸ್ವರಚಿತ ಕವನ ವಾಚಿಸಿದರು.
ಕ.ಸಾ.ಪ. ತಾಲೂಕು ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು ಸ್ವಾಗತಿಸಿ, ರೇಡಿಯೊ ಮಣಿ ಪಾಲ್ ಇದರ ಸಹಾಯಕ ಪ್ರಾಧ್ಯಾಪಕರು ಮತ್ತು ಸಂಯೋಜಕರಾದ ಡಾ. ಅಮ್ಮೆಂಬಳ ಇವರು ಪ್ರಸ್ತಾಪಿಸಿದರು. ಕ.ಸಾ.ಪ. ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲ್ ವಂದಿಸಿದರು. ಸುಲೋಚನಾ ಪಚ್ಚಿನಡ್ಕ ಹಾಗೂ ವಸುಧಾ ಅಡಿಗ ನೀಲಾವರ ನಿರೂಪಿಸಿದರು.