ಪುತ್ತೂರು: ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ನೇತೃತ್ವದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ಸಹಕಾರದಲ್ಲಿ, ಪ್ರಗತಿ ಸ್ಟಡಿ ಸೆಂಟರ್ ಪುತ್ತೂರು ಇದರ ಆಶ್ರಯದಲ್ಲಿ, ದಿ. ಚಿದಾನಂದ ಕಾಮತ್ ಕಾಸರಗೋಡು ಇವರ ಸ್ಮರಣಾರ್ಥ ‘ಮುಂಗಾರು ಕವಿಗೋಷ್ಠಿ -2025’ ಕಾರ್ಯಕ್ರಮವು 13 ಜುಲೈ 2025ರಂದು ಪ್ರಗತಿ ಸ್ಟಡಿ ಸೆಂಟರ್ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ರುದ್ರಾಕ್ಷಿ ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿದ ಪ್ರಗತಿ ಎಜುಕೇಶನಲ್ ಫೌಂಡೇಶನ್ (ರಿ.) ಪುತ್ತೂರು ಇದರ ಸ್ಥಾಪಕಾಧ್ಯಕ್ಷರಾದ ಗೋಕುಲ್ ನಾಥ್ ಪಿ. ವಿ. ಮಾತನಾಡಿ “ದಿ. ಚಿದಾನಂದ ಕಾಮತ್ ಇವರು ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಅವರ ಸ್ಮರಣಾರ್ಥವಾಗಿ ಕಾರ್ಯಕ್ರಮ ಆಯೋಜಿಸಿ ಹೊಸ ಕವಿಗಳಿಗೆ ವೇದಿಕೆಯನ್ನು ಕಲ್ಪಿಸಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ಸಾಹಿತ್ಯದ ಬಗ್ಗೆ ಇನ್ನಷ್ಟು ಒಲವು ತೋರಿಸಿ ಭಾಷಾ ವೈವಿಧ್ಯತೆಯನ್ನು ಹೆಚ್ಚಿಸಬೇಕು” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಘಟಕದ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಮಾತನಾಡಿ “ಚಿಗುರೆಲೆ ಸಾಹಿತ್ಯ ಬಳಗ ಹಾಗೂ ಕ. ಸಾ. ಪ ಸಹಯೋಗದಲ್ಲಿ ಈಗಾಗಲೇ ಹಲವು ಗ್ರಾಮ ಮಟ್ಟದಲ್ಲೇ ಸಾಹಿತ್ಯ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಿದ್ದು, ನೂರಾರು ಕವಿಗಳಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ” ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪುತ್ತೂರು ಸುದ್ದಿ ಚಾನೆಲ್ ಇದರ ನಿರೂಪಕಿ ಹೇಮಾ ಜಯರಾಮ್ ಮಾತನಾಡಿ “ನಮ್ಮ ಚಿಂತನೆಗಳು ಸದಾ ಧನಾತ್ಮಕವಾಗಿರಬೇಕು. ಮಹಿಳೆಯರು ಭಾವಜೀವಿಗಳು ಅದರಿಂದ ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿರುವುದು ಸಂತಸದ ಸಂಗತಿ. ಪೋಷಕರು ಮಕ್ಕಳ ಮೊಬೈಲ್ ಬಳಕೆಯ ಮೇಲೆ ನಿಗಾ ವಹಿಸಿಕೊಳ್ಳಬೇಕು” ಎಂದು ಹೇಳಿದರು.
ಕಲ್ಲಚ್ಚು ಪ್ರಕಾಶನ ಮಂಗಳೂರು ಇದರ ಪ್ರಕಾಶಕ ಮಹೇಶ್ ಆರ್. ನಾಯಕ್ ಮಾತನಾಡಿ “ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಪುಸ್ತಕ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಓದುವುದರಿಂದ ಭಾಷಾ ಬೆಳೆವಣಿಗೆಗೆ ಅದು ಸಹಕಾರಿಯಾಗಲಿದೆ” ಎಂದು ತಿಳಿಸಿದರು.
‘ವಾರ್ತಾ ಭಾರತಿ’ ಕನ್ನಡ ದಿನ ಪತ್ರಿಕೆಯ ಬೆಂಗಳೂರು ವರದಿಗಾರ ಇಬ್ರಾಹಿಂ ಖಲೀಲ್ ಬನ್ನೂರು ಮಾತನಾಡಿ “ಕವಿಗಳು ಸೂಕ್ಷ್ಮಗ್ರಹಿಕೆಯುಳ್ಳವರು, ಸಾಮಾಜಿಕ ಸಮಸ್ಯೆಗಳ ಬಗ್ಗೆ ವಿಮರ್ಶಿಸಬೇಕು. ಶೋಷಿತರ ಪರವಾಗಿ ಕವಿತೆಗಳು ಧ್ವನಿಯಾಗಬೇಕು” ಎಂದು ಯುವ ಕವಿಗಳಿಗೆ ಕಿವಿಮಾತು ಹೇಳಿದರು.
ವೇದಿಕೆಯಲ್ಲಿ ಪ್ರಗತಿ ಸ್ಟಡಿ ಸೆಂಟರ್ ಇದರ ಪ್ರಾಂಶುಪಾಲೆ ಹೇಮಲತಾ ಎನ್., ಚಿಗುರೆಲೆ ಸಾಹಿತ್ಯ ಬಳಗದ ಸ್ಥಾಪಕಾಧ್ಯಕ್ಷ ಚಂದ್ರ ಮೌಳಿ ಕಡಂದೇಲು ಸಂದರ್ಭೋಚಿತವಾಗಿ ಶುಭಹಾರೈಸಿದರು. ನಾರಾಯಣ ಕುಂಬ್ರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪೊಲೀಸ್ ಅಧಿಕಾರಿ ಹಾಗೂ ಸಾಹಿತಿಗಳಾದ ಶ್ರೀ ಹರೀಶ್ ಮಂಜೊಟ್ಟಿ, ಕೆ. ಪಿ. ಎಸ್. ಕೆಯ್ಯೂರು ಇದರ ಮುಖ್ಯಗುರು ಬಾಬು ಎಂ., ಶ್ರೀ ಸುದರ್ಶನ್ ಮುರ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಕಪ್ಪತ್ತಗಿರಿ ಸಾಹಿತ್ಯ, ಕಲಾ ಮತ್ತು ಸಾಂಸ್ಕೃತಿಕ ವೇದಿಕೆ ಗದಗ ಜಿಲ್ಲಾ ಸ್ಥಾಪಕಾಧ್ಯಕ್ಷೆ ಚಂದ್ರಕಲಾ ಎಂ. ಇಟಗಿ ಮಠ ಇವರು ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಅಧ್ಯಕ್ಷೀಯ ನುಡಿಗಳನ್ನಾಡಿದ ಇವರು “ಕನ್ನಡ ಶ್ರೀಮಂತ ಭಾಷೆಯಾಗಿದೆ. ಕನ್ನಡ ಭಾಷಾ ಸಾಹಿತ್ಯದಿಂದ ಪರಸ್ಪರ ಬಾಂಧವ್ಯ ಬೆಳೆಸಲು ಸಾಧ್ಯವಾಗುತ್ತಿದೆ. ಕನ್ನಡ ಭಾಷೆ ಸಮೃದ್ಧವಾಗಿ ಬೆಳೆಯಲು ಸಾಹಿತ್ಯ ಗೋಷ್ಠಿ, ಕಮ್ಮಟಗಳಿಂದ ಮಾತ್ರ ಸಾಧ್ಯವಾಗಿದೆ” ಎಂದರು.
‘ಮಧು ಪ್ರಪಂಚ’ ಪತ್ರಿಕೆಯ ಸಂಪಾದಕ ಮತ್ತು ಹಿರಿಯ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ ಮಾತನಾಡಿ, ಕವಿತೆಗಳು ಕವಿಗಳು ಅನುಭವಿಸಿದ ಅವರ ಭಾವನೆಗಳನ್ನು ವ್ಯಕ್ತಪಡಿಸುತ್ತವೆ. ಉದಯೋನ್ಮುಖ ಕವಿಗಳಿಗೆ ನಾವು ಹೆಚ್ಚಿನ ಅವಕಾಶ ಒದಗಿಸಿಕೊಡಬೇಕು” ಎಂದು ಅಭಿಪ್ರಾಯಪಟ್ಟರು.
ಕವಿಗೋಷ್ಠಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಮರ್ಥ ಕೈಂತಜೆ, ಸುನೀತಾ ಶ್ರೀರಾಮ್ ಕೊಯಿಲ, ಶ್ರೀಕಲಾ ಕಾರಂತ್ ಅಳಿಕೆ, ಶಿರ್ಷಿತಾ ಕಾರಂತ್ ಅಳಿಕೆ, ನಾರಾಯಣ ನಾಯ್ಕ್ ಕುದ್ಕೊಳಿ, ಧನ್ವಿತಾ ಕಾರಂತ್ ಅಳಿಕೆ, ಗಿರೀಶ್ ಪೆರಿಯಡ್ಕ, ಅಕ್ಷತಾ ನಾಗನಕಜೆ, ತಸ್ಮಯ್ ಪಂಚೋಡಿ, ತನ್ಮಯಾ ಪಂಚೋಡಿ, ಜಯರಾಮ್ ಪಡ್ರೆ, ಸಾನಿಧ್ಯ ಮಾರನಹಳ್ಳಿ, ಕು.ಶ್ರೇಯ ಶೆಟ್ಟಿ, ಮಣಿ ಮುಂಡಾಜೆ, ವೈಶಾಲಿ ಬೆಳ್ಳಿಪ್ಪಾಡಿ, ಶೇಖರ ಎಂ. ದೇಲಂಪಾಡಿ, ಸವಿತ ಕರ್ಕೇರ ಕಾವೂರು, ಪ್ರಿಯಾ ಸುಳ್ಯ, ಸಂಗೀತ ಜಿ. ಎಸ್. ಕೂಡ್ಲು, ಶ್ವೇತಾ ಡಿ. ಬಡಗ ಬೆಳ್ಳೂರು, ಸಂಧ್ಯಾ ಜಿ. ಕೆ. ಕುಂಬ್ರ, ಆತ್ಮಿಕಾ ಏಮಾಜೆ, ಲೇಖನ ಏಮಾಜೆ, ಮುಸ್ತಫಾ ಎಂ. ಎ. ಬೆಳ್ಳಾರೆ, ಸೌಜನ್ಯ ಬಿ. ಎಂ. ಕೆಯ್ಯೂರು, ದಿವ್ಯ ಪಿ. ರೈ ಪೆರುವಾಜೆ, ಮಹಮ್ಮದ್ ಜುಬೈರ್, ಅಬೂಬಕ್ಕರ್ ಮುಝಮ್ಮಿಲ್, ಪ್ರತೀಕ್ಷಾ ಎಂ. ಜೆ., ಮಲ್ಲಿಕಾ ಎಸ್. ಆಳ್ವ ಬೆಳ್ಳಿಪ್ಪಾಡಿ, ರೋಹಿಣಿ ಆಚಾರ್ಯ ನೆಹರುನಗರ, ಸೌಮ್ಯ ಕುದ್ರೋಳಿ, ಶಿವಲೀಲಾ ಎಸ್ ಧನ್ನಾ ಕಲ್ಬುರ್ಗಿ, ಮಹಾಂತೇಶ್ ಬೇರಗಣ್ಣವರ, ಕೀರ್ತನ, ಮನೋಜ್ ಎಂ., ಆದಿತ್ಯ, ಆನಂದ ರೈ ಅಡ್ಕಸ್ಥಳ, ಅನ್ನಪೂರ್ಣ ಎನ್.ಕೆ., ಶಶಿಕಲಾ ಮೋಹನ್ ಕುಂಬ್ರ, ಸುಂದರ ಪಿ., ಪ್ರಕೃತಿ ಏಮಾಜೆ, ಚಂದ್ರಾವತಿ ರೈ ಪಾಲ್ತಾಡಿ, ಪ್ರತೀಕ್ಷಾ ಐತಾಳ್ ತಂಟೆಕ್ಕು, ಚೈತನ್ಯ ರೈ, ಉಮೇಶ್ ಕಾರಂತ್ ಮಂಗಳೂರು, ಶ್ರುತಿಕಾ ಓಜಾಲ, ಪವಿತ್ರ ಎಂ. ಬೆಳ್ಳಿಪ್ಪಾಡಿ ಸಹಿತ ಸುಮಾರು 52 ಕವಿಗಳು ಭಾಗವಹಿಸಿದ್ದು, ಬಳಿಕ ನಡೆದ ಅದೃಷ್ಟವಂತ ಕವಿ ಆಯ್ಕೆ ಪ್ರಕ್ರಿಯೆಯಲ್ಲಿ ಕಲಾವಿದ ಕೃಷ್ಣಪ್ಪ ರವರ ಮೂಲಕ ಮಾ. ತನ್ಮಯ್ ಪಂಚೋಡಿರವರು ‘ಮುಂಗಾರು ಕವಿಗೋಷ್ಠಿ 2025’ರ ಅದೃಷ್ಟವಂತ ಕವಿಯಾಗಿ ಆಯ್ಕೆಗೊಂಡರು.
ಗಿರೀಶ್ ಕೊಯಿಲ, ಸುನೀತಾ ಎನ್., ಸೌಜನ್ಯ ಬಿ. ಎಂ. ಕೆಯ್ಯೂರು ಹಾಗೂ ಶ್ರೀಕಲಾ ಕಾರಂತ್ ಅಳಿಕೆ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ಪ್ರಗತಿ ಸ್ಟಡಿ ಸೆಂಟರ್ ಇದರ ವಿದ್ಯಾರ್ಥಿಗಳು ಸಹಕರಿಸಿದರು.
ಕು. ಕೀರ್ತನ ಇವರು ಪ್ರಾರ್ಥಿಸಿ, ಪ್ರಗತಿ ಸ್ಟಡಿ ಸೆಂಟರ್ ಇದರ ಮುಖ್ಯೋಪಾಧ್ಯಾಯಿನಿ ಪ್ರಮೀಳ ಎನ್. ಡಿ. ಸ್ವಾಗತಿಸಿ, ಪ್ರಿಯಾ ಸುಳ್ಯ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು.