ವಿಜಯಪುರ : ಕನ್ನಡ ಕೀರ್ತನೆಗಳ ಹರಿಕಾರ ವ್ಯಾಸರಾಯರ ಆರಾಧನೆ ಸಂಗೀತ ಗಮಕೋತ್ಸವ ಸಮಾರಂಭವು ದಿನಾಂಕ 07 ಮಾರ್ಚ್ 2026ರ ಶನಿವಾರದಂದು ಗುಜ್ಜರಗಲ್ಲಿಯ ‘ಶ್ರೀ ಗುರುವಿಠಲ ಕೃಪಾ’ ಭವನದಲ್ಲಿ ಜರುಗಿತು. ಶ್ರೀ ಕುಮಾರವ್ಯಾಸ ವೇದಿಕೆಯ ಅಧ್ಯಕ್ಷರಾದ ಗಮಕಿ ಶ್ರೀಮತಿ ಶಾಂತಾ ಕೌತಾಳ ಹಾಗೂ ಕಲ್ಯಾಣರಾವ್ ದೇಶಪಾಂಡೆ ಇವರುಗಳು ಕಾರ್ಯಕ್ರಮ ಆಯೋಜಿಸಿದ್ದರು.
ವಿಜಯಪುರ ಜಿಲ್ಲೆಯ ಹೆಗಡಿಹಾಳದ ಸರಕಾರಿ ಹೈಸ್ಕೂಲ ಶಿಕ್ಷಕರಾದ ಶ್ರೀ ಶ್ರೀರಾಮ್ ಭಟ್ ಇವರುಗಳು ದೀಪ ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿ, ತಮ್ಮ ಉದ್ಘಾಟನಾ ಪರ ಭಾಷಣದಲ್ಲಿ “ವ್ಯಾಸರಾಯರು ಕನ್ನಡ ಕೀರ್ತನೆಗಳ ಹರಿಕಾರರು. ಕನ್ನಡ ಭಾಷೆಯಲ್ಲಿ ಕೀರ್ತನೆ ಮಾಡಿದರೆ ದೇವರು ಕೇಳುವುದಿಲ್ಲವೆ? ಎಂದು ಪ್ರಶ್ನಿಸಿ ತಮ್ಮ ಶಿಷ್ಯರಾದ ಶ್ರೀ ಪುರಂದರದಾಸರು ಹಾಗೂ ಕನಕದಾಸರಿಗೆ ಕನ್ನಡದಲ್ಲಿ ಕೀರ್ತನೆಗಳನ್ನು ಬರೆಯಲು ಉತ್ತೇಜಿಸಿದರು. ಹಂಪೆಯಲ್ಲಿದ್ದು ಶ್ರೀ ವ್ಯಾಸರಾಯರು, ಶ್ರೀಕೃಷ್ಣದೇವರಾಯ ಹಾಗೂ ಅಚ್ಯುತದೇವರಾಯರಿಗೆ ರಾಜಕೀಯ ಮಾರ್ಗದರ್ಶನ ಮಾಡಿದರು. ಇವರ ಮಹಿಮೆ ಅಪಾರ” ಎಂದು ಹೇಳಿದರು.
ಆ ಮೇಲೆ ನಡೆದ ಗಮಕ ಕಾರ್ಯಕ್ರಮದಲ್ಲಿ ಕುಮಾರವ್ಯಾಸ ವಿರಚಿತ ಗದುಗಿನ ಭಾರತದ ವಿರಾಟ ಪರ್ವದ ‘ಧರ್ಮರಾಜನು ವಿರಾಟನ ಅರಮನೆಯಲ್ಲಿ ಗಾಯವಡೆದ ಪ್ರಸಂಗ’ದ ಗಮಕ ವಾಚನ ವ್ಯಾಖ್ಯಾನ ಜರುಗಿತು. ಖ್ಯಾತ ಗಮಕಿ ಶ್ರೀಮತಿ ಶಾಂತಾ ಕೌತಾಳ್ ಹಾಗೂ ಕಲ್ಯಾಣರಾವ್ ದೇಶಪಾಂಡೆ ಇವರು ಗಮಕ ಕಾರ್ಯಕ್ರಮ ನಡೆಸಿಕೊಟ್ಟರು. ಪಾಂಡವರು ಬೇರೆ ಬೇರೆ ವೇಷದಲ್ಲಿ ವಿರಾಟನ ಅರಮನೆಗೆ ಬಂದು ಸೇವೆಗೆ ಸೇರಿಕೊಂಡ ರೀತಿ, ಉತ್ತರ ಗೋಗ್ರಹಣದಲ್ಲಿ ಬೃಹನ್ನಳೆಯ (ಅರ್ಜುನನ) ವಿಜಯ, ವಿರಾಟನು ಧರ್ಮರಾಯನಿಗೆ ಬಂಗಾರದ ಪಗಡೆಯಿಂದ ಎಸೆದು ಗಾಯಗೊಳಿಸಿದ್ದು, ಧರ್ಮರಾಯನು ರಕ್ತವನ್ನು ಬೊಗಸೆಯಲ್ಲಿ ಹಿಡಿದಿದ್ದು, ಸೈರಂಧ್ರಿ ವೇಷದ ದ್ರೌಪದಿ ಅದನ್ನು ತನ್ನ ಸೀರೆಯ ಸೆರಗಿನಿಂದ ತೋಯಿಸಿದ್ದು ಮುಂತಾದ ಕಥಾ ದೃಶ್ಯಗಳು ಕೇಳುಗರನ್ನು ಮಹಾಭಾರತ ಲೋಕಕ್ಕೆ ಕರೆದೊಯ್ದವು.

ನಂತರ ನಡೆದ ಭಕ್ತಿ ಸಂಗೀತ ಕಾರ್ಯಕ್ರಮದಲ್ಲಿ ವ್ಯಾಸರಾಯರ ಹಾಗೂ ಇತರ ದಾಸರ ಕೀರ್ತನೆಗಳು ಸುಶ್ರಾವ್ಯವಾಗಿ ಹೊರಹೊಮ್ಮಿದವು. ಯುವ ಪ್ರತಿಭೆ ಕುಮಾರಿ ಸುನಯನಾ ದೇಶಪಾಂಡೆ ‘ಮಂತ್ರಾಲಯ ನಿವಾಸ’ ಎಂಬ ಕೀರ್ತನೆಯನ್ನು ಭೂಪ್ ರಾಗದಲ್ಲಿ ಹಾಡಿದರು. ಆಮೇಲೆ ವನಶ್ರೀ ಕುಲಕರ್ಣಿ ಇವರು ಮದಮಾದ ಸಾರಂಗ ರಾಗದಲ್ಲಿ ‘ನಮಃ ಪಾರ್ವತಿ ಪತಿನುತ ಜನಪರ ನಮೋ ವಿರುಪಾಕ್ಷ’ ಎಂಬ ಕೀರ್ತನೆಯನ್ನು ಹಾಡಿದರು. ಖ್ಯಾತ ಸಂಗೀತ ಕಲಾವಿದೆ ಲತಾ ಜಹಗೀರದಾರ್ ಇವರು ‘ಕರೆತಾರೆ ರಂಗನ್ನ’ ಎಂಬ ವ್ಯಾಸರಾಯರ ಕೃತಿಯನ್ನು ಯಮನ್ ರಾಗದಲ್ಲಿ ಹಾಡಿದರು. ಶ್ರೀ ವಿನಾಯಕ್ ಕಟ್ಟಿಯವರು ಭೂಪ್ರಾಗದಲ್ಲಿ ‘ರಂಗಾ ಮನೆಗೆ ಬಾರೋ’ ಹಾಗೂ ಅನುರಾಧಾ ಜಹಗೀರದಾರ್ ಇವರು ‘ವಾಸುದೇವ ಚರಣವನಜ ವಂದಿಪನೆ, ಸನ್ಯಾಸ ರತ್ನಾಕರ ವ್ಯಾಸ ಮುನಿರಾಯ’ ಎಂಬ ಕೀರ್ತನೆಯನ್ನು ಹಾಡಿದರು. ಕೊನೆಗೆ ಶಾಂತಾ ಕೌತಾಳ್ರು ‘ಕೃಷ್ಣ ಕೃಷ್ಣ ಕೃಷ್ಣ ಎಂದು ಮೂರು ಬಾರಿ ನೆನೆಯಿರೊ ಸಂತುಷ್ಟನಾಗಿ ಮುಕುತಿ ಕೊಟ್ಟು ಮಿಕ್ಕ ಭಾರ ಹೊರುವನೋ’ ಎಂಬ ವ್ಯಾಸರಾಯರ ಕೃತಿಯನ್ನು ಭೈರವಿ ರಾಗದಲ್ಲಿ ಹಾಡಿದರು. ಶ್ರೀ ಜಗನ್ನಾಥ ಅಳ್ಳಗಿ ತಬಲಾ ಸಾಥ್ ನೀಡಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ ಶ್ರೀರಾಮ್ ಭಟ್ ಹಾಗೂ ರೂಪಾ ದಂಪತಿಗಳನ್ನು ಕುಮಾರವ್ಯಾಸ ವೇದಿಕೆಯಿಂದ ಶಾಲು ಹೊದಿಸಿ ಮಾಲಾರ್ಪಣೆ ಮಾಡಿ ಸನ್ಮಾನಿಸಲಾಯಿತು. ಸನ್ಮಾನಕ್ಕೆ ಉತ್ತರವಾಗಿ ಶ್ರೀಮತಿ ರೂಪಾ ಇವರು “ಕುಮಾರವ್ಯಾಸ ಭಾರತ ವೇದಿಕೆಯ ಗಮಕ ಕಾರ್ಯಕ್ರಮಗಳು ಧರ್ಮ ಜಾಗೃತಿ ಹಾಗೂ ದೇಶಭಕ್ತಿಯಿಂದ ವಿಶೇಷ ರೀತಿಯಲ್ಲಿ ಕಂಗೊಳಿಸುತ್ತಿವೆ. ಇದು ತುಂಬಾ ಆನಂದದ ವಿಷಯ” ಎಂದು ಹೇಳಿದರು. ಸಮಾರಂಭಕ್ಕೆ ಶ್ರೀ ಮೋಹನ್ ಕೌತಾಳ್, ಲಕ್ಷ್ಮೀ ಕೌತಾಳ್, ಶ್ರೀ ವಿಜಯೀಂದ್ರ ಪಾಟೀಲ್, ಮಂಜುಳಾ, ಪ್ರಮಿಳಾ ದೇಶಪಾಂಡೆ, ಮೀನಾಕ್ಷಿ ಜೋಶಿ, ಪದ್ಮಾ ಕುಲಕರ್ಣಿ, ಶ್ರೀನಿವಾಸ್ ಕುಲಕರ್ಣಿ ಮುಂತಾದವರು ಭಾಗವಹಿಸಿದ್ದರು.
