ಉಡುಪಿ : ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕ, ಅಮ್ಮ ಪ್ರಕಾಶನ ಕಟಪಾಡಿ, ವನಸುಮ ಟ್ರಸ್ಟ್ ಕಟಪಾಡಿ ಹಾಗೂ ವನಸುಮ ವೇದಿಕೆ ಕಟಪಾಡಿ ಆಶ್ರಯದಲ್ಲಿ ಆಯೋಜಿಸಿದ್ದ ರಂಗನಟ ಹಾಗೂ ಚಲನಚಿತ್ರ ನಟ ಬಾಸುಮ ಕೊಡಗು ವಿರಚಿತ “ನಡುರಾತ್ರಿಯ ಸ್ವಾತಂತ್ರ್ಯ’ ಕವನ ಸಂಕಲನದ ಲೋಕಾರ್ಪಣಾ ಸಮಾರಂಭವು ದಿನಾಂಕ 22 ಜೂನ್ 2025ರ ಭಾನುವಾರ ಸಂಜೆ ಉಡುಪಿಯ ಮಥುರಾ ಕಂಫರ್ಟ್ನ ಸಭಾಂಗಣದಲ್ಲಿ ನಡೆಯಿತು.
ಕ. ಸಾ. ಪ. ಉಡುಪಿ ತಾಲೂಕು ಅಧ್ಯಕ್ಷರಾದ ರವಿರಾಜ ಎಚ್.ಪಿ. ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿದ ತುಳು ಕೂಟದ ಸ್ಥಾಪಕ, ಖ್ಯಾತ ವೈದ್ಯ ಡಾ. ಭಾಸ್ಕರಾನಂದ ಮಾತನಾಡಿ “ಹೆಸರಿನಲ್ಲೇ ಸುಮ (ಪರಿಮಳ) ಹೊಂದಿರುವ ವಿಶೇಷ ಸದಭಿರುಚಿಯ ರಂಗನಟ ಬಾಸುಮ ಕೊಡಗು. ಅವರು ಸಾಹಿತ್ಯ, ಕಲೆಯ ಸುಮವನ್ನು ಪಸರಿಸುತ್ತಿದ್ದಾರೆ. ನಾನು ಬರೆದ “ಭೀಷ್ಮನ ಕೊನೆಯ ದಿನಗಳು’ ಎಂಬ ಕೃತಿಯನ್ನು ರಂಗದಲ್ಲಿ ಪ್ರದರ್ಶಿಸಿದ್ದಾರೆ. ಸ್ಪರ್ಧೆಯಲ್ಲಂತೂ ಈ ನಾಟಕ ಯಾವಾಗಲೂ ಪ್ರಥಮ ಬರುತ್ತಿತ್ತು. ಅದಕ್ಕೆ ಕಾರಣ ನನ್ನ ಕೃತಿಯಲ್ಲ, ಬಾಸುಮ ಅವರ ಸಾಹಸ” ಎಂದು ಶ್ಲಾಘಿಸಿದರು.
ಕೃತಿ ಪರಿಚಯ ಮಾಡಿದ ಕನ್ನಡ ಉಪನ್ಯಾಸಕಿ ಡಾ. ನಿಕೇತನ “ಆಕರ್ಷಕ ಶೀರ್ಷಿಕೆಯ ಈ ಕೃತಿಯಲ್ಲಿ 73 ಕವನಗಳಿವೆ. ರಾತ್ರಿಯ ಭಯ, ಬೆಳಕಿನ ಧೈರ್ಯವಿದೆ. ಬೇಡಿ ಮತ್ತು ಬಿಡುಗಡೆಯ ಸಾರವಿದೆ. ಪ್ರೀತಿ, ಪ್ರೇಮ, ಕಾಮ ಸಂಗತಿಗಳೂ ಇವೆ. ಪ್ರಮುಖವಾಗಿ ಸ್ವಾತಂತ್ರ್ಯದ ಕುರಿತಾಗಿ ಹೆಣ್ಣಿನ ತುಡಿತವಿದೆ. ವರ್ತಮಾನದ ಎಲ್ಲ ವಿಷಯವನ್ನು ಒಳಗೊಂಡಿರುವ ವಿಶಿಷ್ಟ ಸಂಕಲನವಿದು” ಎಂದರು. ಉಡುಪಿ ವಿಶ್ವನಾಥ ಶೆಣೈ, ವನಸುಮ ಟ್ರಸ್ಟ್ ಇದರ ಕಾರ್ಯದರ್ಶಿ ವಿನಯ ಆಚಾರ್ಯ ಮುಂಡ್ಕೂರು, ಸಾಹಿತಿ ಹಾಗೂ ಕೃತಿಕಾರ ಬಾಸುಮ ಕೊಡಗು ಉಪಸ್ಥಿತರಿದ್ದರು.
ಕ. ಸಾ. ಪ. ಉಡುಪಿ ತಾಲೂಕು ಇದರ ಗೌರವ ಕಾರ್ಯದರ್ಶಿಗಳಾದ ಜನಾರ್ದನ ಕೊಡವೂರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಪಲ್ಲವಿ ಕೊಡಗು ನಿರೂಪಿಸಿ, ಕಾವ್ಯವಾಣಿ ಕೊಡಗು ವಂದಿಸಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಕಟಪಾಡಿಯ ಗಾನಪಲ್ಲವಿ (ರಿ.) ತಂಡದವರು “ನಡುರಾತ್ರಿಯ ಸ್ವಾತಂತ್ರ್ಯ’ ಕೃತಿಯ ಕವನಗಳನ್ನು ಸುಶ್ರಾವ್ಯವಾಗಿ ಹಾಡಿದರು.
Subscribe to Updates
Get the latest creative news from FooBar about art, design and business.
Next Article ‘ಬನ್ನಂಜೆ 90 – ಉಡುಪಿ ನಮನ’ ಕಾರ್ಯಕ್ರಮದ ಪೂರ್ವಭಾವಿ ಸಭೆ